ಯಡಿಯೂರಪ್ಪ ಬಿಜೆಪಿಗೆ ವಾಪಸಾಗ್ತಾರೆ, ಇಲ್ಲ!

ಈ ಮಧ್ಯೆ, ಸ್ವತಃ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು ಬಿಜೆಪಿಯತ್ತ ತಿರುಗಿಯೂ ನೋಡಲ್ಲ ಎಂದಿದ್ದಾರೆ. ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನ ಗೊಳಿಸುವುದು, ತಾನು ಮತ್ತೆ ಬಿಜೆಪಿಗೆ ಸೇರ್ಪಡೆಯಾಗುತ್ತೇನೆ ಎಂಬುದೆಲ್ಲ ಆಧಾರರಹಿತವಾದದ್ದು. ಜೀವನದಲ್ಲಿ ಇನ್ನೆಂದಿಗೂ ಬಿಜೆಪಿಯತ್ತ ತಿರುಗಿಯೂ ನೋಡುವುದಿಲ್ಲ ಎಂದು ಪ್ರಮಾಣಬದ್ಧವಾಗಿ ತಿಳಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಮಗೆ ಕಾಲಾವಕಾಶ ಕಡಿಮೆ ಇದ್ದುದರಿಂದ, ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಾಗಿಲ್ಲ. ಲೋಕಸಭೆ ಚುನಾವಣೆಗೆ ಇನ್ನು ಬಹಳ ಸಮಯವಿದ್ದು, ಅವಸರದ ನಿರ್ಧಾರವನ್ನು ಕೈಗೊಳ್ಳುವುದಿಲ್ಲ. ಅಧಿವೇಶನದ ಬಳಿಕ ರಾಜ್ಯ ಪ್ರವಾಸ ಕೈಗೊಂಡು ಪಕ್ಷವನ್ನು ಸಂಘಟಿಸುತ್ತೇನೆ. ಪ್ರವಾಸದ ವೇಳೆ ಜನರ ಅಭಿಪ್ರಾಯ ಸಂಗ್ರಹಿಸಿದ ಬಳಿಕ, ಕೆಜೆಪಿ ತನ್ನ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಜೆಡಿಎಸ್ ಜತೆ ಕೆಜೆಪಿ ವಿಲೀನ?: ಬಿಜೆಪಿ ಹೊರತುಪಡಿಸಿ ಇನ್ನುಳಿದ ಯಾವುದೇ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಳ್ಳಲು ಮುಕ್ತ ಮನಸ್ಸಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ಇನ್ನು, ತುಮಕೂರು ಸಂಸದ ಜಿಎಸ್ ಬಸವರಾಜು ಅವರು ಅಚ್ಚರಿಕೆಯ ಹೇಳಿಕೆ ನೀಡಿದ್ದಾರೆ.
ತೃತೀಯ ರಂಗ ರಚನೆಗೆ ರಾಷ್ಟ್ರಮಟ್ಟದಲ್ಲಿ ಪ್ರಯತ್ನಗಳು ನಡೆದಿಯುತ್ತಿದೆ. ಕರ್ನಾಟಕದಲ್ಲಿ ತೃತೀಯ ರಂಗದಡಿ ಎಚ್ ಡಿ ದೇವೇಗೌಡ ಹಾಗೂ ಯಡಿಯೂರಪ್ಪ ಒಂದಾದರೂ ಅಚ್ಚರಿಪಡಬೇಕಿಲ್ಲ ಎಂದು ಅವರು ತಿಳಿಸಿದ್ದಾರೆ.
ಯುಪಿಎ, ಎನ್ಡಿಎ ಮೈತ್ರಿಕೂಟದ ಪಕ್ಷಗಳಲ್ಲಿ ಪರಸ್ಪರ ಮೈತ್ರಿಯಿಲ್ಲದೇ ಸಂಬಂಧ ಹಳಸುತ್ತಿದ್ದು, ಬಿಎಸ್ಪಿಯ ಮಾಯಾವತಿ, ಎನ್ಸಿಪಿಯ ಶರದ್ ಪವಾರ್, ಎಸ್ಪಿಯ ಮುಲಾಯಂಸಿಂಗ್ ಯಾದವ್, ಟಿಡಿಪಿಯ ಚಂದ್ರಬಾಬುನಾಯ್ಡು, ಎಐಎಡಿಎಂಕೆಯ ಜಯಲಲಿತಾ, ಎಡಪಕ್ಷಗಳು ಸೇರಿದಂತೆ ಪ್ರಮುಖ ಪ್ರಾದೇಶಿಕ ಪಕ್ಷಗಳು ತೃತೀಯ ರಂಗ ರಚನೆಗೆ ಒಲವು ತೋರಿವೆ. ಈ ಹಿನ್ನೆಲೆಯಲ್ಲಿ ತೃತೀಯ ರಂಗ ಚಾಲನೆಯಾಗುವ ಎಲ್ಲ ಸಾಧ್ಯತೆಗಳು ದಟ್ಟವಾಗಿವೆ ಎಂಬುದು ಬಸವರಾಜು ಅವರ ವಾದವಾಗಿದೆ.
ರಾಜ್ಯದಲ್ಲೂ ಪ್ರಾದೇಶಿಕ ಪಕ್ಷಗಳಾದ ಜೆಡಿಎಸ್, ಕೆಜೆಪಿ ತೃತೀಯ ರಂಗದ ತೆಕ್ಕೆಗೆ ಬರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಮುಂದಿನ ಲೋಕಸಭಾ ಚುನಾವಣೆಯ ಒಳಗೆ ಯಡಿಯೂರಪ್ಪ ಯಾವುದಾದರೂ ಒಂದು ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಶತಸಿದ್ಧ ಎಂದು ಬಸವರಾಜು ನುಡಿದರು.
ಇದೇ ವೇಳೆ, ಯಡಿಯೂರಪ್ಪ ಬಿಜೆಪಿಗೆ ಹೀಗ್ತಾರಂತೆ ಎಂದು ಕೇಳಿದ್ದಕ್ಕೆ ಅವರು ಹೋದರೂ ತಾವಂತೂ ಹೋಗುವುದಿಲ್ಲ ಎಂದು ಬಿಜೆಪಿ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ನಾನೊಂದು ತೀರ ಅವರೊಂದು ತೀರ- ಶೆಟ್ಟರ್:
ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಪ್ರತಿಪಕ್ಷ ಸಾಲಿನಲ್ಲಿ ಅಕ್ಕಪಕ್ಕದಲ್ಲಿ ಕುಳಿತಿದ್ದರೂ ಇಬ್ಬರ ನಡುವೆ ಮಾತಿಲ್ಲ, ಕಥೆಯಿಲ್ಲ. ಶುಭಾಷಯ ವಿನಿಯಮವೂ ನಡೆಯಲಿಲ್ಲ. ಸದನದ ಹೊರಗೆ ಮಾತನಾಡಿದ ಮಾತನಾಡಿದ ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ಬರೋಲ್ಲ ಎಂದು ಯಡಿಯೂರಪ್ಪ ಅವರೇ ಹೇಳಿದ್ದಾರೆ. ಹಾಗಾಗಿ ಮತ್ತೆ ಅವರು ನಮ್ಮ ಪಕ್ಷ ಸೇರಿಕೊಳ್ಳವುದು ಸಾಧ್ಯವಿಲ್ಲದ ಮಾತು. ಒಂದು ವೇಳೆ ರಾಷ್ಟ್ರಮಟ್ಟದಲ್ಲಿ ಪಕ್ಷದ ವರಿಷ್ಠರು ಈ ಬಗ್ಗೆ ಚಿಂತನೆ ನಡೆಸಿದ್ದರೆ ಅದು ತನಗೆ ತಿಳಿದು ಬಂದಿಲ್ಲ ಎಂದೂ ಶೆಟ್ಟರ್ ಹೇಳಿದ್ದಾರೆ.












Click it and Unblock the Notifications