ಚಿನ್ನದ ಮೇಲೆ ಹೂಡಿಕೆ ಮಾಡದಿರೆ ಚೆನ್ನ: ಚಿದು
ನವದೆಹಲಿ, ಜೂ.6: ವಿತ್ತ ಸಚಿವ ಪಿ ಚಿದಂಬರಂ ಅವರು ನಾಗರೀಕರಿಗೆ ಚಿನ್ನದಂಥ ಕಿವಿಮಾತು ಹೇಳಿದ್ದಾರೆ. ರೀಟೈಲ್ ಗ್ರಾಹಕರಿಗೆ ಚಿನ್ನದ ನಾಣ್ಯ ಮಾರಾಟ ಮಾಡದಂತೆ ಬ್ಯಾಂಕುಗಳಿಗೆ ಆರ್ ಬಿಐ ನಿರ್ದೇಶಿಸಿದೆ. ಅದಂತೆ ಚಿನ್ನದ ಮೇಲಿನ ಹೂಡಿಕೆ ಕನಸನ್ನು ನಾಗರೀಕರು ಕೈ ಬಿಡುವುದು ಒಳ್ಳೆಯದು ಎಂದು ಚಿದು ಹೇಳಿದ್ದಾರೆ.
ವಿತ್ತೀಯ ಕೊರತೆ ಮತ್ತು ಚಾಲ್ತಿ ಖಾತೆ ಕೊರತೆ ತಗ್ಗಿಸುವ ಪ್ರಯತ್ನಗಳೂ ನಿರೀಕ್ಷಿತ ಫಲ ನೀಡಿಲ್ಲ. ಆರ್ಥಿಕ ವೃದ್ಧಿ ದರ ಕೂಡಾ ಇಳಿಮುಖವಾಗಿರುವುದರಿಂದ ಚಿದಂಬರಂ ಅವರು ಆರ್ ಬಿಐ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ಕೇಂದ್ರ ಸರ್ಕಾರ ಚಿನ್ನದ ಮೇಲಿನ ಆಮದು ಸುಂಕವನ್ನು ಶೇ 6 ರಿಂದ ಶೇ 8ಕ್ಕೇರಿಸಿದ ಬೆನ್ನಲ್ಲೇ ಚಿದಂಬರಂ ಈ ರೀತಿ ಹೇಳಿಕೆ ನೀಡಿದ್ದಾರೆ.
ಚಿದಂಬರಂ ಅವರ ಕಿವಿಮಾತು ಸದ್ಯಕ್ಕೆ ಒಪ್ಪಬಹುದಾಗಿದೆ. ಆಮದು ಸುಂಕ ಏರಿಕೆಯಿಂದ ಚಿನ್ನದ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಆರ್ ಬಿಐ ನಿರ್ದೇಶನದಂತೆ ಬ್ಯಾಂಕುಗಳಲ್ಲಿ ಚಿನ್ನದ ನಾಣ್ಯ ಮಾರಾಟ ಸ್ಥಗಿತಗೊಂಡರೆ ಗ್ರಾಹಕರಿಗೆ ಹೂಡಿಕೆ ಹಿಂದೆ ಸರಿಯುವುದೇ ಒಳ್ಳೆಯದು. [ಓದಿ: ಚಿನ್ನ ಆಮದು ಸುಂಕ ಏರಿಕೆ, ಬೆಲೆ ಹೆಚ್ಚಳ ನಿರೀಕ್ಷೆ?]

ಅಖಿಲ ಭಾರತ ಬ್ಯಾಂಕ್ ಒಕ್ಕೂಟ(IBA) ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಚಿದಂಬರಂ ಅವರು ಚಿನ್ನದ ಅಮದು ನಿಯಂತ್ರಣ ಬಗ್ಗೆ ವಿವರಿಸಿದರು. ಕಳೆದ ಆರ್ಥಿಕ ವರ್ಷದಲ್ಲಿ ಸುಮಾರು 70 ಟನ್ ಗಳಷ್ಟು ಚಿನ್ನ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಈ ಬಾರಿ ಮೇ ತಿಂಗಳೊಂದರಲ್ಲೇ ಸುಮಾರು 152 ಟನ್ ಆಮದಾಗಿದ್ದು, ಯುಎಸ್ ಡಾಲರ್ 15 ಬಿಲಿಯನ್ ವಿದೇಶಿ ವಿನಿಮಯಕ್ಕೆ ದಾರಿ ಮಾಡಿಕೊಟ್ಟಿದೆ.
ಸದ್ಯದಲ್ಲೇ ಬ್ಯಾಂಕುಗಳಿಗೆ ಈ ಬಗ್ಗೆ ನಿರ್ದೇಶನ ನೀಡಲಾಗುವುದು ಹಾಗೂ ಬ್ಯಾಂಕುಗಳ ತನ್ನ ಗ್ರಾಹಕರಿಗೆ ಚಿನ್ನದ ನಾಣ್ಯದ ಮೇಲೆ ಹೂಡಿಕೆ ಸದ್ಯಕ್ಕೆ ಏಕೆ ಸಾಧ್ಯವಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಬೇಕಾಗಿದೆ. ಗ್ರಾಹಕರು ಚಿನ್ನದ ಮೇಲೆ ಹೂಡಿಕೆ, ಖರೀದಿಗೆ ಮುಗಿಬೀಳುವುದನ್ನು ತಪ್ಪಿಸುವುದು ಅವಶ್ಯ ಎಂದು ಚಿದಂಬರಂ ಹೇಳಿದರು.
ಚಿನ್ನದ ದರ ಇಳಿಕೆಯಿಂದ ಅನೇಕರು ಸಂತೋಷಗೊಳ್ಳುತ್ತಾರೆ. ಆದರೆ, ವಿತ್ತೀಯಕೊರತೆ ನೀಗಿಸಲು ಚಿನ್ನದ ಆಮದು ಮೇಲೆ ನಿಯಂತ್ರಣ ಸಾಧಿಸಲೇ ಬೇಕಾಗಿದೆ. ವಿತ್ತೀಯ ಕೊರತೆ ಹೆಚ್ಚಿದ್ದಂತೆ ದೇಶದ ವಿದೇಶಿ ವಿನಿಯಮಕ್ಕೆ ಹೊಡೆತ ಬೀಳುತ್ತದೆ. ರುಫಾಯಿ ಮೌಲ್ಯ ವ್ಯತ್ಯಯವಾಗಲಿದೆ ಎಂದು ಚಿದಂಬರಂ ಹೇಳಿದರು.












Click it and Unblock the Notifications