ಅಟಲ್, ಅಡ್ವಾಣಿಯಂಥವರು ನಿವೃತ್ತರಾಗಲು ಸುಸಮಯ
ಬೆಂಗಳೂರು, ಜೂ. 7 : ಹಳೆ ನೀರು ಹರಿದು, ಹೊಸ ನೀರಿಗೆ ಜಾಗ ಬಿಟ್ಟುಕೊಡಬೇಕೆ? ಹಳೆ ತಲೆಗಳು ತೆರೆಮರೆಗೆ ಸರಿದು, ಯುವಪೀಳಿಗೆಗೆ ಅಂಕಣ ಬಿಟ್ಟುಕೊಡಬೇಕೆ? ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ, ಗೋವಾದಲ್ಲಿ ನಡೆಯುತ್ತಿರುವ ಎರಡು ದಿನಗಳ ಕಾರ್ಯಕಾರಣಿ ಸಭೆಯಲ್ಲಿ ಭಾರತೀಯ ಜನತಾ ಪಕ್ಷ ತನ್ನನ್ನು ತಾನೇ ಈ ಪ್ರಶ್ನೆಯನ್ನು ಕೇಳಿಕೊಳ್ಳಬೇಕಿದೆ.
ಲೋಕಸಭೆ ಚುನಾವಣೆಯಲ್ಲಿ ಯಾರು ಬಿಜೆಪಿಯನ್ನು ಮುನ್ನಡೆಸಲಿದ್ದಾರೆ? ಯುವಜನತೆಯ ನಾಯಕರಾಗಿರುವ ಗುಜರಾತ್ ಮುಖ್ಯಮಂತ್ರಿಗೆ ನೀಡಬೇಕೋ, ಅಪಾರ ಅನುಭವವಿರುವ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ನೀಡಬೇಕೊ ಎಂಬ ಬಗ್ಗೆ ಈ ಕಾರ್ಯಕಾರಣಿ ಸಭೆಯಲ್ಲಿ ನಿರ್ಧಾರವಾಗುವ ಸಾಧ್ಯತೆಯಿದೆ. ಇಬ್ಬರೂ ನಾಯಕರ ಬಗ್ಗೆ ಒಲವಿರುವುದು ಬಿಜೆಪಿ ಭಾರೀ ತಲೆನೋವು ತಂದಿದೆ.

ಸಂಸದೀಯ ಮಂಡಳಿಯಲ್ಲಿ ಇನ್ನೂ ಸ್ಥಾನ ಪಡೆದಿರುವ ಮಾಜಿ ಪ್ರಧಾನಿ 88 ವರ್ಷ ವಯಸ್ಸಿನ ಅಟಲ್ ಬಿಹಾರಿ ವಾಜಪೇಯಿ ಮತ್ತು ಮೋದಿ ಅವರಿಗೆ ಪ್ರಧಾನಿ ಹುದ್ದೆ ಸ್ಪರ್ಧಿಯಾಗಿರುವ 85 ವರ್ಷ ವಯಸ್ಸಿನ ಎಲ್ ಕೆ ಅಡ್ವಾಣಿ ಅವರು ಸಕ್ರೀಯ ರಾಜಕೀಯದಿಂದ ನಿವೃತ್ತರಾಗಲು ಇದಕ್ಕಿಂತ ಉತ್ತಮವಾದ ಸಮಯವಿಲ್ಲ. 79 ವರ್ಷದ ಮುರಳಿ ಮನೋಹರ ಜೋಶಿ ಕೂಡ ನಿವೃತ್ತಿ ಘೋಷಿಸಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಅಂಥವರಿಗೆ ದಾರಿ ಮಾಡಿಕೊಡಲಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಈ ಸಂದರ್ಭದಲ್ಲಿ, 2014ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಗಟ್ಟಿ ನಿಲುವನ್ನು ತಾಳಲೇಬೇಕಿದೆ. ಪ್ರಧಾನಿ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ದ್ವಂದ್ವ ನಿಲುವು ತಳೆದಿರುವುದರಿಂದ ಭಾರೀ ಟೀಕೆಗೆ ಗುರಿಯಾಗುತ್ತಿದೆ. ಪಕ್ಷದಲ್ಲಿಯೇ ಹಲವಾರು ಸದಸ್ಯರು ನರೇಂದ್ರ ಮೋದಿ ಅವರನ್ನು ಬೆಂಬಲಿಸುತ್ತಿದ್ದರೆ, ಒಂದು ಪಡೆ ಅಡ್ವಾಣಿ ಅವರ ಬೆಂಬಲಕ್ಕೆ ನಿಂತಿದೆ. ಇದರಿಂದ ನಷ್ಟ ಅನುಭವಿಸುತ್ತಿರುವುದು ಬಿಜೆಪಿ ಪಕ್ಷವೇ. ಕೆಲ ಮಾಧ್ಯಮಗಳು ನಡೆಸಿರುವ ಸಮೀಕ್ಷೆಗಳು ಕೂಡ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿಯಾದರೆ ಬಿಜೆಪಿ ಜಯಭೇರಿ ಖಚಿತ ಎಂದು ಹೇಳಿವೆ.
ಬಿಜೆಪಿಯ ವಕ್ತಾರ ರಾಜೀವ್ ಪ್ರತಾಪ್ ರೂಡಿ ಅವರು, "ಗೋವಾ ಕಾರ್ಯಕಾರಣಿ ಸಭೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರು ಪ್ರಧಾನಿ ಅಭ್ಯರ್ಥಿ ಆಯ್ಕೆಯ ಬಗ್ಗೆ ಸ್ಪಷ್ಟ ನಿಲುವನ್ನು ಪ್ರಕಟಿಸಲಿದ್ದಾರೆ ಎಂಬ ನಿರೀಕ್ಷೆಯಿದೆ. ಗುಜರಾತ್ ಚುನಾವಣೆಯನ್ನು ಮೂರು ಅವಧಿಗೆ ಗೆದ್ದು ನರೇಂದ್ರ ಮೋದಿ ಅವರು ತಮ್ಮ ಜನಪ್ರಿಯತೆ ಮತ್ತು ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಈ ಕುರಿತಂತೆ ಬಿಜೆಪಿಯ ಹಿರಿಯ ನಾಯಕರೊಂದಿಗೆ ಗೋವಾ ಅಧಿವೇಶನಕ್ಕೆ ಬರುವ ಮುನ್ನ ಸಾಕಷ್ಟು ಮಾತುಕತೆ ನಡೆಸಿದ್ದಾರೆ" ಎಂದು ಹೇಳಿರುವುದು ಮುಂದಿನ ನಿರ್ಣಯಗಳಿಗೆ ದಿಕ್ಸೂಚಿಯಾಗಿದೆ.
ನರೇಂದ್ರ ಮೋದಿ ಅವರಿಗೆ ದಾರಿ ಮಾಡಿಕೊಟ್ಟು ಲಾಲ್ ಕೃಷ್ಣ ಅಡ್ವಾಣಿ ಅವರು ಮುತ್ಸದ್ದಿತನ ಮೆರೆಯುತ್ತಾರಾ? ಅಥವಾ ಕೆಲ ಬೆಂಬಲಿಗರ ಆಶಯದಂತೆ ಪ್ರಧಾನಿಯಾಗುವ ತಮ್ಮ ಹಠಕ್ಕೆ ಜೋತುಬೀಳುತ್ತಾರಾ ಎಂಬುದು ಇನ್ನೆರಡು ದಿನಗಳಲ್ಲಿ ಗೊತ್ತಾಗಲಿದೆ. ಅಂದ ಹಾಗೆ, ಅಡ್ವಾಣಿ ಅವರು ಅಸ್ವಸ್ಥರಾಗಿರುವುದರಿಂದ ಕಾರ್ಯಕಾರಣಿಯ ಮೊದಲ ದಿನ ಭಾಗವಹಿಸುತ್ತಿಲ್ಲ. ಎರಡನೇ ದಿನ ಶನಿವಾರ ಭಾಗವಹಿಸುವ ಸಂಭವನೀಯತೆಯಿದೆ.












Click it and Unblock the Notifications