ಯಡಿಯೂರಪ್ಪ ಬಂದ್ರೆ ಬರಲಿ,ಬಲವಂತವಿಲ್ಲ

ಈ ಬಾರಿ ಅಸೆಂಬ್ಲಿ ಚುನಾವಣೆಯಲ್ಲಿ ಬಿಎಸ್ ಯಡಿಯೂರಪ್ಪ ಅವರಿಲ್ಲದ ಕಾರಣಕ್ಕೆ ಬಿಜೆಪಿ ಸೋತಿದೆ ಎನ್ನುವ ಮಾತನ್ನು ಭಾಗಶಃ ಒಪ್ಪಿಕೊಳ್ಳಬಹುದಾದರೂ ಈ ಹಿಂದೆಯೂ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಿದಾಗ ಬಿಜೆಪಿ ಸೋತ ಉದಾಹರಣೆಗಳಿವೆ. ಬಳ್ಳಾರಿಯಲ್ಲಿ ಏನು ಆಯಿತು ಎಂಬುದು ಎಲ್ಲರಿಗೂ ಗೊತ್ತಿದೆ.
ಆದ್ದರಿಂದ ಯಡಿಯೂರಪ್ಪ ಪಕ್ಷ ತೊರೆದಿದ್ದರಿಂದಲೇ ಬಿಜೆಪಿಗೆ ಸೋಲಾಯಿತು ಎನ್ನುವ ಸಂಗತಿ ಅಷ್ಟು ಮಹತ್ವ ಪಡೆದುಕೊಳ್ಳುವುದಿಲ್ಲ. ಕೆಜೆಪಿಯೊಂದಿಗೆ ಗುರುತಿಸಿಕೊಂಡ ಬಿಜೆಪಿಯ ಒಬ್ಬರೇ ಶಾಸಕರೂ ವಿಧಾನಸಭೆ ಚುನಾವಣೆಯಲ್ಲಿ ಜಯ ಸಾಧಿಸಿಲ್ಲ ಎಂದು ಸಿಟಿ ರವಿ ಹೇಳಿದರು.
ಯಡಿಯೂರಪ್ಪ ಅವರು ಬಿಜೆಪಿ ಕಟ್ಟಿದರು ನಿಜ ಆದರೆ, ಬಿಜೆಪಿ ಕಾರ್ಯಕರ್ತರ ಪಕ್ಷ ಇಲ್ಲಿ ಎಲ್ಲರಿಗೂ ಸಮಾನ ಅವಕಾಶ ಇರುತ್ತದೆ. ಅದಕ್ಕೆ ಸೂಕ್ತ ಕಾಲಾವಕಾಶವೂ ನೀಡಲಾಗುತ್ತದೆ ಎಂದರು.
ಕೆಜೆಪಿ ಅಧ್ಯಕ್ಷರಾಗಿರುವ ಬಿಎಸ್ ಯಡಿಯೂರಪ್ಪ ಅವರಿದ್ದರೆ ಆನೆ ಬಲ ಇದ್ದಂತೆ ಅವರನ್ನು ಮತ್ತೆ ಬಿಜೆಪಿಗೆ ಕರೆಸಿಕೊಂಡರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು ಎಂದು ಬಿಜೆಪಿ ವಕ್ತಾರ ಗೋ ಮಧುಸೂದನ್ ಅವರು ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದ ಬಗ್ಗೆ ರವಿ ವಿಷಾದ ವ್ಯಕ್ತಪಡಿಸಿದರು.
ಒತ್ತಡ, ಬಲವಂತದಿಂದ ಯಾರನ್ನು ಕರೆ ತರಲು ಸಾಧ್ಯವಿಲ್ಲ. ಬಿಜೆಪಿಯಲ್ಲಿ ಎಲ್ಲರಿಗೂ ಅಭಿಪ್ರಾಯ ಮಂಡನೆಗೆ ಅವಕಾಶ ಇರುತ್ತದೆ. ಅದರಂತೆ ಮಧುಸೂದನ್ ಅವರ ನಡೆಯನ್ನು ಒಪ್ಪಿಕೊಳ್ಳಬಹುದಾದರೂ ಅನುಸರಿಸಿದ ಮಾರ್ಗ ಸರಿಯಲ್ಲ. ರಾಜ್ಯ ನಾಯಕರ ಗಮನಕ್ಕೆ ಬಾರದೆ ಪತ್ರ ಕಳಿಸುವುದು ಸರಿಯಲ್ಲ್ ಎಂದು ರವಿ ಅಭಿಪ್ರಾಯಪಟ್ಟರು.
ಮಧುಸೂದನ್ ಅವರ ಮೇಲೆ ಕ್ರಮ ಜರುಗಿಸುವುದರ ಬಗ್ಗೆ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಅವರು ನಿರ್ಧರಿಸುತ್ತಾರೆ. ಅವರ ನಿರ್ಧಾರಕ್ಕೆ ನಾವು ಬದ್ಧ ಎಂದು ರವಿ ಹೇಳಿದರು.












Click it and Unblock the Notifications