ಗಾನ ಕೋಗಿಲೆ ಗುಂಡ್ಮಿ ಕಾಳಿಂಗ ನಾವಡ ನೆನಪು

ನಾವಡ ಅವರು ಇಹಲೋಕ ತ್ಯಜಿಸಿ ಸುಮಾರು ಕಾಲು ಶತಮಾನಗಳೇ ಕಳೆದರೂ, ಇಂದಿಗೂ ಅವರ ಭಾಗವತಿಕೆಯನ್ನು ಕೇಳಿದರೆ ಮೈಯೆಲ್ಲಾ ರೋಮಾಂಚಿತವಾಗುತ್ತದೆ. ದಿ.ಜಿ ಆರ್ ಕಾಳಿಂಗ ನಾವಡರು ಜೂನ್ 6, 1958ರಲ್ಲಿ ಶ್ರೀಮತಿ ಪದ್ಮಾವತಿ ಹಾಗೂ ಶ್ರೀ ರಾಮಚಂದ್ರ ನಾವಡರ ಐದನೇ ಪುತ್ರನಾಗಿ ಉಡುಪಿ ಜಿಲ್ಲೆಯ, ಉಡುಪಿ ತಾಲೂಕಿನ ಸಾಲಿಗ್ರಾಮ ಸಮೀಪದ ಗುಂಡ್ಮಿಯಲ್ಲಿ ಜನಿಸಿದರು.
ಕೇವಲ 14-15 ನೇ ವಯಸ್ಸಿನಲ್ಲಿಯೇ ಯಕ್ಷಗಾನ ಭಾಗವತಿಕೆಯ ಸಾರಥ್ಯ ವಹಿಸಿ ಅಸಾಧ್ಯವೆನಿಸುವುದನ್ನು ಸಾಧ್ಯ ಮಾಡಿ ತೋರಿಸಿದ್ದು ಒಂದು ಸರ್ವಕಾಲಿಕ ದಾಖಲೆ. ಜೀವಮಾನವಿಡೀ ಪ್ರಯತ್ನಿಸಿದರೂ ಸಾಧಿಸಲು ಅಸಾಧ್ಯವಾದುದನ್ನು ತಮ್ಮ ವೃತ್ತಿ ಜೀವನದ ಕೇವಲ 15 -16 ವರ್ಷಗಳಲ್ಲಿ ಸಾಧಿಸಿದ ಅಸಾಮಾನ್ಯ ವ್ಯಕ್ತಿ ನಾವಡರು.
ಸಿನೆಮಾ ಹಾಗೂ ಟಿ ವಿ ಮತ್ತಿತರ ಮನೋರಂಜನಾ ಮಾಧ್ಯಮಗಳು ತಮ್ಮ ಜಾಲವನ್ನು ವೇಗವಾಗಿ ಪಸರಿಸುತ್ತಿರುವ ಸಂದರ್ಭದಲ್ಲಿಯೇ, ತಮ್ಮ ಕಂಚಿನ ಕಂಠದಿಂದ ಯಕ್ಷಪ್ರೇಮಿಗಳನ್ನು ಸೂಜಿಗಲ್ಲಿನಂತೆ ಆಕರ್ಷಿಸಿದ್ದಲ್ಲದೆ, ಅವರನ್ನು ಶಾಶ್ವತವಾಗಿ ಹಿಡಿದಿಟ್ಟುಕೊಂಡ ಕೀರ್ತಿ ನಾವಡರದು.
ಇಂದು ಅವರಿರುತ್ತಿದ್ದರೆ ಅವರಿಗೆ 54 ವರ್ಷ ವಯಸ್ಸಾಗಿರುತ್ತಿತ್ತು, ಊಹಿಸಲೂ ಅಸಾಧ್ಯವಾದ 'ಯಕ್ಷ ದಾಖಲೆಗಳನ್ನು' ಅವರು ಮಾಡಿರುತ್ತಿದ್ದರು ಎಂಬುದರಲ್ಲಿ ಸಂಶಯವೇ ಇಲ್ಲ ಹಾಗೂ ನಾವುಡರ ಹೆಸರು ಅಂತರ ರಾಷ್ಟ್ರೀಯ ಮಟ್ಟದಲ್ಲೂ ಮಿಂಚುತ್ತಿರುತ್ತಿತ್ತು. ಆದರೆ ಯಕ್ಷಪ್ರೇಮಿಗಳ ದೌರ್ಭಾಗ್ಯ, ಅವರನ್ನು ನಾವು ಬೇಗ ಕಳೆದುಕೊಳ್ಳುವಂತಾಯಿತು. ತಮ್ಮ ಗಾನದಿಂದ ನಮಗೆಲ್ಲರಿಗೂ ಸಂತೋಷ, ನೆಮ್ಮದಿ, ಮನರಂಜನೆಯನ್ನು ನೀಡಿದ/ನೀಡುತ್ತಿರುವ ಶ್ರೀ ಕಾಳಿಂಗ ನಾವಡರಿಗೆ ನಾವು ಚಿರಋಣಿ.
ಮೇ 27, 1990ನೇ ಇಸವಿಯಲ್ಲಿ ೩೨ರ ಹರೆಯದ ತರುಣ ಗಾನ ಕೋಗಿಲೆಯ ಹಾಡು ಸ್ತಬ್ಧವಾಯಿತು. ರಸ್ತೆ ಅಪಘಾತವೊಂದರಲ್ಲಿ ನಾವಡರು ವಿಧಿವಶರಾದಾಗ ಯಕ್ಷಗಾನಲೋಕದ ಸುವರ್ಣಯುಗವೊಂದು ಅಂತ್ಯವಾಯಿತು. ಯಕ್ಷರಸಿಕರ ಪಾಲಿಗೆ ಬರಸಿಡಿಲೆರಗಿದಂತೆ ಬಂದಪ್ಪಳಿಸಿದ ಈ ದುರಂತವಾರ್ತೆಯನ್ನು ಕೇಳಿ ಕ್ಷಣಾರ್ಧದಲ್ಲಿ ಇಡೀ ಕರಾವಳಿಯ ಕಡಲತೀರವು ಶೋಕಸಾಗರದಲ್ಲಿ ಮುಳುಗಿತು. ಜೀವಮಾನವಿಡೀ ಪ್ರಯತ್ನಿಸಿದರೂ ಸಾಧಿಸಲು ಅಸಾಧ್ಯವಾದುದನ್ನು ಕೆಲವೇ ಕೆಲವು ವರ್ಷಗಳಲ್ಲಿ ಸಾಧಿಸಿ ತೆರಳಿದ "ಕರಾವಳಿಯ ಗಾನಕೋಗಿಲೆ" ಗುಂಡ್ಮಿ ಕಾಳಿಂಗ ನಾವಡರಿಗೆ ನಮನ ಸಲ್ಲಿಸಲು ಫೇಸ್ ಬುಕ್ ಫ್ಯಾನ್ ಪುಟ ನೋಡಿ












Click it and Unblock the Notifications