ಬೆಂಗಳೂರು : ಹೆಚ್ಚಾಗಲಿದೆ ನೀರಿನ ದರ

ರಾಜ್ಯದಲ್ಲಿ ನೂತನವಾದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಿದ ತಕ್ಷಣ ಎಚ್ಚೆತ್ತ ಬೆಂಗಳೂರು ಜಲಮಂಡಳಿ ನೀರಿನ ದರ ಏರಿಕೆಯ ಕುರಿತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ವಿದ್ಯುತ್ ದರ ಏರಿಕೆ ಆಗಿರುವುದರಿಂದ ನಷ್ಟ ಉಂಟಾಗುತ್ತಿದೆ. ಆದ್ದರಿಂದ ದರ ಹೆಚ್ಚಿಸಲು ಅನುಮತಿ ನೀಡುವಂತೆ ವಿವರಣೆ ನೀಡಿದೆ.
ಸಂಪುಟ ವಿಸ್ತರಣೆ ಕೆಲಸಗಳಲ್ಲಿ ತಲ್ಲೀನರಾಗಿರುವ ಸಿಎಂ ಸಿದ್ದರಾಮಯ್ಯ ಜಲಮಂಡಳಿ ಪ್ರಸ್ತಾವನೆಯನ್ನು ಪಡೆದಿದ್ದಾರೆ. ಸಚಿವ ಸಂಪುಟ ವಿಸ್ತರಣೆ ನಡೆದು ಹೊಸ ಸಚಿವರು ಅಧಿಕಾರಿ ಸ್ವೀಕರಿಸಿದ ತಕ್ಷಣ ವಾಟರ್ ಬಿಲ್ ಹೆಚ್ಚಾಗುವುದು ಬಹುತೇಕ ಖಚಿತವಾಗಿದೆ.
ಪ್ರಸ್ತಾವನೆ ಏನು : ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಮೇ 6ರಂದು ವಿದ್ಯುತ್ ದರ ಪರಿಷ್ಕರಿಸಿ ಆದೇಶ ಹೊರಡಿಸಿದೆ. ಬೆಂಗಳೂರು ಜಲಮಂಡಳಿಗೆ ಇದರಿಂದ 27ರಿಂದ 30 ಕೋಟಿ ಹೆಚ್ಚುವರಿ ನಷ್ಟ ಉಂಟಾಗುತ್ತಿದೆ. ವಿದ್ಯುತ್ ಬಿಲ್ ಪಾವತಿಸುವುದು ಮಂಡಳಿಗೆ ಅತ್ಯಧಿಕ ಹೊರೆಯಾಗಿದೆ.(ವಿದ್ಯುತ್ ದರ ಎಷ್ಟು ಹೆಚ್ಚಳವಾಗಿದೆ)
ಜಲಮಂಡಳಿ ತನ್ನ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಗೊಂಡ ಪ್ರದೇಶಗಳಿಗೆ ಕಾವೇರಿ ನೀರು ಪೂರೈಸಲು ನಾಲ್ಕನೇ ಹಂತದ ಯೋಜನೆ ಜಾರಿಗೊಳಿಸಿದೆ. ಮೊದಲೇ ನಷ್ಟ ಅನುಭವಿಸುತ್ತಿದ್ದ ಸಂಸ್ಥೆಗೆ ನೂತನ ಪ್ರದೇಶಗಳಿಗೂ ನೀರು ಒದಗಿಸುವುದು ಅನಿವಾರ್ಯವಾಗಿದೆ.
ಇಂತಹ ಸಮಯದಲ್ಲಿ ವಿದ್ಯುತ್ ದರ ಏರಿಕೆ ಆಗಿರುವುದರಿಂದ ಜಲಮಂಡಳಿಗೆ ಮತ್ತಷ್ಟು ನಷ್ಟ ಉಂಟಾಗಲಿದೆ ಆದ್ದರಿಂದ ನೀರಿನ ದರ ಹೆಚ್ಚಿಸಲು ಅನುಮತಿ ನೀಡಬೇಕೆಂದು ಮಂಡಳಿ ಸರ್ಕಾರಕ್ಕೆ ಮನವಿ ಮಾಡಿದೆ. ಸಿಎಂ ಸಿದ್ದರಾಮಯ್ಯ ಅವರ ನಿರ್ಧಾರದ ನಂತರ ದರ ಏರಿಕೆ ಕುರಿತು ಸ್ಪಷ್ಟ ನಿರ್ಧಾರ ಹೊರಬೀಳಲಿದೆ.
ಹೊಸತೇನಲ್ಲ : ನೀರಿನ ದರ ಹೆಚ್ಚಿಸಬೇಕು ಎಂಬುದು ಜಲಮಂಡಳಿಯ ಹೊಸ ಪ್ರಸ್ತಾವನೆಯೇನಲ್ಲ ಬಿಜೆಪಿ ಸರ್ಕಾರಕ್ಕೆ ಮಂಡಳಿ ಈ ಬಗ್ಗೆ ಹಲವಾರು ಬಾರಿ ಮನವಿ ಮಾಡಿತ್ತು. ಆದರೆ, ಬಿಜೆಪಿ ಸರ್ಕಾರ ಪ್ರಸ್ತಾವನೆಯನ್ನು ತಳ್ಳಿ ಹಾಕಿತ್ತು.
ಜಲಮಂಡಳಿ ಅಧಿಕಾರಿಗಳ ಪ್ರಕಾರ ಕಳೆದ ಎಂಟು ವರ್ಷಗಳಿಂದ ನಗರದಲ್ಲಿ ನೀರಿನ ದರ ಹೆಚ್ಚಿಸಿಲ್ಲ. ಈ ಅವಧಿಯಲ್ಲಿ ಮಂಡಲಿಯ ಖರ್ಚು ವೆಚ್ಚಗಳು ಶೇ 50ರಷ್ಟು ಹೆಚ್ಚಾಗಿವೆ. ಆದ್ದರಿಂದ ನೂತನ ಸರ್ಕಾರದ ಮುಂದೆ ದರ ಏರಿಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿದೆ, ಇಂತಹ ಸಂರ್ಭದಲ್ಲೇ ನೀರಿನ ದರ ಏರಿಕೆ ಕುರಿತು ಜಲಮಂಡಳಿ ಚಿಂತಿಸುತ್ತಿದೆ. ಮಂಡಳಿಯ ಪ್ರಸ್ತಾವನೆಯನ್ನು ಸರ್ಕಾರ ಪರಿಶೀಲಿಸಿ ನಿರ್ಣಯ ಕೈಗೊಂಡ ನಂತರ ನೀರಿನ ದರ ಹೆಚ್ಚಳವಾಗುವುದು ಬಹುತೇಕ ಖಚಿತವಾಗಿದೆ.












Click it and Unblock the Notifications