ದೇಶ ಮೊದಲು ವ್ಯಕ್ತಿ ನಂತರ : ಉಮಾಭಾರತಿ

ರಾಜ್ಯ ಚುನಾವಣಾ ಪ್ರಚಾರ ಕಾರ್ಯಕ್ಕಾಗಿ ಬೆಂಗಳೂರಿಗೆ ಶುಕ್ರವಾರ ಸಂಜೆ ಆಗಮಿಸಿದ ಅವರು, ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು, ಬಿಜೆಪಿಯಲ್ಲಿ ದೇಶ ಮೊದಲು, ವ್ಯಕ್ತಿ ನಂತರ. ಅಹಂಕಾರ ಮತ್ತು ನಾನು ಎನ್ನುವವರಿಗೆ ಬಿಜೆಪಿಯಲ್ಲಿ ಅವಕಾಶವಿಲ್ಲ ಎಂದು ಪರೋಕ್ಷವಾಗಿ ಯಡಿಯೂರಪ್ಪ ಅವರಿಗೆ ಟಾಂಗ್ ನೀಡಿದರು.
ಯಡಿಯೂರಪ್ಪ ಅವರಿಗಿಂತ ಮೊದಲು ನಾನು ಮುಖ್ಯಮಂತ್ರಿ ಹುದ್ದೆ ಏರಿದ್ದೆ. ಆದರೆ, ಅವರು ನನಗಿಂತ ಹಿರಿಯರು. ಅನುಭವ ಹೊಂದಿರುವವರು. ಅವರನ್ನು ಪಕ್ಷಕ್ಕೆ ಮರಳಿ ಕರೆತರುವುದು ವರಿಷ್ಠ ನಾಯಕರಿಗೆ ಬಿಟ್ಟ ವಿಚಾರ ಎಂದು ಹೇಳಿದರು.
ನನ್ನನ್ನು ಪಕ್ಷವೇ ಹೊರಗೆ ಹಾಕಿತ್ತು. ಪಕ್ಷದಿಂದ ಹೊರಗೆ ಇದ್ದು, ಹೋರಾಡುವುದು ಎಷ್ಟು ಕಷ್ಟ ಎಂಬ ಅರಿವು ನನಗಿದೆ. ಯಡಿಯೂರಪ್ಪ ಅವರೇ ಪಕ್ಷ ತೊರೆದಿದ್ದಾರೆ. ಸತ್ಯದ ಅರಿವಾದಾಗ ಮರಳಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಎಂದರೆ ಅಭಿವೃದ್ಧಿ : ಇಡೀ ದೇಶದಲ್ಲಿ ಅಭಿವೃದ್ಧಿಯ ಮಂತ್ರ ಪಠಿಸುತ್ತಾ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ಬಿಜೆಪಿ ಮಾತ್ರ. ಉಳಿದ ಪಕ್ಷಗಳು ಭ್ರಷ್ಟಾಚಾರ ಮಾಡಿಕೊಂಡು ಜನರ ಹಿತವನ್ನು ಮರೆತಿವೆ ಎಂದು ಆರೋಪಿಸಿದರು.
ರಾಹುಲ್ ಗಾಂಧಿಗೆ ನೈತಿಕತೆ ಇಲ್ಲ: ಬಿಜೆಪಿ ಎಂದರೆ ಭ್ರಷ್ಟಾಚಾರ ಎಂಬ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕೆಗೆ ಉತ್ತರಿಸಿದ ಉಮಾ ಭಾರತಿ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ರಾಹುಲ್ ಗಾಂಧಿ ಯಾವ ಕಾಂಗ್ರೆಸ್ ನಾಯಕರಿಗೂ ನೈತಿಕತೆ ಇಲ್ಲ ಎಂದರು.
ಬಿಜೆಪಿ ಯಾವತ್ತೂ ಭ್ರಷ್ಟಾಚಾರವನ್ನು ಸಮರ್ಥಿಸಿಕೊಂಡಿಲ್ಲ. ಪಕ್ಷದಲ್ಲಿ ಅಧಿಕಾರದಲ್ಲಿದ್ದವರ ಮೇಲೆ ಆರೋಪ ಬರುತ್ತಿದ್ದಂತೆ ಅವರನ್ನು ಅಧಿಕಾರದಿಂದ ಕೆಳಗಿಳಿಸಿದೆ. ರಾಹುಲ್ಗಾಂಧಿ ಅವರ ಕಾಂಗ್ರೆಸ್ ಪಕ್ಷದಲ್ಲಿ ಭ್ರಷ್ಟಾಚಾರ ಮಾಡಿದವರಿಗಡ ಉನ್ನತ ಸ್ಥಾನ ನೀಡಿದ್ದಾರೆ ಎಂದು ದೂರಿದರು.
ರಾಜ್ಯದ ಬಗ್ಗೆ ಹೆಮ್ಮೆ ಇದೆ : ಕರ್ನಾಟಕದಲ್ಲಿ ಮಾತನಾಡುವಾಗ ನಾನು ಭಾವೋದ್ವೇಗಕ್ಕೆ ಒಳಗಾಗುತ್ತೇನೆ. ಪೇಜಾವರ ಶ್ರೀ ವಿಶ್ವೇಶತೀರ್ಥರು ನನ್ನ ಗುರುಗಳು. ಅವರಿಂದಲೇ ನಾನು ಸನ್ಯಾಸ ಸ್ವೀಕರಿಸಿದೆ. ಆದ್ದರಿಂದ ರಾಜ್ಯದ ಬಗ್ಗೆ ನನಗೆ ಹೆಚ್ಚು ಆತ್ಮೀಯ ಸಂಬಂಧವಿದೆ ಎಂದರು.
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ತ್ರಿವರ್ಣಧ್ವಜ ಹಾರಿಸುವ ವಿವಾದವನ್ನು ನೆನಪಿಸಿಕೊಂಡರೆ ಕರ್ನಾಟಕದೊಂದಿಗೆ ನಾನು ಭಾವನಾತ್ಮಕ ಸಂಬಂಧ ಹೊಂದಿದ್ದೇನೆ ಎಂದು ತಿಳಿಯುತ್ತದೆ ಎಂದು ಹೇಳಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications