ಈಶ್ವರಪ್ಪ ಉದ್ರೇಕಕಾರಿ ಭಾಷಣ: ಆಯೋಗ ಕಿಡಿಕಿಡಿ
ಚುನಾವಣೆ ಪ್ರಚಾರ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಇತ್ತೀಚೆಗೆ ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಉಪ ಮುಖ್ಯಮಂತ್ರಿ ಈಶ್ವರಪ್ಪಗೆ ಛೀಮಾರಿ ಹಾಕಿರುವ ಕೇಂದ್ರ ಚುನಾವಣಾ ಆಯೋಗವು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗುವಂತಹ ಪ್ರಚೋದನಾಕಾರಿ ಹೇಳಿಕೆಗಳನ್ನು ಇನ್ನು ಮುಂದೆ ನೀಡದಂತೆ ಎಚ್ಚರಿಕೆ ನೀಡಿದೆ.
ಏ. 9 ರಂದು ಚುನಾವಣಾ ಪ್ರಚಾರ ಸಭೆಯಲ್ಲಿ ಈಶ್ವರಪ್ಪ ಅವರು, 'ಶಿವಮೊಗ್ಗ ನಗರವೊಂದರಲ್ಲೇ 68 ಬ್ರಾಹ್ಮಣ ಯುವತಿಯರನ್ನು ಪ್ರೀತಿ ಹೆಸರಿನಲ್ಲಿ ಮುಸ್ಲಿಂ ಯುವಕರು ಅಪಹರಿಸಿದ್ದಾರೆ. ಆರು ತಿಂಗಳ ಕಾಲ ಇಟ್ಟುಕೊಂಡು ನಂತರ ಮನೆಗೆ ಬಿಟ್ಟಿದ್ದಾರೆ. ಮರ್ಯಾದೆಗೆ ಹೆದರಿ ಪೋಷಕರು ಮೌನವಹಿಸಿದ್ದಾರೆ' ಎಂದು ಹೇಳಿದ್ದರು.
ಈಶ್ವರಪ್ಪ ಅವರು ಪ್ರಚೋದನಾಕಾರಿ ಹೇಳಿಕೆ ನೀಡಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಕೇಂದ್ರ ಚುನಾವಣಾ ಆಯೋಗವು ಈಶ್ವರಪ್ಪ ಅವರ ಭಾಷಣದ ಧ್ವನಿಮುದ್ರಿಕೆಯನ್ನು ಪರಿಶೀಲಿಸಿ, ಸಮಜಾಯಿಷಿ ನೀಡುವಂತೆ ಸೂಚಿಸಿತ್ತು.
ಆದರೆ ಈಶ್ವರಪ್ಪ ಇದಕ್ಕೆ ಭಿನ್ನರಾಗ ತೆಗೆದಿದ್ದರು. ಸದರಿ ವಿವಾದಾತ್ಮಕ ಭಾಷಣ ಮಾಡಿದ ವೇಳೆ ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದಿರುವುದಿಲ್ಲ ಎಂದಿದ್ದರು. ಆದರೆ ವಿ ಎಸ್ ಸಂಪತ್ ನೇತೃತ್ವದ ಚುನಾವಣಾ ಆಯುಕ್ತರುಗಳ ಸಮಿತಿ ಈಶ್ವರಪ್ಪ ವಾದವನ್ನು ಒಪ್ಪದೆ 'ಮುಂದೆ ಹುಷಾರಿಗಿರಿ' ಎಂದು ಎಚ್ಚರಿಸಿದೆ.
ಈ ಮಧ್ಯೆ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಸೈಯದ್ ವಾಹೀದ್ ಅಡ್ಡು ಅವರೂ ಈಶ್ವರಪ್ಪ ವಿರುದ್ಧ ಶಿವಮೊಗ್ಗದ ಎರಡನೆ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಖಾಸಗಿ ಕ್ರಿಮಿನಲ್ ದೂರು ದಾಖಲಿಸಿದ್ದಾರೆ. ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದ ನ್ಯಾಯಾಧೀಶ ಅರ್ಜುನ್ ನಲ್ಲೂರು ಅವರು ವಿಚಾರಣೆಯನ್ನು ಜೂನ್ 1ಕ್ಕೆ ಮುಂದೂಡಿದ್ದಾರೆ.