ವೇದಿಕೆಯಿಂದ ಅಂಬರೀಶ್ ಕಳಚಿಕೊಂಡ ಕಾರಣ ಬಹಿರಂಗ
ರಾಹುಲ್ ಗಾಂಧಿ ಹಾಗೂ ಎಸ್ಸೆಂ ಕೃಷ್ಣ ಅವರ ಜೊತೆ ಅಂಬರೀಷ್ ಅವರು ವೇದಿಕೆ ಹಂಚಿಕೊಳ್ಳದೆ ಇರಲು ಏನು ಕಾರಣ ಎಂಬ ಕುತೂಹಲಕ್ಕೆ ಸುಮಲತಾ ತೆರೆ ಎಳೆದಿದ್ದಾರೆ. ಖಾಸಗಿ ಸುದ್ದಿ ವಾಹಿನಿ ಜೊತೆ ಮಾತನಾಡುತ್ತಾ, ಚುನಾವಣಾ ನಿಯಮಗಳ ಪ್ರಕಾರ ಅಂಬರೀಷ್ ಅವರು ನಡೆದುಕೊಂಡಿದ್ದಾರೆ. ಹೀಗಾಗಿ ಅವರು ವೇದಿಕೆ ಏರಿದರೂ ಗಣ್ಯರ ಜೊತೆ ವೇದಿಕೆ ಹಂಚಿಕೊಳ್ಳಲಿಲ್ಲ.
ಚುನಾವಣಾ ನಿಯಮದ ಪ್ರಕಾರ ಯಾವುದೇ ಅಭ್ಯರ್ಥಿ ತನ್ನ ಪರ ನಡೆಯುವ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಆದರೆ, ಇದೇ ಕಾರ್ಯಕ್ರಮದಲ್ಲಿ ಅಂಬರೀಷ್ ನಿಂತು ಭಾಷಣ ಬಿಗಿದಿದ್ದರೆ ಅವರ ಮೇಲೆ ಸುಮಾರು 50 ಲಕ್ಷ ರು ವೆಚ್ಚ ಬೀಳುತ್ತಿತ್ತು. ಹಾಗೂ ಇದು ಚುನಾವಣಾ ಖರ್ಚು ಮಿತಿ ಮೀರುತ್ತಿತ್ತು. ಅಲ್ಲದೆ, ಕಾರ್ಯಕ್ರಮದ ಆಯೋಜನೆಯ ಹೊಣೆ ಕೆಪಿಸಿಸಿ ವಹಿಸಿಕೊಂಡಿದ್ದರಿಂದ ಮಂಡ್ಯ ನಗರ ಅಭ್ಯರ್ಥಿಯಾದ ಅಂಬರೀಷ್ ಅವರು ವೇದಿಕೆಯಲ್ಲಿ ಕಾಣಿಸಿಕೊಳ್ಳಲಿಲ್ಲ ಎಂದು ಸುಮಲತಾ ಸ್ಪಷ್ಟಪಡಿಸಿದ್ದಾರೆ.
ಅಂಬರೀಷ್ ಅವರ ಪತ್ನಿಯಾಗಿ ನನಗೆ ರಾಹುಲ್ ಗಾಂಧಿ ಅವರಿದ್ದ ವೇದಿಕೆಯಲ್ಲಿ ಕುಳಿತುಕೊಳ್ಳುವ ಭಾಗ್ಯ ಸಿಕ್ಕಿತು. ಮತಯಾಚನೆ ಮಾಡುವುದಕ್ಕೂ ಮುನ್ನ ನನಗೆ ಕೆಲವು ಸಲಹೆಗಳನ್ನು ನೀಡಿ ಅಂಬರೀಷ್ ಅವರು ವೇದಿಕೆ ಮುಂಭಾಗದಲ್ಲಿ ಆಸೀನರಾದರು ಎಂದು ಸುಮಲತಾ ಹೇಳಿದರು.
ಎಸ್ಸೆಂ ಕೃಷ್ಣ ಅವರ ಜೊತೆ ಅಂಬರೀಷ್ ಅವರು ಎಂದೂ ಕಿತ್ತಾಡಿಲ್ಲ. ಇಬ್ಬರ ನಡುವೆ ವೈಮನಸ್ಯ ಇಲ್ಲ. ನಾವಿಬ್ಬರೂ ಒಟ್ಟಿಗೆ ಅವರನ್ನು ಬೆಳಗ್ಗೆ ಭೇಟಿಯಾಗಿ ಅವರಿಗೆ ಹುಟ್ಟುಹಬ್ಬದ ಶುಭ ಹಾರೈಸಿ ಬಂದೆವು. ಮಾಧ್ಯಮಗಳಲ್ಲಿ ಅಂಬರೀಷ್ ಹಾಗೂ ಕೃಷ್ಣ ಅವರ ನಡುವೆ ಗೊಂದಲ ಎಂದು ಬಂದಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ ಎಂದು ಸುಮಲತಾ ಹೇಳಿದರು.
ರಾಹುಲ್ ಗೆ ಗೊತ್ತಿರಲಿಲ್ಲವೇ?: 'ಮಂಡ್ಯದ ಗಂಡು' ಅಂಬರೀಷ್ ನೆರೆದಿದ್ದ ಸಭೆಯತ್ತ ಕೈ ಬೀಸಿ ವೇದಿಕೆಯಲ್ಲಿ ನಿಂತಿದ್ದರು. ಎಸ್ಸೆಂ ಕೃಷ್ಣ ಅವರು ಪಕ್ಕದಲ್ಲಿ ನಿಂತು ಕೈ ಬೀಸಿ, ಕೈ ಮುಗಿದು ಮತದಾರರಿಗೆ ವಂದಿಸಿದರು.
ನಂತರ ವೇದಿಕೆಯಲ್ಲಿದ್ದ ಪ್ಲಾಸ್ಟಿಕ್ ಕುರ್ಚಿಯಲ್ಲಿ ಆಸೀನರಾದ ರಾಹುಲ್ ಗಾಂಧಿ ಅವರು ಕೃಷ್ಣ ಹಾಗೂ ಅಂಬರೀಷ್ ಇಬ್ಬರಿಗೂ ಕುಳಿತುಕೊಳ್ಳುವಂತೆ ಸೂಚಿಸಿದರು. ಆದರೆ, ರಾಹುಲ್ ಗಾಂಧಿ ಸೂಚನೆ ಕಂಡರೂ ಕಾಣದಂತೆ ಅಂಬರೀಷ್ ವೇದಿಕೆ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಪತ್ನಿ ಸುಮಲತಾ ಅವರತ್ತ ತೆರಳಿದರು.
ತಾಂತ್ರಿಕವಾಗಿ ಅಂಬರೀಷ್ ಅವರು ವೇದಿಕೆಯಲ್ಲಿ ಕುಳಿತುಕೊಳ್ಳಲಾಗುವುದಿಲ್ಲ ಎಂಬುದರ ಬಗ್ಗೆ ರಾಹುಲ್ ಗಾಂಧಿ ಅವರಿಗೆ ಯಾರೂ ಹೇಳಿರಲಿಲ್ಲವೇ? ಅಥವಾ ಗೊತ್ತಿದ್ದು ರಾಹುಲ್ ಅವರು ಅಂಬರೀಷ್ ಅವರು ಕುಳಿತುಕೊಳ್ಳಿ ಎಂದು ಸೂಚಿಸಿದರೆ? ಗೊತ್ತಿಲ್ಲ..