ಅಂಬಾನಿಗೆ ಭದ್ರತೆ, ಸಮರ್ಥಿಸಿಕೊಂಡ ಸರ್ಕಾರ
ನವದೆಹಲಿ, ಏ.23: ರಿಲಯನ್ಸ್ ಕಂಪನಿ ಮುಖ್ಯಸ್ಥ, ಜಗತ್ತಿನ ಅತ್ಯಂತ್ರ ಶ್ರೀಮಂತರಲ್ಲಿ ಒಬ್ಬರಾದ ಮುಖೇಶ್ ಅಂಬಾನಿ ಅವರಿಗೆ ನೀಡಿರುವ 'ಝಡ್' ಶ್ರೇಣಿ ಭದ್ರತೆ ಬಗ್ಗೆ ಮಾಧ್ಯಮಗಳಲ್ಲಿ ಎದ್ದಿರುವ ಅಪಸ್ವರಕ್ಕೆ ಯುಪಿಎ ಸರ್ಕಾರ ಫುಲ್ ಸ್ಟಾಪ್ ಇಟ್ಟಿದೆ.
ಅಂಬಾನಿ ಅವರಿಗೆ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯಿಂದ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಮತ್ತು ಅಂಬಾನಿ ಅವರನ್ನು 'ದೇಶದ ಆಸ್ತಿ' ಎಂದು ಪರಿಗಣಿಸಿ ದಿನದ 24 ಗಂಟೆಯೂ 28 ಕಮಾಂಡೋಗಳಿಂದ 'ಝಡ್' ಶ್ರೇಣಿ ಭದ್ರತೆ ಒದಗಿಸಲಾಗಿದೆ ಎಂದು ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ಹೇಳಿದ್ದಾರೆ.
ಇದಕ್ಕೂ ಮುನ್ನ ಸರ್ಕಾರ ನೀಡಿರುವ ಭದ್ರತೆ ವೆಚ್ಚವನ್ನು ತಾವೇ ಭರಿಸುವುದಾಗಿ ರಿಲಯನ್ಸ್ ಸಂಸ್ಥೆ ಮುಖ್ಯಸ್ಥ ಮುಖೇಶ್ ಹೇಳಿದ್ದರು. ಭದ್ರತಾ ವೆಚ್ಚವನ್ನು ಅಂಬಾನಿ ಅವರು ಭರಿಸುತ್ತಾರೆ ಎಂದು ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರೇ ಸ್ಪಷ್ಟಪಡಿಸಿದರು.

ಇದಕ್ಕೆ ಎಡಪಕ್ಷಗಳ ಮುಖಂಡರು ಮತ್ತು ಆಮ್ ಆದ್ಮಿ ಮುಖಂಡ ಅರವಿಂದ ಕೇಜ್ರಿವಾಲ್ ತೀವ್ರ ವಿರೋಧ ವ್ಯಕ್ತಪಡಿಸಿ, ಜನರಿಗೆ ರಕ್ಷಣೆ ಇಲ್ಲದಿರುವಾಗ, ಜನಸೇವಕರಲ್ಲದ ಶ್ರೀಮಂತ ಉದ್ಯಮಿಗೆ ಜಡ್ ಶ್ರೇಣಿ ಭದ್ರತೆ ಎಂದು ಪ್ರಶ್ನಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಮನೀಶ್ ತಿವಾರಿ ಕೇವಲ ರಕ್ಷಣೆಯ ದೃಷ್ಟಿಯಿಂದ ಮಾತ್ರ ಅಂಬಾನಿಗೆ ಭದ್ರತೆ ನೀಡಲಾಗಿದೆ ಎಂದು ಹೇಳಿದರು. ಸುಮಾರು 15 ಲಕ್ಷ ಜನ ರಿಲಯನ್ಸ್ ಸಂಸ್ಥೆ ಮೇಲೆ ಅವಲಂಬಿತರಾಗಿದ್ದಾರೆ. ದೇಶದ ಜಿಡಿಪಿ ಪ್ರಗತಿ ಅಂದಾಜು ಶೇ 3 ರಷ್ಟು ಕೊಡುಗೆ ನೀಡುತ್ತಿದೆ. ಸಮಾಜದ ಗಣ್ಯರಿಗೆ ಭದ್ರತೆ ನೀಡುವುದು ಸರ್ಕಾರದ ಕೆಲಸ ಎಂದು ಕಾಂಗ್ರೆಸ್ ವಕ್ತಾರರು ಸಮರ್ಥನೆ ನೀಡಿದ್ದಾರೆ.
ನಿಯಮದ ಪ್ರಕಾರ ಕಾನೂನು ಪಾಲಿಸುವ ಎಲ್ಲಾ ನಾಗರೀಕರಿಗೂ ಸೂಕ್ತವಾದ ಭದ್ರತೆ ಪಡೆಯುವ ಹಕ್ಕು ಇರುತ್ತದೆ. ನೇರವಾಗಿ ಯಾವುದೇ ವ್ಯಕ್ತಿಯ ಜೀವಕ್ಕೆ ಭಯ ಇದ್ದರೆ, ಸರ್ಕಾರ ಮೊರೆ ಹೋಗಬಹುದು. ಸಂದರ್ಭಕ್ಕೆ ತಕ್ಕಂತೆ ಪೊಲೀಸ್ ಪೇದೆಯಿಂದ ಹಿಡಿದು ಮೀಸಲು ಪಡೆ ಯೋಧರು (CRPF) ನಾಗರೀಕರ ರಕ್ಷಣೆಗೆ ನಿಲ್ಲುತ್ತಾರೆ. ಈಗ ಅಂಬಾನಿ ಜೀವಕ್ಕೆ ಅಪಾಯ ಇರುವುದರಿಂದ ಸಿಆರ್ ಪಿಎಫ್ ಯೋಧರು ರಕ್ಷಣೆ ಒದಗಿಸಿದ್ದಾರೆ.












Click it and Unblock the Notifications