ಯುಆರ್ಎಗೆ ಕಾಮಾಲೆ ಕಣ್ಣು: ಈಶ್ವರಪ್ಪ ಕಿಡಿ
ಚುನಾವಣೆ ಸಂದರ್ಭಗಳಲ್ಲಿ ಮಾತ್ರ ಹುಟ್ಟಿಕೊಳ್ಳುವ ಅಣಬೆಗಳು ಬಾಯಿಚಪಲಕ್ಕಾಗಿ ಏನೇನೋ ಮಾತನಾಡುತ್ತಾರೆ. ಅವರನ್ನು ಮತದಾರರು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂಬುದು ಅವರಿಗೆ ಗೊತ್ತಿಲ್ಲ ಎಂದು ಈಶ್ವರಪ್ಪ ಲೇವಡಿ ಮಾಡಿದರು.
ಅನಂತಮೂರ್ತಿಗಳೇ ನಿಮ್ಮ ಮಾತು ಯಾರು ಕೇಳಲ್ಲ. ಚುನಾವಣೆ ಬಂದಾಗ ಜೀವಂತವಾಗಿದ್ದೇವೆಂದು ತೋರಿಸಿಕೊಳ್ಳಲು ಎದ್ದು ಬರುತ್ತಾರೆ. ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಲ್ಲಿರುವುದನ್ನು ಅನಂತಮೂರ್ತಿ ಮೈಗೂಡಿಸಿಕೊಂಡಿದ್ದಾರೆ. ಇವರ ಮಾತನ್ನು ಯಾರು ಕೇಳುತ್ತಾರೋ ಗೊತ್ತಿಲ್ಲ ಎಂದು ಈಶ್ವರಪ್ಪ ಕಿಡಿಕಾರಿದ್ದಾರೆ.
ಯುಆರ್ಎ ಹೇಳಿಕೆಗೆ ಖಂಡನೆ: ಬಿಜೆಪಿ ಕೋಮುವಾದಿ ಪಕ್ಷ, ಎಲ್ಲರೂ ಕಾಂಗ್ರೆಸ್ ಕೈ ಹಿಡಿಯಿರಿ ಎಂದು ಇತ್ತೀಚೆಗೆ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ. ಯು.ಆರ್ ಅನಂತಮೂರ್ತಿ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಸಾಹಿತ್ಯವಲಯದಲ್ಲೂ ಟೀಕೆಗಳು ಕೇಳಿಬಂದಿದೆ.
ಕೋಮುವಾದಿ ಯಾರು? : ಜಾತಿವಾದ, ಕೋಮುವಾದ ಯಾರು ಮಾಡುತ್ತಿದ್ದಾರೆ? ಕಾಂಗ್ರೆಸ್ಸಿನಲ್ಲಿ ಕೋಮುವಾದವನ್ನು ಮೊದಲು ಅನಂತಮೂರ್ತಿ ಅರ್ಥ ಮಾಡಿಕೊಳ್ಳಬೇಕು. ಲಿಂಗಾಯತ ನಾಯಕ ಶಾಮನೂರು ಶಿವಶಂಕರಪ್ಪ ಹಿಂದುಳಿದ ವರ್ಗ ಪರ ಅಧ್ಯಕ್ಷ ಪರಮೇಶ್ವರ್, ಅಹಿಂದ ಪರವಾಗಿ ಸಿದ್ದರಾಮಯ್ಯ ಪೈಪೋಟಿ ನಡೆಸುತ್ತಿಲ್ಲವೇ ಎಲ್ಲರನ್ನು ಸಮಾನವಾಗಿ ನೋಡುವ ನಾಯಕರು ಎಲ್ಲಿದ್ದಾರೆ? ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.
ವಿಕಾರ ಮನಸ್ಸಿನ ಬುದ್ಧಿಜೀವಿಗಳು, ಸಾಹಿತಿಗಳು ಕಾಂಗೆಸ್ ಬೆಂಬಲ ನೀಡಿ ಬಿಜೆಪಿ ವಿರುದ್ಧ ಅನಗತ್ಯ ಟೀಕೆ, ಹೇಳಿಕೆ ಮಾಡುತ್ತಿರುವುದನ್ನು ಖಂಡಿಸಿ ವಿಧಾನಪರಿಷತ್ ಸದಸ್ಯೆ ಡಾ.ಎಸ್.ಆರ್ ಲೀಲಾ ಹಾಗೂ ಸಾಹಿತಿ ದೊಡ್ಡರಂಗೇಗೌಡ ಅವರು ಸುದ್ದಿಗೋಷ್ಠಿ ನಡೆಸಿದರು.
ಕಾಂಗ್ರೆಸ್ ಗೆ ಬೆಂಬಲ ನೀಡಬೇಕು ಎಂದು ಹೇಳಿಕೆ ನೀಡಿರುವ ಡಾ. ಯುಆರ್ ಅನಂತಮೂರ್ತಿ ಸೇರಿದಂತೆ ಹಲವು ಸಾಹಿತಿಗಳ ವಿರುದ್ಧ ಪ್ರೊ.ಲೀಲಾ ವಾಗ್ದಾಳಿ ನಡೆಸಿದರು.
ಬುದ್ಧಿಜೀವಿಗಳು ತರ್ಕಬದ್ಧ ಮತ್ತು ಸಾಮಾನ್ಯ ಜ್ಞಾನವನ್ನು ಇಟ್ಟುಕೊಂಡು ಮಾತನಾಡಬೇಕು. ಕಳೆದ ವರ್ಷ ಕೂಡಾ ಯುಆರ್ ಎ ಇದೇ ರೀತಿ ಮತ ಪ್ರಚಾರ ಮಾಡಿದ್ದರು. ಬಿಜೆಪಿಗೆ ಮತ ಹಾಕಬೇಡಿ ಎಂದಿದ್ದರು. ಅವರ ಮಾತು ಯಾರು ಕೇಳಲಿಲ್ಲ.
ಮುರಳಿ ಮನೋಹರ್ ಜೋಶಿ ಅವರು ಕೇಂದ್ರ ಮಾನವ ಸಂಪನ್ಮೂಲ ಸಚಿವರಾಗಿದ್ದಾಗ ಮದರಸಾಗಳಿಗೆ 500 ಕೋಟಿ ರು ಅನುದಾನ ಬಿಡುಗಡೆ ಮಾಡಿದ್ದರು. ಆದರೆ, ಇದೇ ಕೆಲಸವನ್ನು ಯುಪಿಎ ಸರ್ಕಾರ ಏಕೆ ಮಾಡಿಲ್ಲ ಎಂದು ಲೀಲಾ ಪ್ರಶ್ನಿಸಿದರು.
ಬಾಂಗ್ಲಾದೇಶದಿಂದ ನುಸುಳುಕೋರರು ಹೆಚ್ಚಾಗುತ್ತಿದ್ದಾರೆ. ಇದನ್ನು ನಿಯಂತ್ರಿಸಿದರೆ ಕೋಮುವಾದಿಗಳು ಎನ್ನಲಾಗುತ್ತದೆ. ದೇಶಕ್ಕೆ ಗಾಂಜಾ, ಅಫೀಮು ಯಾವ ದೇಶಗಳಿಂದ ಬರುತ್ತದೆ, ಭಯೋತ್ಪಾದನೆ ಮೂಲ ಎಲ್ಲಿದೆ ಎಂದು ಸತ್ಯ ಹೇಳಿದರೆ ಅದು ಕೋಮುವಾದವಾಗುತ್ತದೆ. ಇವರಿಗೆ ಮಾತನಾಡಲು 2ಜಿ, ಕಲ್ಲಿದ್ದಲು ಹಗರಣ ಸಿಗುವುದಿಲ್ಲವೇ ಎಂದು ಪ್ರೊ ದೊಡ್ಡರಂಗೇಗೌಡ ಪ್ರಶ್ನಿಸಿದ್ದಾರೆ.