ಮೈಸೂರಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ

ಅರಮನೆ ನಗರಿಯ ಮೂರನೇ ಒಂದು ಭಾಗದ ಜನತೆಗೆ ಕುಡಿಯಲು ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಅಧಿಕಾರಿಗಳು ಅಸಹಾಯಕತೆಯಿಂದ ಕೈ ಚೆಲ್ಲಿದ ಮೇಲೆ ಜನರು ಬೀದಿಗಿಳಿದು ಹೋರಾಟದ ಹಾದಿ ತುಳಿದಿದ್ದಾರೆ. ಆದರೆ, ಸಮಸ್ಯೆ ಮಾತ್ರ ಬಗೆಹರಿದಿಲ್ಲ.
ಮೈಸೂರು ನಗರದ ಬಹುತೇಕ ಎಲ್ಲ ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಂಕಷ್ಟ ಎದುರಿಸುತ್ತಿದೆ. ಹುಣಸೂರು ರಸ್ತೆ ಪಡುವಾರಹಳ್ಳಿ ಬಳಿ ಜನತಾ ನಗರದ ಬಳಿ ನೂರಾರು ನಾಗರಿಕರು ಖಾಲಿ ಕೊಡ ಪ್ರದರ್ಶಿಸಿ ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದ್ದಾರೆ.
ಕಳೆದ 15 ದಿನಗಳಿಂದ ಕುಡಿಯಲು ನೀರು ಸಿಕ್ಕಿಲ್ಲ ಎಂದು ದೂರಿದ್ದಾರೆ. ಪ್ರತಿಭಟನೆಯ ಕಾವು ಈಗ ಪಡುವಾರಹಳ್ಳಿ, ಸರಸ್ವತಿ ಪುರಂ, ಜಯಲಕ್ಷ್ಮಿಪುರಂ, ಬೋಗಾದಿ, ಶಾರದಾದೇವಿ ನಗರ, ಜಯಪ್ರಕಾಶ್ ನಗರ, ಕುಂಬಾರ ಕೊಪ್ಪಲು, ಗೋಕುಲಂ, ತಿಲಕನಗರ,ಬೃಂದಾವನ ಬಡಾವಣೆ, ಜೆಪಿ ನಗರ, ಸಿದ್ಧಾರ್ಥನಗರ, ಶ್ರೀರಾಂಪೇಟೆ, ದಟ್ಟಗಳ್ಳಿ, ಮೇಟಗಳ್ಳಿ, ಮಂಡಿ ಮೊಹಲ್ಲಾ ಸೇರಿದಂತೆ ಮೈಸೂರಿನ ಶೇ 30 ರಷ್ಟು ಭಾಗದ ಜನತೆ ಕುಡಿಯುವ ನೀರಿಗಾಗಿ ಪ್ರತಿಭಟನೆ ನಡೆಸಿದ್ದಾರೆ.
ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಗಮನ ಹರಿಸುತ್ತಿಲ್ಲ ಎಂದು ಮಹಿಳೆಯರು ದೂರಿದ ಮೇಲೆ ಶಾಸಕ ವಾಸು ಸಹ ಪ್ರತಿಭಟನೆಯಲ್ಲಿ ಕೂತು ಜನತೆಯ ನೋವು ಹಂಚಿಕೊಂಡಿದ್ದು ವಿಶೇಷವಾಗಿತ್ತು.ನಗರಪಾಲಿಕೆ ಸದಸ್ಯೆ ಭಾಗ್ಯವತಿ ಮತ್ತು ಮಾಜಿ ಮೇಯರ್ ರಾಜೇಶ್ವರಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆಗೆ ಸಾತ್ ನೀಡಿದ್ದಾರೆ.
ನಗರಪಾಲಿಕೆ ಪ್ರತಿಕ್ರಿಯೆ: ಪ್ರತಿನಿತ್ಯ 90 ಎಂಎಲ್ ಡಿಯಷ್ಟು ನೀರು ಹೊಂಗಳ್ಳಿ ಪಂಪ್ ಸ್ಟೇಷನ್ ನಿಂದ ಬರಬೇಕಿತ್ತು. ಆದರೆ, ನಿತ್ಯ 35 ಮಿಲಿಯನ್ ಲೀಟರ್ಸ್ ಪ್ರತಿ ದಿನ ಸಿಗುತ್ತಿದೆ. ಬೆಳಗೊಳ ಪಂಪ್ ಸ್ಟೇಷನ್ ನಿಂದ 40 ಎಂಎಲ್ ಡಿ ಮಾತ್ರ ಸಿಗುತ್ತಿದೆ. 55 ಎಂಎಲ್ ಡಿ ನಿರೀಕ್ಷೆಯಿತ್ತು ಎಂದು ನಗರಪಾಲಿಕೆ ಆಯುಕ್ತ ಪಿ.ಜಿ.ರಮೇಶ್ ಅವರು ವಿವರಿಸಿದ್ದಾರೆ. ಕುಡಿಯುವ ನೀರಿನ ತೀವ್ರ ಸಂಕಷ್ಟವನ್ನು ಮನಗಂಡ ಆಯುಕ್ತರು, ಸಂಕಷ್ಟ ಎದುರಿಸುತ್ತಿರುವ ಪ್ರದೇಶಗಳಿಗೆ ಐದು ಟ್ಯಾಂಕರ್ ಗಳಲ್ಲಿ ನೀರು ಸರಬರಾಜು ಮಾಡುವುದಾಗಿ ಭರವಸೆ ನೀಡಿದ್ದಾರೆ.
ಆದರೆ, ತಮಗೆ ಟ್ಯಾಂಕ್ ನೀರು ಬೇಡ, ತಮ್ಮ ನಲ್ಲಿಗಳಲ್ಲೇ ನೀರು ಬರುವಂತೆ ವ್ಯವಸ್ಥೆ ಮಾಡಿ ಎಂದು ಸಾರ್ವಜನಿಕರು ಪಟ್ಟು ಹಿಡಿದ್ದಾರೆ. ಈ ನಡುವೆ ಬೋರ್ ವೆಲ್ ದುರಸ್ಥಿ ಕಾರ್ಯಕ್ಕೂ ಪಾಲಿಕೆ ಮುಂದಾಗಿದೆ.
ಕೃಷ್ಣರಾಜದಲ್ಲೂ ನೀರಿನ ಬರ:ಈ ನಡುವೆ, ನಗರ ವ್ಯಾಪ್ತಿಯ ಕೃಷ್ಣರಾಜ ಕ್ಷೇತ್ರದಲ್ಲೂ ಕುಡಿಯುವ ನೀರಿಗೆ ತೀವ್ರ ದುಸ್ಥರ ಉಂಟಾಗಿದೆ. ಮಂಗಳವಾರ ಹೇಮಾವತಿಯಿಂದ 1,528 ಕ್ಯೂಸೆಕ್ಸ್ ನೀರು ಕೆ ಆರ್ ಎಸ್ ಜಲಾಶಯ ತಲುಪಿದೆ. ಇದರಿಂದ ನೀರಿನ ಮಟ್ಟ ಕೇವಲ 6 ಇಂಚು ಹೆಚ್ಚಿದೆ. ಹೇಮಾವತಿಯಿಂದ ಇನ್ನಷ್ಟು ನೀರು ನಿರೀಕ್ಷಿಸಲಾಗಿದೆ. ಪಂಪಿಂಗ್ ಸ್ಟೇಷ್ಟನ್ ನ ಲೋಪ ದೋಷಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸಿ ಶಿಖಾ ಅವರು ಹೇಳಿದ್ದಾರೆ.












Click it and Unblock the Notifications