ಬಿಬಿಎಂಪಿಗೆ ಸದ್ಯ ಹೊಸ ಮೇಯರ್ ಬರೋಲ್ಲ

ಗುರುವಾರ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಅವರಿದ್ದ ಏಕ ಸದಸ್ಯ ಪೀಠ, 2012ರಲ್ಲಿ ಮೇಯರ್ ಹಾಗೂ ಉಪಮೇಯರ್ ಹುದ್ದೆಗೆ ಸರ್ಕಾರ ನಿಗದಿ ಮಾಡಿದ್ದ ಮೀಸಲು ಪ್ರಶ್ನಿಸಿ ಲೋಕೇಶ್ ನಾಯಕ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು.
ವಾದ ಆಲಿಸಿದ ನ್ಯಾಯಮೂರ್ತಿಗಳು 2012ನೇ ಅವಧಿಗೆ ಮೇಯರ್ ಹುದ್ದೆಗೆ ಮೀಸಲು ನಿಗದಿ ಮಾಡಿ ಸರಕಾರ 2012ರ ಫೆ.25ರಂದು ಹೊರಡಿಸಿದ್ದ ಆದೇಶವನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಮೇಯರ್ ಆಯ್ಕೆ ಆಗಿ, ಅವರ ಅಧಿಕಾರವಾಧಿಯೂ ಪೂರ್ನಗೊಂಡಿದ್ದರಿಂದ ಅರ್ಜಿ ಊರ್ಜಿತವಲ್ಲ ಎಂದು ವಜಾಗೊಳಿಸಿದರು.
ಹಿಂದಿನ ಆದೇಶ ರದ್ದು : ಗುರುವಾರದ ಹೈಕೋರ್ಟ್ ನೀಡಿದ ಆದೇಶದಿಂದಾಗಿ, ಏ.19ರಂದು ಮೇಯರ್ ಅಥವಾ ಉಪ ಮೇಯರ್ ಹುದ್ದೆಯನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲಿಡದೆ ಬಿಬಿಎಂಪಿ ಚುನಾವಣೆಯನ್ನು ನಡೆಸಬಾರದು ಎಂದು ಹೈಕೋರ್ಟ್ನ ಏಕಸದಸ್ಯಪೀಠ ನೀಡಿದ್ದ ಮಧ್ಯಾಂತರ ಆದೇಶವೂ ರದ್ದಾಗಿದೆ.
ಹೊಸ ಮೀಸಲಾತಿ ಪ್ರಶ್ನಿಸಿ : ಫೆ.8, 2013ರಂದು ರಾಜ್ಯ ಸರ್ಕಾರ 2013ನೇ ಸಾಲಿಗೆ ಮೇಯರ್ ಹುದ್ದೆಯನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟು ಅಧಿಸೂಚನೆ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಹೊಸ ಅರ್ಜಿ ಸಲ್ಲಿಸಬಹದು ಎಂದು ನ್ಯಾಯಾಲಯ ಅರ್ಜಿದಾರರಿಗೆ ಸೂಚಿಸಿದೆ.
ಹೈಕೋರ್ಟ್ ಆದೇಶದಿಂದಾಗಿ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ಮತ್ತಷ್ಟು ವಿಳಂಬವಾಗಲಿದೆ. 2013ರ ಮೀಸಲು ಪ್ರಶ್ನಿಸಿ ಈಗಾಗಲೇ ನ್ಯಾಯಾಲಯದಲ್ಲಿ ಅರ್ಜಿ ದಾಖಲಾಗಿದೆ. ಅದರ ವಿಚಾರಣೆ ಮುಗಿದು, ತೀರ್ಪು ಹೊರಬರುವವರೆಗೆ ಚುನಾವಣೆ ನಡೆಸುವುದು ಅಸಾಧ್ಯ.
ಮೇಯರ್ ಹುದ್ದೆಯ ಮೀಸಲಾತಿ ವಿಷಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ, ಚುನಾವಣೆಗೆ ಅಧಿಸೂಚನೆ ಹೊರಡಿಸಲು ಸಾಧ್ಯವಿಲ್ಲ. ಆದ್ದರಿಂದ ಬಿಬಿಎಂಪಿಗೆ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ವಿಳಂಬವಾಗಲಿದೆ.
ಮೇಯರ್ ಪಟ್ಟ ಕಾಂಗ್ರೆಸ್ ಗೆ : ಸರ್ಕಾರ ಎರಡೂ ಸ್ಥಾನಗಳ ಮೀಸಲಾತಿ ಬದಲಾವಣೆ ಮಾಡಬಹುದು. ಅಥವ ಸಂವಿಧಾನದ ಪ್ರಕಾರ ಎಸ್.ಟಿ.ಗೆ ಮೀಸಲು ನೀಡುವುದಾಗಿ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಬಹುದು. (ಬಿಬಿಎಂಪಿ ಮೇಯರ್ ಸ್ಥಾನ ಕಾಂಗ್ರೆಸ್ ಪಾಲು)
ಎಸ್.ಟಿ ವರ್ಗಕ್ಕೆ ಮೀಸಲಾತಿ ನಿಗದಿಯಾದರೆ, ಮೇಯರ್ ಅಥವಾ ಉಪಮೇಯರ್ ಪಟ್ಟ ಕಾಂಗ್ರೆಸ್ ಕೈ ಸೇರಲಿದೆ. ಕಾಂಗ್ರೆಸ್ಗೆ ದಕ್ಕುವುದು ನಿಶ್ಚಿತ. ಮೇಯರ್ ಡಿ.ವೆಂಕಟೇಶ್ ಮೂರ್ತಿ ಅವರ ಅಧಿಕಾರಾವಧಿ ಏಪ್ರಿಲ್ ನಲ್ಲೇ ಕೊನೆಗೊಂಡಿದೆ. ಅವರು ಉಸ್ತುವಾರಿ ಮೇಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.












Click it and Unblock the Notifications