ಮಹಾಸಮರ : ಕಾರ್ಯತಂತ್ರ ಬದಲಾಯಿಸಿದ ಬಿಜೆಪಿ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್ಲಾಲ್ ಅವರ ನೇತೃತ್ವದಲ್ಲಿ ಸಮಿತಿ ವಿಧಾನಸಭಾ ಕ್ಷೇತ್ರಗಳನ್ನು ಎ,ಬಿ,ಸಿ ಎಂದು ವಿಂಗಡಿಸಿದ್ದು, ಪಕ್ಷದ ಸ್ಟಾರ್ ಪ್ರಚಾರಕರು ಬಿ ಮತ್ತು ಸಿ ಕ್ಷೇತ್ರಗಳಲ್ಲಿ ಮಾತ್ರ ಪ್ರಚಾರ ನಡೆಸಲಿದ್ದಾರೆ.
ಎ ಪಟ್ಟಿಯಲ್ಲಿ ಬರುವ ಕೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತವಾಗಿದ್ದು ಪಕ್ಷ 55 ಕ್ಷೇತ್ರಗಳನ್ನು ಎ ಪಟ್ಟಿಯಲ್ಲಿ ಸೇರಿಸಿದೆ. ಬಿ ಪಟ್ಟಿಯಲ್ಲಿ ಪ್ರಯತ್ನ ಮಾಡಿದರೆ ಗೆಲ್ಲುವ ಕ್ಷೇತ್ರಗಳನ್ನು ಸೇರಿಸಲಾಗಿದೆ. ಸಿ ಕೊನೆಯ ಹಂತವಾಗಿದ್ದು ಇಲ್ಲಿ ಪಕ್ಷ ಗೆಲವು ಸಾಧಿಸುವುದು ಸಾಧ್ಯವೇ ಇಲ್ಲ ಎಂದು ಸಮಿತಿ ಪಟ್ಟಿ ಮಾಡಿದೆ.
ಏನಿದು ಕಾರ್ಯತಂತ್ರ : ಕ್ಷೇತ್ರಗಳನ್ನು ವಿಂಗಡನೆ ಮಾಡಿಕೊಂಡು ಹೆಚ್ಚಿನ ಒತ್ತು ನೀಡಿ ಪ್ರಚಾರ ನಡೆಸುವುದು ಮತ್ತು ರಾಷ್ಟ್ರೀಯ ನಾಯಕರನ್ನು ಬಿ ಕ್ಷೇತ್ರಗಳಿಗೆ ಕರೆದುಕೊಂಡು ಹೋಗುವುದು ಪಕ್ಷದ ಆಲೋಚನೆ.
ಬಿ ಪಟ್ಟಿಯುಲ್ಲಿ 65ಕ್ಕೂ ಹೆಚ್ಚು ಕ್ಷೇತ್ರಗಳನ್ನು ಆಯ್ಕೆ ಮಾಡಲಾಗಿದ್ದು, ಮಂಗಳೂರು ಮತ್ತು ಬೆಳಗಾವಿ ಜಿಲ್ಲೆಗಳನ್ನು ಎರಡನೇ ಪಟ್ಟಿಯಲ್ಲಿ ಗುರುತಿಸಲಾಗಿದೆ. ಆದ್ದರಿಂದಲೇ ನರೇಂದ್ರ ಮೋದಿ ಮಂಗಳೂರು ಮತ್ತು ಬೆಳಗಾವಿಯಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ ಎಂಬುದು ಪಕ್ಷದ ಮೂಲಗಳು ನೀಡಿರುವ ಮಾಹಿತಿ.
ಎ ಕ್ಷೇತ್ರಗಳೆಂದು ಗುರುತಿಸಿರುವ ಪಟ್ಟಿಯಲ್ಲಿ ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ, ಬಾಗಲಕೋಟೆ ಮುಂತಾದ ಜಿಲ್ಲೆಗಳನ್ನು ಪಟ್ಟಿ ಮಾಡಲಾಗಿದೆ. ರಾಷ್ಟ್ರೀಯ ನಾಯಕರು ಈ ಕ್ಷೇತ್ರಗಳಲ್ಲಿ ಇನ್ನು ಪ್ರಚಾರ ನಡೆಸುವುದಿಲ್ಲ. ಅಲ್ಲಿನ ಸ್ಥಳೀಯ ನಾಯಕರು ಪ್ರಚಾರದ ಉಸ್ತುವಾರಿ ನೋಡಿಕೊಳ್ಳಬೇಕು.
ಸಿ ಕ್ಷೇತ್ರಗಳೆಂದು ಗುರುತಿಸಿರುವ ಕ್ಷೇತ್ರಗಳು ಬಿಜೆಪಿ ಕೈ ತಪ್ಪುವುದು ಖಚಿತವಾಗಿದೆ. ಆದ್ದರಿಂದ ಆ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿಲ್ಲ ಎಂದು ಸಮಿತಿ ವರದಿ ನೀಡಿದೆ. ಸಮಿತಿಯ ವರದಿಯಂತೆ ಪಕ್ಷ ರಾಷ್ಟ್ರೀಯ ನಾಯಕರ ವೇಳಾಪಟ್ಟಿಯಲ್ಲಿಯೂ ಬದಲಾವಣೆ ಮಾಡಿದೆ.
ಆಡಳಿತ ವಿರೋಧಿ ಅಲೆಯನ್ನು ಬದಿಗೊತ್ತಿ ಮತ್ತೊಮ್ಮೆ ಅಧಿಕಾರ ಪಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಬಹಿರಂಗ ಚುನಾವಣಾ ಪ್ರಚಾರ ಕೊನೆಗೊಳ್ಳಲು ಮೂರು ದಿನಗಳು ಬಾಕಿ ಉಳಿದಿರುವಾಗ ಕಾರ್ಯತಂತ್ರ ಬದಲಾವಣೆ ಮಾಡಿಕೊಂಡಿದೆ. ಇದರ ಫಲಿತಾಂಶವೇನು ಎಂಬುದು ಮೇ 8ರಂದು ತಿಳಿದು ಬರಲಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications