ಸದನಕ್ಕೆ ಇನ್ನೂ ಎಂಟ್ರಿ ಕೊಡದ ಡಿಕೆ ಶಿವಕುಮಾರ್

ಈ ಬಾರಿ ವಿಧಾಸನಭೆಗೆ ಆರಿಸಿಬಂದಿರುವವರ ಪೈಕಿ ಬಹುತೇಕ ಎಲ್ಲರೂ ಶಾಸಕರಾಗಿ ಪೀಠಸ್ಥರಾಗಿದ್ದಾರೆ. ಆದರೆ ಡಿಕೆ ಶಿವಕುಮಾರ್ ಅವರು ಮಾತ್ರ ವಿಧಾನಸೌಧದತ್ತ ತಲೆಹಾಕಿಲ್ಲ.
ಕಾಂಗ್ರೆಸ್ಸಿನ ಹಿರಿಯ ನಾಯಕ, ವರ್ಚಸ್ವೀ ಶಿವಕುಮಾರ್ ಅವರೇಕೆ ಇನ್ನೂ ವಿಧಾನಸೌಧದ ಮೆಟ್ಟಿಲು ಹತ್ತಿಲ್ಲವೆಂದು ಅದರ ಜಾಡು ಹಿಡಿದು ಹೊರಟಾಗ ಮೊದಲಿಗೆ ಎದುರಾಗುವುದು ನಿರಾಶೆ/ಹತಾಶೆ. ಹೌದು, ಶಿವಕುಮಾರ್ ಅವರ ಆಪ್ತ ಮೂಲಗಳ ಪ್ರಕಾರ ಸಾಹೇಬರಿಗೆ ಸಚಿವ ಸ್ಥಾನ ಪ್ರಾಪ್ತಯಾಗಿಲ್ಲವೆಂದು ಶ್ಯಾನೆ ಬೇಜಾರು ಮಾಡಿಕೊಂಡಿದ್ದಾರಂತೆ.
ಅದಕ್ಕಿಂತ ಹೆಚ್ಚಿಗೆ ಮುಖ್ಯಮಂತ್ರಿ ಪಟ್ಟಕ್ಕಾಗಿ ಹೋರಾಡಿದ ಶಿವಕುಮಾರ್ ಕೊನೆಗೂ ಮಂತ್ರಿಯೂ ಆಗಲಿಲ್ಲ ಎಂದು ತಮ್ಮ ಓರಗೆಯವರು ಸದನದಲ್ಲಿ ಕಟಕಿಯಾಡಿದರೆ, ಅದನ್ನು ಸಹಿಸಿಕೊಳ್ಳುವುದೆಂತು ಎಂದೂ ಅವರು ಘಾಸಿಗೊಂಡಿದ್ದಾರಂತೆ. ಅದಕ್ಕಿಂತ ಮುಖ್ಯವಾಗಿ ತಮ್ಮ ಪುರಾತನ ಎದುರಾಳಿ ಕುಮಾರಸ್ವಾಮಿ ಪ್ರತಿಪಕ್ಷ ನಾಯಕನಾಗಿ ಚಾಲ್ತಿಗೆ ಬಂದಿರುವಾಗ ತಾವಿ ಸಾಮಾನ್ಯ ಶಾಸಕರಾಗಿ ಸದನದಲ್ಲಿ ಆಸೀನರಾಗುವುದು ಹೇಗೆ ಎಂಬ ಆತಂಕವೂ ಅವರ ಮನದಲ್ಲಿ ಮನೆಮಾಡಿದೆಯಂತೆ!
ಹಾಗಾಗಿ ಆ ಮುಜುಗುರಗಳನ್ನೆಲ್ಲ ತಪ್ಪಿಸಿಕೊಂಡು ಸೈಲೆಂಟಾಗಿ ಸ್ಪೀಕರ್ ಕೊಠಡಿಗೆ ತೆರಳಿ ಒಬ್ಬರೇ ಪ್ರಮಾಣವಚನ ಸ್ವೀಕರಿಸುವ ಇರಾದೆಯೂ ಶಿವಕುಮಾರ್ ಅವರಿಗಿದೆಯಂತೆ.
ಇದರ ಹೊರತಗಾಗಿ ಸಾಹೇಬರು ಇಂದೋ ಅಥವಾ ನಾಳೆಯೋ ದೆಹಲಿಗೆ ತೆರಳಿ ತಮ್ಮನ್ನು ಮಂತ್ರಿ ಮಾಡಲೇಬೇಕು ಎಂದು ಹೈಕಮಾಂಡ್ ಮೇಲೆ ಮತ್ತೊಮ್ಮೆ ತಮ್ಮ ಹಕ್ಕನ್ನು ಚಲಾಯಿಸುವ ಇರಾದೆಯೂ ಇದೆಯಂತೆ. ಅಲ್ಲಿಂದ ಮಂತ್ರಿಗಿರಿಗೆ ಗ್ರೀನ್ ಸಿಗ್ನಲ್ ಪಡೆದುಕೊಂಡು ಸೀದಾ ವಿಧಾನಸೌಧದೊಳಕ್ಕೆ ಪ್ರವೇಶಿಸುತ್ತಾರಂತೆ.
'ಹೌದು, ಶಾಸಕರಾಗಿ ಶಿವಕುಮಾರ್ ಆಯ್ಕೆಯಾಗುವುದು, ತನ್ಮೂಲಕ ಪಕ್ಷಕ್ಕೆ ಅಗತ್ಯವಾಗಿ ಒಂದು ಸ್ಥಾನ ಗಳಿಸಿಕೊಡುವುದು ಕಾಂಗ್ರೆಸ್ ಪಕ್ಷಕ್ಕೆ ಸಮ್ಮತವಾಗಿರುವಾಗ ಅವರಿಗೆ ಸಚಿವಗಿರಿ ಬೇಡವೆಂದರೆ ಹೇಗೆ? ಒಂದು ವೇಳೆ ದೂರುದಾರರು ಹೇಳುವಂತೆ ಶಿವಕುಮಾರ್ ಅವರು ಕಳಂಕಿತರೇ ಆಗಿದ್ದರೆ ಅವರನ್ನು ಚುನಾವಣೆಗೇ ನಿಲ್ಲಿಸಬಾರದಿತ್ತು' ಎಂದು ಡಿಕೆಶಿ ಅವರ ಕಟ್ಟರ್ ಅಭಿಮಾನಿ ಅಲವತ್ತುಕೊಂಡಿದ್ದಾರೆ.












Click it and Unblock the Notifications