ಮುಂಬೈ, ಬೆಂಗಳೂರಿನಲ್ಲಿ ಬಾಂಬ್ ಸ್ಪೋಟ ಬೆದರಿಕೆ
ಸೋಮವಾರ ಕೇಂದ್ರ ಗುಪ್ತಚರ ಇಲಾಖೆಗೆ ಪತ್ರ ತಲುಪಿರುವ ಅಲ್ ಜಿಹಾದ್ ಸಂಘಟನೆ ಹೆಸರಿನ ಪತ್ರದಲ್ಲಿ, ಮುಂಬೈನಲ್ಲಿರುವ ಅಮೆರಿಕ ದೂತವಾಸ ಕಚೇರಿ, ಬೆಂಗಳೂರು, ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಾಂಬ್ ದಾಳಿ ನಡೆಸುವುದಾಗಿ ಬೆದರಿಸಲಾಗಿದೆ.
ಕೋಲ್ಕತ್ತ ಮತ್ತು ಮುಂಬೈನಲ್ಲಿರುವ ಅಮೆರಿಕದ ದೂತವಾಸ ಕಚೇರಿಗಳು ನಮ್ಮ ಮೊದಲ ಗುರಿ ಎಂದು ಸಂಘಟನೆ ಹೇಳಿಕೊಂಡಿದೆ. ಒಂದು ಪುಟದ ಈ ಪತ್ರದಲ್ಲಿ ಬಸ್ ಮತ್ತು ರೈಲ್ವೆ ನಿಲ್ದಾಣಗಳ ಮೇಲೆ ದಾಳಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು ಸ್ಪೋಟದ ನಂಟು : ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದಲ್ಲಿ ನಮ್ಮ ಕೈವಾಡವಿದೆ ಎಂದು ಸಂಘಟನೆ ಪತ್ರದಲ್ಲಿ ತಿಳಿಸಿದೆ. ಗುಪ್ತಚರ ಇಲಾಖೆಯ ಕಮಾಂಡರ್ ಸಂಜಯ್ ಕುಮಾರ್ ಅವರಿಗೆ ಬೆದರಿಕೆ ಪತ್ರ ತಲುಪಿದೆ.
ಪತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಗುಪ್ತಚರ ಇಲಾಖೆ, ಕರ್ನಾಟಕ, ಆಂಧ್ರ ಪ್ರದೇಶ, ಕೋಲ್ಕತ್ತಾ, ಮಹಾರಾಷ್ಟ್ರ ಮುಂತಾದ ರಾಜ್ಯಗಳಿಗೆ ಸೂಕ್ತ ರಕ್ಷಣಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದೆ.
ಭಯೋತ್ಪಾದನೆ ನಿಗ್ರಹ ದಳ ಸಹ ಇಂಡಿಯನ್ ಮುಜಾಹಿದ್ದಿನ್ ಉಗ್ರಗಾಮಿ ಸಂಘಟನೆ ದೇಶದ ಕೆಲವು ಮಹಾನಗರಗಳಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ನೀಡಿದೆ.
ಜರ್ಮನ್ ದಾಳಿ, ಬೆಂಗಳೂರು, ಹೈದರಾಬಾದ್ನಲ್ಲಿ ದಾಳಿ ನಡೆಸಿದ ಉಗ್ರರು ಹೊಸ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಇಲಾಖೆ ಎಚ್ಚರಿಸಿದೆ. ಕರಾವಳಿ ಕಾವಲು ಪಡೆಗೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.