ಬಂಟ್ವಾಳ: ನಾಗರಾಜ ಶೆಟ್ರನ್ನು ಕುಮಾರಣ್ಣ ಓಡ್ಸಿದ್ದೇಕೆ?
ಆದರೆ ಜಿಲ್ಲೆಯ ಪ್ರಭಾವಿ ನಾಯಕ ನಾಗರಾಜ ಶೆಟ್ಟಿ ಜೆಡಿಎಸ್ ಜತೆಗಿನ ಸಂಬಂಧವನ್ನು ಆರೇ ತಿಂಗಳಲ್ಲಿ ಕಡಿದುಕೊಂಡಿದ್ದೇಕೆ ಎಂಬ ಪ್ರಶ್ನೆಗೆ ಬಂಟ್ವಾಳದ ಕಡೆಯಿಂದ ಉತ್ತರ ಬಂದಿದೆ.
ಬಂಟ್ವಾಳದ ಜೆಡಿಎಸ್ ಅಭ್ಯರ್ಥಿ ಕೃಷ್ಣಪ್ಪ ಪೂಜಾರಿ ಹೇಳುವಂತೆ ನಾಗರಾಜ ಶೆಟ್ರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುವಾಗ ಕುಮಾರಸ್ವಾಮಿ ಅವರಿಂದ 2 ಕೋಟಿ ರೂ. ಕೇಳಿದ್ದರಂತೆ. ಅದಕ್ಕೆ ಕುಮಾರಸ್ವಾಮಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದರಾದರೂ ಮೊದಲು ಪಕ್ಷವನ್ನು ಸಂಘಟಿಸಿ, ಬಲವರ್ಧನೆ ಮಾಡುವಂತೆ ಶೆಟ್ರಿಗೆ ತಾಕೀತು ಮಾಡಿದ್ದರಂತೆ.
ಆದರೆ ಶೆಟ್ಟರು ಈ ಭಾಗದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸದೆ ಸುಮ್ಮನೇ ಕಾಲಹರಣ ಮಾಡತೊಡಗಿದರು. ಜತೆಗೆ ಅದಕ್ಕೆ ವ್ಯತಿರಿಕ್ತವಾಗಿ ಪಕ್ಷವನ್ನು ಒಡೆಯತೊಡಗಿದರು. ತತ್ಫಲವಾಗಿ ಬಂಟ್ವಾಳದಲ್ಲಿ ಈಗ ಶೆಟ್ಟರ ಮೇಲೆ ಯಾರಿಗೂ ನಂಬಿಕೆಯಿಲ್ಲವಾಗಿದೆ. ಶೆಟ್ಟರ ಜತೆ ಇನ್ನೂ ಒಂದಷ್ಟು ಮಂದಿ ಬಿಜೆಪಿಗೆ ಹೋಗಿರುವುದು ಜೆಡಿಎಸ್ಸಿಗೆ ಒಳ್ಳೆಯದೇ ಆಯ್ತು. ಇಂತಹ ಅಪ್ರಯೋಜಕರು ನಮ್ಮ ಪಕ್ಷಕ್ಕೆ ಬೇಡವಾಗಿದ್ದರು' ಎಂದು ಪೂಜಾರಿ ಸುದ್ದಿಗಾರರಿಗೆ ತಿಳಿಸಿದರು.
ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಮೊಹಮದ್ ಷಫಿ ಅವರು ಇದೇ ಸಂದರ್ಭದಲ್ಲಿ ಮಾತನಾಡಿ, ಅಲ್ಪಸಂಖ್ಯಾತರು ಕಾಂಗ್ರೆಸ್ ಬಗ್ಗೆ ಭ್ರಮನಿರಸಗೊಂಡಿದ್ದಾರೆ. ಇನ್ನು, ಹಿಂದುಳಿದವರು ಬಿಜೆಪಿ ವಿರುದ್ಧ ತೀವ್ರವಾಗಿ ಅಸಮಾಧಾನಗೊಂಡಿದ್ದಾರೆ. ಇದರಿಂದ ಮತದಾರ ಜೆಡಿಎಸ್ಸಿನತ್ತ ಭರವಸೆಯ ಕಣ್ಣುಗಳಿಂದ ನೋಡುತ್ತಿದ್ದಾನೆ. ತಮ್ಮ ಪಕ್ಷಕ್ಕೆ ಇದೇ ಬಲ ತಂದಿರುವುದು ಎಂದು ಪ್ರಚಲಿತ ಚುನಾವಣಾ ಕಣವನ್ನು ಬಿಡಿಸಿಟ್ಟಿದ್ದಾರೆ.