ಸಿಎಂ ದಿಟ್ಟ ಹೆಜ್ಜೆ: ರಾಜ್ಯದಲ್ಲಿ ಗುಟ್ಕಾ, ಪಾನ್ ಪರಾಗ್ ಬ್ಯಾನ್
ಬೆಂಗಳೂರು, ಮೇ 30: ಸಾರ್ವಜನಿಕ ಹಿತಾಶಕ್ತಿ ಗಮನದಲ್ಲಿ ಇಟ್ಟುಕೊಂಡು ಆರೋಗ್ಯಕ್ಕೆ ಮಾರಕವಾಗಿರುವ ಗುಟ್ಕಾ ಮತ್ತು ಪಾನ್ ಉತ್ಪನ್ನಗಳ ಮೇಲೆ ನಿಷೇಧಕ್ಕೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮುಂದಾಗಿದೆ.
ರಾಜ್ಯದಲ್ಲಿ ಗುಟ್ಕಾ ನಿಷೇಧ ಜಾರಿಗೆ ತರುವ ನಿಟ್ಟಿನಲ್ಲಿ ವಿಧಾನಸೌಧದಲ್ಲಿಂದು ಅಧಿಕಾರಿಗಳ ಮತ್ತು ಜಿಲ್ಲಾಧಿಕಾರಿಗಳ ಸಭೆ ನಡೆಸಿದ ನಂತರ ಆರೋಗ್ಯ ಸಚಿವ ಯು ಟಿ ಖಾದರ್ ಈ ಘೋಷಣೆ ಪ್ರಕಟಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಅನುಮತಿ ಪಡೆದು ಸರಕಾರ ಈ ಕ್ರಮಕ್ಕೆ ಮುಂದಾಗಿದೆ. ನಮಗೆ ನಮ್ಮ ರಾಜ್ಯದ ಜನತೆಯ ಆರೋಗ್ಯ ಮುಖ್ಯ. ಅಡಿಕೆ ಬೆಳೆಗಾರರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಇನ್ನು ಮುಂದೆ ಯಾವುದೇ ಅಂಗಡಿಗಳಲ್ಲಿ ಗುಟ್ಕಾ, ಪಾನ್ ಪರಾಗ್ ಮಾರುವಂತಿಲ್ಲ ಎಂದು ಸಚಿವ ಖಾದರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಇಂದು (ಮೇ 30) ಈ ಸಂಬಂಧದ ಆದೇಶದ ಪ್ರತಿಗೆ ಸಿದ್ದು ಅಂಕಿತ ಹಾಕಿದ್ದು, ಶುಕ್ರವಾರ (ಮೇ 31) ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ.
ಸಿಎಂ ಏಕಾಏಕಿ ನಿರ್ಧಾರದಿಂದ ವಿಚಲಿತರಾಗಿರುವ ಅಡಿಕೆ ಬೆಳೆಗಾರರು, ಕೆಲ ಶಾಸಕರು ಮತ್ತು ಸಚಿವರು (ಮುಖ್ಯವಾಗಿ ಮಲೆನಾಡು, ಕರಾವಳಿ ಶಾಸಕರು) ಭಾರೀ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಪಾಲ್ಗೊಂಡಿದ್ದ ಸಭೆಯಲ್ಲಿ ರಾಜ್ಯದಲ್ಲಿ ಗುಟ್ಕಾ ಉತ್ಪನ್ನಗಳಿಗೆ ನಿಷೇಧ ಹೇರುವುದಕ್ಕೆ ಬಹುತೇಕ ಅಧಿಕಾರಿಗಳು ಒಲವು ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಇದುವರೆಗೆ 24 ರಾಜ್ಯಗಳಲ್ಲಿ ಮತ್ತು 3 ಕೇಂದ್ರಾಡಳಿತ ಪ್ರದೇಶದಲ್ಲಿ ಗುಟ್ಕಾ ನಿಷೇಧವಿದೆ.












Click it and Unblock the Notifications