ಟಾಡಾ ಕೋರ್ಟಿಗೆ ಶರಣಾದ ಸಂಜಯ್ ದತ್
ಮುಂಬೈ, ಮೇ.16: ಮುಂಬೈ ಸರಣಿ ಬಾಂಬ್ ಸ್ಫೋಟ ಆರೋಪಿ ಬಾಲಿವುಡ್ ನಟ ಸಂಜಯ್ ದತ್ ಅವರು ಗುರುವಾರ ಮಧ್ಯಾಹ್ನ 2.55ರ ಸುಮಾರಿಗೆ ಟಾಡಾ ಕೋರ್ಟಿಗೆ ಶರಣಾಗಿದ್ದಾರೆ. ಪುಣೆಯ ಯರವಾಡಾ ಜೈಲಿನಲ್ಲಿ ಸಂಜಯ್ ದತ್ ಅವರು ಶಿಕ್ಷೆಯನ್ನು ಅನುಭವಿಸಲಿದ್ದಾರೆ.
1993ರ ಮುಂಬೈ ಸರಣಿ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಂಜಯ್ ದತ್ ಅವರು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿ, ಅವರ ಅರ್ಜಿಯಲ್ಲಿ ಯಾವುದೇ ತಿರುಳಿಲ್ಲ ಎಂದು ಶುಕ್ರವಾರ(ಮೇ.10) ಆದೇಶ ಹೊರಡಿಸಿತ್ತು. ಹೀಗಾಗಿ 42 ತಿಂಗಳುಗಳ ಕಾಲ ಸೆರೆಮನೆ ವಾಸ ಖಾಯಂ ಆಗಿದೆ.
ಮಧ್ಯಾಹ್ನ 1.45ರ ಸುಮಾರಿಗೆ ಬಾಂದ್ರಾದ ಇಂಪಿರಿಯಲ್ ಹೈಟ್ಸ್ ನಿವಾಸದಿಂದ ಟಾಡಾ ಕೋರ್ಟಿಗೆ ತೆರಳಿದ ಸಂಜಯ್ ದತ್ ಗೆ ಪತ್ನಿ ಮಾನ್ಯತಾ, ಸೋದರಿ ಪ್ರಿಯಾ ದತ್ ಸಾಥ್ ನೀಡಿದರು. ಟಾಡ ಕೋರ್ಟ್ ಆವರಣ ಸಾವಿರಾರು ಅಭಿಮಾನಿಗಳಿಂದ ತುಂಬಿ ಹೋಗಿತ್ತು. ಕೋರ್ಟ್ ಗೇಟಿನಿಂದ ಕೊರ್ಟ್ ಹಾಲ್ ಒಳಗೆ ಪ್ರವೇಶಿಸಲು ಸಂಜಯ್ ದತ್ ಗೆ ಸುಮಾರು 20 ನಿಮಿಷ ಬೇಕಾಯಿತು. ಅಭಿಮಾನಿಗಳ ದಂಡನ್ನು ಚದುರಿಸಲು ನಿರ್ದೇಶಕ ಮಹೇಶ್ ಭಟ್ ಸಹಾಯ ಮಾಡಿದರು. ಪ್ರಿಯಾ ದತ್, ಮಾನ್ಯತಾ ಕಣ್ಣೀರಧಾರೆ ಹರಿಸಿದರು.
ಈ ಹಿನ್ನೆಲೆಯಲ್ಲಿ ಸಂಜಯ್ ದತ್ ಅವರು ನ್ಯಾಯಾಲಯಕ್ಕೆ ಮೇ 15 ರಂದು ಶರಣಾಗುವುದರ ಬದಲಿಗೆ ಗುರುವಾರ ಆಯ್ಕೆ ಮಾಡಿಕೊಂಡಿದ್ದರು. ಮುಂಬೈನ ಟಾಡಾ ನ್ಯಾಯಾಲಯ ವಿಧಿಸಿದ್ದ 6 ವರ್ಷ ಶಿಕ್ಷೆಯನ್ನು 5 ವರ್ಷಕ್ಕೆ ಇಳಿಸಿ ಮಾರ್ಚ್ 21ರಂದು ಸುಪ್ರೀಂ ಕೋರ್ಟ್ ತೀರ್ಪು ಹೊರಡಿಸಿತ್ತು. ನ್ಯಾಯಾಲಯಕ್ಕೆ ಶರಣಾಗಲು ಎರಡು ತಿಂಗಳ ಕಾಲಾವಕಾಶ ಕೋರಿದ್ದ ದತ್, ನಂತರ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ತಿರಸ್ಕೃತಗೊಂಡಿತ್ತು
9 ಎಂಎಂ ಪಿಸ್ತೂಲು ಮತ್ತು ಎಕೆ 56 ರೈಫಲ್ ಅನ್ನು ಅಕ್ರಮವಾಗಿ ಇಟ್ಟುಕೊಂಡಿದ್ದ ಸಂಜಯ್ ದತ್ ಅವರಿಗೆ ಟಾಟಾ ನ್ಯಾಯಾಲಯ 2006ರಲ್ಲಿ 6 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಒಂದೂವರೆ ವರ್ಷ ಅವರು ಜೈಲಿನಲ್ಲಿ ಕಳೆದಿರುವುದರಿಂದ ಇನ್ನೂ 42 ತಿಂಗಳು ಅವರು ಜೈಲಿನಲ್ಲಿಯೇ ಕಳೆಯಬೇಕಾಗಿದೆ.
1993ರ ಮುಂಬೈ ಸರಣಿ ಸ್ಫೋಟ ಘಟನೆಗೂ ಮುನ್ನ ನಾನು ದಾವೂದ್ ರನ್ನು ಭೇಟಿದ್ದು ನಿಜ ನಂತರ ಜೈಲುಶಿಕ್ಷೆ ಅನುಭವಿಸಿದ್ದೇನೆ. ಪಶ್ಚಾತ್ತಾಪ ಪಟ್ಟಿದ್ದೇನೆ ಎಂದು ಸಂಜಯ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
1993ರ ಸ್ಫೋಟಕ್ಕೆ ಸಂಬಂಧಿಸಿದಂತೆ ಮುಂಬೈನ ಉಗ್ರಗಾಮಿ ನಿಗ್ರಹ ಕೋರ್ಟ್ ನಲ್ಲಿ ಸುಮಾರು 50 ಜನರ ಮೇಲೆ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು. ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಕಾರಣ, ಸುಮಾರು ಆರು ವರ್ಷಗಳ ಕಾಲ ಸೆರೆಮನೆವಾಸ ಶಿಕ್ಷೆ ವಿಧಿಸಲಾಗಿತ್ತು. ನಾಯಕನಿಂದ ಖಳನಾಯಕ್ ಪಟ್ಟಕ್ಕೇರಿದ್ದ ಸಂಜಯ್ ಒಂದೂವರೆ ವರ್ಷ ಶಿಕ್ಷೆ ಅನುಭವಿಸಿ ಹೊರ ಬಂದಿದ್ದರು.
ನಂತರ ಸಮಾಜವಾದಿ ಪಕ್ಷ ಸೇರಿದ್ದ ಸಂಜಯ್ ದತ್ ತಮ್ಮ ತಂದೆ ಸುನಿಲ್ ದತ್ ರಂತೆ ಸಾತ್ವಿಕ ರಾಜಕಾರಣಿಯಾಗುವ ಭರವಸೆ ನೀಡಿದ್ದರು. ಅದರೆ, ಲೋಕಸಭಾ ಚುನಾವಣೆಯಲ್ಲಿ ಸಂಜಯ್ ಸ್ಪರ್ಧೆಗೆ ಲಖ್ನೋ ಕೋರ್ಟ್ ಅನುಮತಿ ನೀಡಿರಲಿಲ್ಲ. 2009ರಲ್ಲಿ ಸಮಾಜವಾದಿ ಪಕ್ಷ ಸೇರಿದ್ದ ಸಂಜಯ್ ದತ್, ಒಂದು ವರ್ಷ ಬಳಿಕ ಪಕ್ಷ ತೊರೆದಿದ್ದರು. 2012 ವರ್ಷದ ಆರಂಭದಲ್ಲಿ ಸಂಜಯ್ ದತ್ ಅವರು ಕಾಂಗ್ರೆಸ್ ಪರ ಪ್ರಚಾರಕ್ಕೆ ನಾನು ಕೂಡಾ ರೆಡಿ ಎಂದು ಹೇಳುವ ಮೂಲಕ ಕಾಂಗ್ರೆಸ್ ಪಕ್ಷದ ಬಾಗಿಲು ತಟ್ಟಿದ್ದರು.