ಪೊಲೀಸರಿಗೆ ದೂರು ನೀಡಿದ್ದೀರಾ? ಮೊಬೈಲ್ ನೋಡಿ

ಜನರ ಜೊತೆ ಮತ್ತಷ್ಟು ನಿಕಟ ಬಾಂಧವ್ಯ ಹೊಂದಲು ಮತ್ತು ಸಕಾಲ ಯೋಜನೆಯನ್ನು ಇಲಾಖೆಯಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರಲು ಗೃಹ ಇಲಾಖೆ ನಿರ್ಧರಿಸಿದೆ. ಆದ್ದರಿಂದ ದೂರು ನೀಡಿರುವ ವ್ಯಕ್ತಿಯ ಮೊಬೈಲ್ ನಂಬರ್ ಗೆ ಅವರು ನೀಡಿದ ದೂರಿನ ತನಿಖೆ ಯಾವ ಹಂತದಲ್ಲಿದೆ ಎಂದು ಸಂದೇಶ ಕಳುಹಿಸುವ ಸೇವೆ ಪ್ರಾರಂಭಿಸಲು ಇಲಾಖೆ ನಿರ್ಧರಿಸಿದೆ.
ರಾಜ್ಯದ್ಯಂತ ಈ ಎಸ್ಎಂಎಸ್ ಸೇವೆ ನವೆಂಬರ್ ನಲ್ಲಿ ಪ್ರಾರಂಭವಾಗಲಿದ್ದು, ಬೆಂಗಳೂರಿನಲ್ಲಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಈ ಸೇವೆಯಿಂದಾಗಿ ನೀವು ನೀಡಿದ ದೂರಿನ ಎಫ್ಐಆರ್ ದಾಖಲಿಸಿದರೆ, ಅಥವ ನಿಮ್ಮ ದೂರಿನ ತನಿಖೆ ಮುಗಿದಿದೆಯೇ ಎಂದು ದೂರುದಾರರಿಗೆ ತಿಳಿಯಲಿದೆ.
ಈಗಾಗಲೇ ಗೃಹ ಇಲಾಖೆಯ 21 ಸೇವೆಗಳನ್ನು ಸಕಾಲ ಯೋಜನೆಗೆ ಸೇರಿಸಲಾಗಿದೆ. ಎಸ್ಎಂಎಸ್ ಸೇವೆಯನ್ನು ಪ್ರಾರಂಭಿಸಿ ಜನರೊಂದಿಗೆ ಇಲಾಖೆ ಮತ್ತಷ್ಟು ಉತ್ತಮ ಬಾಂಧವ್ಯ ವೃದ್ಧಿಸಿಕೊಳ್ಳಲಿದೆ ಎಂದು ಇಲಾಖೆಯ ಕಂಪ್ಯೂಟರ್ ವಿಭಾಗದ ಹೆಚ್ಚುವರಿ ಆಯುಕ್ತ ಪ್ರವೀಣ್ ಸೂದ್ ತಿಳಿಸಿದ್ದಾರೆ.
ಎಸ್ಎಂಎಸ್ ಗೇಟ್ ವೇ ಮೂಲಕ ರಾಜ್ಯದಲ್ಲಿ ಪ್ರತಿದಿನ 5000 ಎಸ್ಎಂಎಸ್ ಕಳಿಸಬಹುದಾಗಿದೆ. ಈ ಬಗ್ಗೆ ನೀಲನಕ್ಷೆ ತಯಾರಿಸಿದ್ದು, ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಶೀಘ್ರವೇ ಈ ಯೋಜನೆ ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದರು.
ಸಾಮಾಜಿತ ತಾಣಗಳ ಬಳಕೆ : ಜನರೊಂದಿಗೆ ಬೆರೆಯಲು ಈಗಾಗಲೇ ಬೆಂಗಳೂರು ಪೊಲೀಸರು ಫೇಸ್ ಬುಕ್ ಪೇಜ್ ಪ್ರಾರಂಭಿಸಿ ಜನಪ್ರಿಯರಾಗಿದ್ದಾರೆ. ಸುಮಾರು 70,168 ಜನರು ಈ ಪೇಜ್ ಅನ್ನು ಇಷ್ಟಪಟ್ಟಿದ್ದಾರೆ. ಇದೇ ರೀತಿ ಎಲ್ಲಾ ಜಿಲ್ಲೆಗಳ ಪೊಲೀರಿಗೂ ಫೇಸ್ ಬುಕ್ ಪೇಜ್ ಪ್ರಾರಂಭಿಸುವಂತೆ ಸೂಚನೆ ನೀಡಲಾಗಿದೆ.
ಪಬ್ಲಿಕ್ ಐ ಯಶಸ್ವಿ : ಬೆಂಗಳೂರು ಸಂಚಾರಿ ಪೊಲೀಸರು ಪ್ರಾರಂಭಿಸಿರುವ ಪಬ್ಲಿಕ್ ಐ ಯೋಜನೆ ಅತ್ಯಂತ ಜನಪ್ರಿಯವಾಗಿದೆ. ಜನರು ಸಂಚಾರಿ ನಿಯಮಗಳ ಉಲ್ಲಂಘನೆ ಬಗ್ಗೆ ಛಾಯಾಚಿತ್ರಗಳನ್ನು ತೆಗೆದು ಕಳುಹಿಸುತ್ತಿದ್ದಾರೆ. ಸಾಮಾಜಿಕ ಜಾಲ ತಾಣಗಳನ್ನು ಪರಿಣಾಮಕಾರಿಯಾಗಿ ಇಲಾಖೆ ಬಳಸಿಕೊಳ್ಳಲಿದೆ ಎಂದು ಪ್ರವೀಣ್ ಹೇಳಿದರು.
ನಮ್ಮ ಪೊಲೀಸರೇ ಮೊದಲು : ಇಂಟರ್ ನೆಟ್ ಮೂಲಕ ರಾಜ್ಯದ ಎಲ್ಲಾ ಠಾಣೆಗಳನ್ನು ತಕ್ಷಣ ತಲುಪುವಲ್ಲಿ ಕರ್ನಾಟಕದ ಪೊಲೀಸರು ಮೊಲದ ಸ್ಥಾನದಲ್ಲಿದ್ದಾರೆ. ಮಡಿವಾಳದಲ್ಲಿ ಆರಂಭಿಸಿರುವ ಹೈಟೆಕ್ ಕೇಂದ್ರದ ಮೂಲಕ 916 ಠಾಣೆಗಳ ಮಾಹಿತಿಗಳನ್ನು ನಾವು ತಕ್ಷಣ ಪಡೆದುಕೊಳ್ಳುತ್ತಿದ್ದೇವೆ ಎಂದು ಪ್ರವೀಣ್ ಹೇಳಿದರು.












Click it and Unblock the Notifications