ಬಿಎಸ್ವೈ ಪರ ಪತ್ರ 'ಮಧು'ಸೂದ್ ನ್ ಗೆ ಕಹಿ
ಬೆಂಗಳೂರು, ಜೂ.9: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಬಿಜೆಪಿಗೆ ಮರಳಿ ಕರೆ ತರುವ ವಿಷಯ ಈಗ ತಣ್ಣಗಾಗಿದೆ. ಕೆಜೆಪಿ ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಯಡಿಯೂರಪ್ಪ ಅವರಿಗೆ ರೆಡ್ ಕಾರ್ಪೆಟ್ ಹಾಸಲು ಮುಂದಾಗಿದ್ದ ಮಧುಸೂದನ್ ಅವರಿಗೆ ಹೊಸ ಪೀಕಲಾಟ ಆರಂಭವಾಗಿದೆ.
ಕೆಜೆಪಿ ಅಧ್ಯಕ್ಷರಾಗಿರುವ ಬಿಎಸ್ ಯಡಿಯೂರಪ್ಪ ಅವರಿದ್ದರೆ ಆನೆ ಬಲ ಇದ್ದಂತೆ ಅವರನ್ನು ಮತ್ತೆ ಬಿಜೆಪಿಗೆ ಕರೆಸಿಕೊಂಡರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು ಎಂದು ಬಿಜೆಪಿ ವಕ್ತಾರ ಗೋ ಮಧುಸೂದನ್ ಅವರು ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು.
ಈ ಪತ್ರ ವ್ಯವಹಾರದ ಬಗ್ಗೆ ತಿಳಿದ ಕರ್ನಾಟಕ ಬಿಜೆಪಿ ಅಧ್ಯಕ್ಷ ಪ್ರಹ್ಲಾದ ಜೋಶಿ ಕೆಂಡಾಮಂಡಲವಾಗಿದ್ದಾರೆ. ಎಂಎಲ್ ಸಿ ಮಧುಸೂದನ್ ಅವರನ್ನು ವಕ್ತಾರರ ಸ್ಥಾನಕ್ಕೇರಿಸಿ ಉತ್ತಮ ಪೀಠ ನೀಡಿದ್ದಕ್ಕೆ ಈ ರೀತಿ ಮಾತನಾಡುವುದೇ? ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಆರೆಸ್ಸೆಸ್ ಹಿನ್ನೆಲೆಯುಳ್ಳ ಮಧುಸೂದನ್ ಅವರ ಮೇಲೆ ಶಿಸ್ತುಕ್ರಮ ಜರುಗಿಸಲಾಗುವುದು. ಅವರ ವೈಯಕ್ತಿಕ ಅಭಿಪ್ರಾಯ ಏನೇ ಇರಲಿ. ಯಡಿಯೂರಪ್ಪ ಅವರನ್ನು ಕರೆಸಿಕೊಳ್ಳದಿದ್ದರೆ ಬಿಜೆಪಿ ಅಸ್ತಿತ್ವವೇ ಮುಳುಗಡೆಯಾಗಲಿದೆ ಎಂದಿರುವುದು ಅಕ್ಷಮ್ಯ ಎಂದು ಜೋಶಿ ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರೀಯ ಪ್ರಧಾನಿ ಕಾರ್ಯದರ್ಶಿ ಅನಂತಕುಮಾರ್ ಬಣದ ಹುಬ್ಬಳ್ಳಿ-ಧಾರವಾಡ ಲೋಕಸಭಾ ಕ್ಷೇತ್ರದ ಪ್ರತಿನಿಧಿ ಪ್ರಹ್ಲಾದ್ ಜೋಶಿ ಅವರು ಸಹಜವಾಗಿ ಯಡಿಯೂರಪ್ಪ ಅವರ ಸೇರ್ಪಡೆಯನ್ನು ವಿರೋಧಿಸಿದ್ದಾರೆ. ಭ್ರಷ್ಟಾಚಾರಿಗಳಿಗೆ ಬಿಜೆಪಿಯಲ್ಲಿ ಸ್ಥಾನವಿಲ್ಲ ಎಂದು ಮೊದಲಿನಿಂದಲೂ ಪ್ರತಿಪಾದಿಸಿದ್ದಾರೆ.
ಇತ್ತೀಚೆಗೆ ಹುಟ್ಟುಕೊಂಡ 'ಯಡಿಯೂರಪ್ಪ ಮರಳಿ ಗೂಡಿಗೆ' ಮಂತ್ರಕ್ಕೆ ಕಡಿವಾಣ ಹಾಕಲು ಎಲ್ಲಾ ರೀತಿಯಿಂದ ಪ್ರಯತ್ನಿಸುತ್ತಿದ್ದಾರೆ. ಮಧುಸೂದನ್ ಅವರ ಪತ್ರದ ಬಗ್ಗೆ ಪದಾಧಿಕಾರಿಗಳ ಸಭೆಯಲ್ಲಿ ಜೋಶಿ ಅವರು ವಿಷಾದ ವ್ಯಕ್ತ ಪಡಿಸಿದ್ದಾರೆ.
ಪಕ್ಷದ ವಿರುದ್ಧ ಹೋಗುವುದು ಪಕ್ಷ ವಿರೋಧಿ ಚಟುವಟಿಕೆಯಾಗುತ್ತದೆ. ರಾಜ್ಯ ನಾಯಕರ ಜೊತೆ ಚರ್ಚಿಸದೆ ರಾಷ್ಟ್ರ ನಾಯಕರಿಗೆ ಪತ್ರ ಬರೆಯುವುದು ಅನವಶ್ಯ. ಮಧುಸೂದನ್ ಅವರ ಮೇಲೆ ಕ್ರಮ ಜರುಗಿಸಲು ಶಿಸ್ತು ಸಮಿತಿ ನೇಮಕವಾಗಿದೆ. ಪತ್ರದ ಬಗ್ಗೆ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು ಎಂದರು.
ಯಡಿಯೂರಪ್ಪ ಸ್ಪಷ್ಟನೆ: "ತೃತೀಯ ರಂಗದ ಜೊತೆ ಕೈಜೋಡಿಸೋಣ ಆದರೆ, ಮತ್ತೊಮ್ಮೆ ಬಿಜೆಪಿಗೆ ಮರಳುವ ಪ್ರಶ್ನೆಯೇ ಇಲ್ಲ". ಇಂತಹದ್ದೊಂದು ಕಠಿಣ ನಿರ್ಧಾರವನ್ನು ಶುಕ್ರವಾರ ನಡೆದ ಕೆಜೆಪಿ ಕೋರ್ ಕಮಿಟಿ ಸಭೆಯಲ್ಲಿ ಹೇಳಿದ್ದರು.
ಪ್ರತಿ ಜಿಲ್ಲೆಯಲ್ಲೂ ಪಕ್ಷದ ಸಮಾವೇಶ ಆಯೋಜಿಸಿ ಪಕ್ಷ ಸಂಘಟನೆ ಮಾಡುವುದು. ವಿವಿಧ ನಾಯಕರು ರಾಜ್ಯ ಪ್ರವಾಸ ಮಾಡಿ, ಕಾರ್ಯಕರ್ತರೊಂದಿಗೆ ಚರ್ಚಿಸಿ, ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸುವುದು.
ಪಕ್ಷದ ಪದಾಧಿಕಾರಿಗಳನ್ನು ಮರು ನೇಮಕ ಮಾಡುವುದು. ಪ್ರತಿ ತಾಲೂಕಿನಲ್ಲೂ ಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಯಡಿಯೂರಪ್ಪ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications