ಚುನಾವಣೆ : ಕೃಷ್ಣ ಮತ್ತು ಮೋದಿಯ ಭಯದಲ್ಲಿ ಕಾಂಗ್ರೆಸ್

ವಿಧಾನಸಭೆ ಚುನಾವಣೆಗೆ ಮೊದಲು ಬಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಪಕ್ಷಕ್ಕೆ ಗೆಲುವಿನ ಟಾನಿಕ್ ನೀಡಿತ್ತು. ಟಿಕೆಟ್ ಹಂಚಿಕೆ ಬಂಡಾಯ ಕೈ ಸುಟ್ಟಿದ್ದರೂ, ಪಕ್ಷದ ಮುಖಂಡರು ಗೆಲುವು ನಮ್ಮದೇ ಎಂದು ಬೀಗುತ್ತಿದ್ದರು.
ಆದರೆ, ಸದ್ಯ ಎಸ್.ಎಂ.ಕೃಷ್ಣ ಅವರ ಸುದೀರ್ಘ ಮೌನ ಮತ್ತು ಬಸವನಗುಡಿಯಲ್ಲಿ ಭಾನುವಾರ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮಾಡಿದ ಮ್ಯಾಜಿಕ್ ಕಾಂಗ್ರೆಸ್ ಗೆಲುವಿನ ಉತ್ಸಾಹಕ್ಕೆ ತಣ್ಣೀರು ಸುರಿದಂತಾಗಿದೆ ಎಂದರೂ ತಪ್ಪಿಲ್ಲ.
ಬೆಂಗಳೂರು, ಹಳೇ ಮೈಸೂರು ಭಾಗದಲ್ಲಿ ಇಂದಿಗೂ ಕೃಷ್ಣ ಸಾಕಷ್ಟು ಪ್ರಭಾವ ಹೊಂದಿದ್ದಾರೆ. ಆದರೆ, ಚುನಾವಣೆಗಾಗಿ ಪಕ್ಷ ಅವರ ಸಲಹೆ ಕೇಳದಿರುವುದು, ಅವರ ಬೆಂಬಲಿಗರಿಗೆ ಟಿಕೆಟ್ ನೀಡದಿರುವುದು, ಪ್ರಚಾರದ ಹೆಚ್ಚಿನ ಜವಾಬ್ದಾರಿ ವಹಿಸದಿರುವುದರಿಂದ ಕೃಷ್ಣ ಮೌನಕ್ಕೆ ಶರಣಾಗಿದ್ದಾರೆ.
ಆಪ್ತರು, ಅಭಿಮಾನಿಗಳು ಪ್ರೀತಿಯಿಂದ ಕರೆದಾಗ ಅವರ ಕ್ಷೇತ್ರಗಳಿಗೆ ಹೋಗಿ ಮಾತ್ರ ಪ್ರಚಾರ ಮಾಡಿ ಹಿಂದಿರುಗುವ ಕೃಷ್ಣ ಕೆಪಿಸಿಸಿ ಕಚೇರಿಯೊಳಗೆ ಇದುವರೆಗೂ ಕಾಲಿಟ್ಟಿಲ್ಲ. ಮಾಧ್ಯಮಗಳ ಮುಂದೆ ಮಾತನಾಡುವ ಕೃಷ್ಣ ಪಕ್ಷದ ಮುಖಂಡರ ವಿರುದ್ದ ಮುನಿಸಿಕೊಂಡಿದ್ದಾರೆ ಎಂಬುದು ಸತ್ಯ.
ಕೃಷ್ಣ ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಿರುವುದು ಚುನಾವಣೆ ಫಲಿತಾಂಶದ ಮೇಲೆ ಪ್ರಭಾವ ಬೀರಿ ಅಧಿಕಾರ ಕೈ ತಪ್ಪಿದರೆ ಎಂಬ ಶಂಕೆ ಕಾಂಗ್ರೆಸ್ ವಲಯದಲ್ಲಿ ದಟ್ಟವಾಗಿ ಹರಡಿದೆ. ಹೀಗೆ ಆಗುವುದು ಬೇಡ ಎಂದು ಕಾಂಗ್ರೆಸ್ ಮುಖಂಡರು ಆಶಿಸುತ್ತಿದ್ದಾರೆ. ಆದರೆ, ಅಂತಿಮ ತೀರ್ಪು ಮತದಾರನಿಗೆ ಸೇರಿದ್ದು.
ಅಲ್ಪ ಸಂಖ್ಯಾತ ಮತಗಳನ್ನು ನಂಬಿಕೊಂಡಿದ್ದ ಕಾಂಗ್ರೆಸ್ ಜಾಫರ್ ಷರೀಫ್ ಮತ್ತು ಎಸ್.ಪಿ.ಸಾಂಗ್ಲಿಯಾನ ಅವರನ್ನು ಸೂಕ್ತವಾಗಿ ಪ್ರಚಾರಕ್ಕೆ ಬಳಸಿಕೊಂಡಿಲ್ಲ. ಆಡಳಿತ ವಿರೋಧಿ ಅಲೆಯಲ್ಲಿ ತೇಲುತ್ತಾ, ಅಧಿಕಾರ ಪಡೆಯುವ ಕನಸು ಅಷ್ಟು ಸುಲಭವಾಗಿ ನನಸಾಸುವುದಿಲ್ಲ.
ಮೋದಿ ಮೋಡಿ : ತಮ್ಮ ಒಂದು ಪ್ರಚಾರ ಭಾಷಣದಲ್ಲೇ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಮೋಡಿ ಮಾಡಿ ಹೋಗಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಕಟುವಾಗಿ ಟೀಕಿಸುವ ಮೋದಿ ಮಾತುಗಳು, ಮತಗಳಾಗಿ ಬದಲಾದರೆ ಎಂಬ ಚಿಂತೆಯೂ ಕಾಂಗ್ರೆಸ್ ಪಕ್ಷವನ್ನು ಕಾಡುತ್ತಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಧಾನಿ ಡಾ.ಮನಮೋಹನ್ ಸಿಂಗ್ ಪ್ರಚಾರ ಮಾಡಿದರೂ, ಜನರು ಮತ ಹಾಕುತ್ತಾರೆ ಎಂದು ಮುಖಂಡರು ಭಾವಿಸಿಲ್ಲ. ಇಂತಹ ಕೆಲವು ಬೆಳವಣಿಗೆಗಳು ಪಕ್ಷದ ಉತ್ಸಾಹವನ್ನು ಕಡಿಮೆ ಮಾಡಿವೆ.
ಚುನಾವಣೆಗೆ ಕೇವಲ ದಿನಗಣನೆ ಆರಂಭವಾಗಿರುವುದರಿಂದ ಕಾಂಗ್ರೆಸ್ ಲೆಕ್ಕಾಚಾರದಲ್ಲಿ ಮುಳುಗಿದೆ. ಜನತೆಯ ಲೆಕ್ಕಾಚಾರವೇನು? ಯಾರಿಗೆ ಹೆಚ್ಚಿನ ಅಂಕ ಎಂಬುದು ಮೇ 8ರಂದು ತಿಳಿದು ಬರಲಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications