ವಿಧಾನಸಭೆ ಚುನಾವಣೆಯಿಂದ ಲೋಕಸಭಾ ಹವಾ
ಮೈಸೂರು, ಮೇ 3: ಗೇರ್ ಬದಲಿಸಿಕೊಂಡು ತಾರಕಕ್ಕೇರಿರುವ ರಾಜ್ಯ ವಿಧಾನಸಭಾ ಚುನಾವಣೆ ಕಾವು ತಣ್ಣಗೆ ಲೋಕಸಭೆಯತ್ತ ಶಿಫ್ಟ್ ಆಗುತ್ತಿದೆ. ಹಾಗಾಗಿಯೇ ಭಾನುವಾರ ನಡೆಯುವ ಮತದಾನವು ರಾಷ್ಟ್ರದ ಗಮನ ಸೆಳೆದಿದೆ.
ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶವು ಮುಂದಿನ ಲೋಕಸಭೆ ಚುನಾವಣೆಗೆ ಮುನ್ನುಡಿ ಬರೆಯುವುರದಲ್ಲಿ ಯಾವುದೇ ಅನುಮಾವಿಲ್ಲ. ರಾಜ್ಯಮಟ್ಟದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಭ್ರಷ್ಟಾಚಾರದ ಬಗ್ಗೆ ರೋಸಿರುವ ಜನ ನಾಳಿದ್ದು ಯಾರಿಗೆ ಮತಹಾಕುತ್ತಾರೆ ಎಂಬುದು ಸಾರ್ವತ್ರಿಕ ಚುನಾವಣೆ ದೃಷ್ಟಿಯಿಂದ ಮಹತ್ವದ್ದಾಗಲಿದೆ.

ಒಂದು ವೇಳೆ ಕಾಂಗ್ರೆಸ್ ಬಹುಮತದೊಂದಿಗೆ ಸರಕಾರ ರಚಿಸುವ ಮಟ್ಟಕ್ಕೆ ಬಂದರೆ ಆಗ ಕೇಂದ್ರದಲ್ಲಿರುವ ಕಾಂಗ್ರೆಸ್ ಪಕ್ಷ ಚುನಾವಣೆ ಎದುರಿಸುವ ಸಾಹಸ ಮಾಡಬಹುದು. ಅದು ಮಧ್ಯಂತರ ಚುನಾವಣೆಗೆ ಹೇತುವಾಗಬಹುದು.
1985ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 28 ಸ್ಥಾನಗಳ ಪೈಕಿ 24ನ್ನು ಅನುಕಂಪದ ಆಧಾರದಲ್ಲಿ ಬಾಚಿಕೊಂಡಿತ್ತು. ಅದಾಗುತ್ತಿದ್ದಂತೆ ರಾಜ್ಯ ಮತದಾರ ಜನತಾ ಪಕ್ಷಕ್ಕೆ ನಿಷ್ಠೆ ತೋರಿದ್ದರಿಂದ ಅಲ್ಪಾವಧಿಯಲ್ಲೇ ಕಾಂಗ್ರೆಸ್ ಧೂಳಿಪಟವಾಗಿತ್ತು.
1989ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿತ್ತು. ಆದರೆ 178 ಸ್ಥಾನಗಳೊಂದಿಗೆ ರಾಜ್ಯ ವಿಧಾನಸಭೆ ಪ್ರವೇಶಿಸಿತು. ಒಂದು ದಶಕದ ತರುವಾಯ 1999ರಲ್ಲಿ ನವದೆಹಲಿಯಲ್ಲಿ ಬಿಜೆಪಿ ಪ್ರತಿಷ್ಠಾಪಿಸಿತು. ಅದಾದ ಬಳಿಕ ರಾಜ್ಯದಲ್ಲಿ 132 ಸ್ಥಾನಗಳೊಂದಿಗೆ ಕಾಂಗ್ರೆಸ್ ಅಧಿಕಾರದ ಗದ್ದುಗೆಗೇರಿತು.
ಆದರೆ 2004ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮಣ್ಣುಮುಕ್ಕಿತ್ತು. ಅದೇ ಅವಧಿಯಲ್ಲಿ ರಾಜ್ಯದಲ್ಲಿ 79 ಸ್ಥಾಗಳನ್ನು ದಕ್ಕಿಸಿಕೊಂಡು ಅಗ್ರ ಸ್ಥಾನ ಅಲಂಕರಿಸಿತ್ತು. ಆಗ ಕಾಂಗ್ರೆಸ್ಸಿಗೆ 65 ಸ್ಥಾನ ದಕ್ಕಿತ್ತು.
2008 ವಿಧಾಸನಭೆ ಚುನಾವಣೆಯಲ್ಲಿ ನೂರಕ್ಕೂ ಹೆಚ್ಚು ಸ್ಥಾನ ಗಳಿಕೆಯೊಂದಿಗೆ ಬಿಜೆಪಿ ಮೊದಲ ಬಾರಿಗೆ 'ಸ್ವತಂತ್ರ'ವಾಗಿ ಅಧಿಕಾರ ಹಿಡಿಯಿತು. ಮತ್ತು, 2009ರ ಲೋಕಸಭೆ ಚುನಾವಣೆಯಲ್ಲೂ ಅದು 19/28 ಸ್ಥಾನ ಗೆದ್ದಿತು. ಕಾಂಗ್ರೆಸ್ಸಿಗೆ ಆರು ಸ್ಥಾನಗಳಷ್ಟೇ ಪ್ರಾಪ್ತಿಯಾಯಿತು.
ಇತಿಹಾಸದ ಕಾಲಚಕ್ರ ಹೀಗಿರುವಾಗ ಮುಂದಿನ ವಿಧಾನಸಭೆ/ ಲೋಕಸಭೆ ಕರ್ನಾಟಕದ ಮತದಾರನ ಲೆಕ್ಕಾಚಾರದಲ್ಲಿ ಹೇಗೋ/ಏನೋ ಎಂದು ಕುತೂಹಲದಿಂದ ಕಾಯುವಂತಾಗಿದೆ.












Click it and Unblock the Notifications