ಅಂಬರೀಶ್ ಶಕ್ತಿಯುತ ನಾಯಕ : ಕೃಷ್ಣ ವ್ಯಂಗ್ಯ
ಶನಿವಾರ ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡಿದ್ದ ಕೃಷ್ಣ, ಮಂಡ್ಯ ಜಿಲ್ಲೆಯಲ್ಲಿ ಎಲ್ಲಾ ಕಡೆ ಪ್ರಚಾರ ಮಾಡಲು ನನಗೆ ಸಾಧ್ಯವಾಗಿಲ್ಲ. ಆದರೂ ಆ ಜಿಲ್ಲೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸುವ ನಾಯಕರಿದ್ದಾರೆ. ನಾನು ನಾಯಕರಿಲ್ಲದ ಕ್ಷೇತ್ರಗಳಲ್ಲಿ ಮಾತ್ರ ಪ್ರಚಾರ ಮಾಡುತ್ತೇನೆ ಎಂದರು.
ಮಂಡ್ಯ ನನ್ನ ತವರೂರು ನಿಜ. ನಾನೀಗ ಅಲ್ಲಿನ ರಾಜಕಾರಣದಿಂದ ಹೊರಬಂದಿದ್ದೇನೆ. ಬೆಂಗಳೂರು ಈಗ ನನ್ನ ಕಾರ್ಯಕ್ಷೇತ್ರ. ಆದ್ದರಿಂದ ಮಂಡ್ಯದ ರಾಜಕಾರಣದ ಬಗ್ಗೆ ಆಸಕ್ತಿ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.
ದಲಿತ ಅಥವ ಹಿಂದುಳಿದವರು ಮುಖ್ಯಮಂತ್ರಿ : ರಾಜ್ಯದಲ್ಲಿ ಈ ಬಾರಿ ದಲಿತ ಅಥವ ಹಿಂದುಳಿದ ಸಮುದಾಯಕ್ಕೆ ಸೇರಿದವರು ಮುಖ್ಯಮಂತ್ರಿಯಾಗಬಹುದು ಎಂದು ಹೇಳುವ ಮೂಲಕ ಕೃಷ್ಣ ಕುತೂಹಲ ಹುಟ್ಟು ಹಾಕಿದ್ದಾರೆ.
ಆದರೆ, ಪರಮೇಶ್ವರ್, ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಲ್ಲಿ ಯಾರು? ಮುಖ್ಯಮಂತ್ರಿ ಆಗುತ್ತಾರೆ ಎಂದು ಅವರು ಸ್ಪಷ್ಟವಾಗಿ ಹೇಳಲಿಲ್ಲ. ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಎಲ್ಲರಲ್ಲೂ ಇರುತ್ತದೆ. ಕಾಂಗ್ರೆಸ್ ಬಹುಮತ ಗಳಿಸಲಿದೆ. ದಲಿತರು ಅಥವ ಹಿಂದುಳಿದವರು ಮುಖ್ಯಮಂತ್ರಿ ಆಗುವುದು ಖಚಿತವೆಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷ ಸಲಹೆ ಕೇಳಲಿಲ್ಲ : ಕೇಂದ್ರದಲ್ಲಿ ಸಚಿವ ಸ್ಥಾನ ತ್ಯಜಿಸಿ ರಾಜ್ಯಕ್ಕೆ ಮರಳಿದ ಬಳಿದ ನನ್ನ ಅನುಭವವನ್ನು ಪಕ್ಷದ ನಾಯಕರು ಕೇಳಲಿಲ್ಲ. ಆದ್ದರಿಂದ ಚುನಾವಣೆ ಬಗ್ಗೆ ಯಾವುದೇ ಸಲಹೆ ನೀಡಲಿಲ್ಲ. ನನ್ನ ಅನುಭವವನ್ನು ಕಾಂಗ್ರೆಸ್ ಬಳಸಿಕೊಳ್ಳಲಿಲ್ಲ ಎಂಬ ಬಗ್ಗೆ ನನಗೆ ಯಾವುದೇ ನೋವು ಇಲ್ಲ ಎಂದರು.
80 ವರ್ಷವಾದ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಯಾರು ಅಧಿಕಾರದಲ್ಲಿ ಮುಂದುವರೆಯಬಾರದು ಎಂಬ ನಿಯಮವಿದೆ. ಆದ್ದರಿಂದ ಕೇಂದ್ರ ಸಚಿವ ಸ್ಥಾನ ತ್ಯಜಿಸಿ ಬಂದಿದ್ದೇನೆ. ನಾಲ್ಕು ದಶಕಗಳ ಕಾಲ ನಾನು ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ ಅದಕ್ಕಾಗಿ ತೃಪಿ ಇದೆ ಎಂದರು.
ಪ್ರಚಾರದಿಂದ ದೂರವಿಲ್ಲ : ಕೃಷ್ಣ ಪ್ರಚಾರ ಕಾರ್ಯಗಳಿಂದ ದೂರಉಳಿದಿಲ್ಲ. ಬೆಂಗಳೂರಿನಲ್ಲಿ ಎರಡು ದಿನ ಹಾಗೂ ಮಂಡ್ಯ ಜಿಲ್ಲೆಯ ಕೆಲವು ಕಡೆ ಪ್ರಚಾರ ಮಾಡಿದ್ದೇನೆ. ಪಕ್ಷ ಬಯಸಿದರೆ ಬೇರೆ ಕ್ಷೇತ್ರಗಳಲ್ಲೂ ಪ್ರಚಾರ ನಡೆಸುತ್ತೇನೆ ಎಂದರು.
ಒಗ್ಗಟ್ಟಾಗಿದ್ದೇವೆ : ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಒಟ್ಟಾಗಿ ಚುನಾವಣೆ ಎದುರಿಸಲಿದ್ದೇವೆ ಎಂದು ಹೇಳಿದರು. ಪಕ್ಷಕ್ಕೆ ಬಹುಮತ ತರಲು ನಾವು ಪ್ರಯತ್ನಿಸುತ್ತೇವೆ.ಬಿಜೆಪಿಯ ಆಡಳಿತ ವೈಫ್ಯವೇ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಹಾಯಕವಾಗಲಿದೆ ಎಂದು ಹೇಳಿದರು.
ವಿಶ್ರಾಂತಿ ಬೇಕು : ನನಗೆ ವಿಶ್ರಾಂತಿಯ ಅಗತ್ಯವಿದೆ. ಟೆನಿಸ್ ಆಟವಾಡುತ್ತಾ, ಯೋಗ ಮಾಡುತ್ತಾ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುತ್ತಾ, ವಿಶ್ರಾಂತಿ ಪಡೆಯುತ್ತಿದ್ದೇನೆ. ನನಗೆ ಯಾವುದೇ ಅಧಿಕಾರ ಬೇಕಾಗಿಲ್ಲ. ಪಕ್ಷ ಎಲ್ಲವನ್ನು ನೀಡಿದೆ ಎಂದು ಹೇಳಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ