ಲೈಂಗಿಕ ಕಿರುಕುಳ : ಆಕಾಶವಾಣಿ ಅಧಿಕಾರಿ ಸಸ್ಪೆಂಡ್

ರೇಡಿಯೋ ಜಾಕಿಗಳಿಗೆ ಸತತವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಸಾರ ಭಾರತಿ ಆಧಿಕಾರಿಗಳು ಹೇಳಿದ್ದಾರೆ. ಆಕಾಶವಾಣಿಯ ಉಪ ಮಹಾ ನಿರ್ದೇಶಕರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಹಾಗೂ ಇನ್ನೊಬ್ಬ ಉನ್ನತ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ರೇಡಿಯೋ ಜಾಕಿಗಳು ಆಕಾಶವಾಣಿ ವೃತ್ತಿಪರರ ಒಕ್ಕೂಟ(AIRBPA)ಗೆ ಲಿಖಿತ ದೂರು ನೀಡಿದ್ದರು.
ಈ ಬಗ್ಗೆ ತನಿಖೆ ನಡೆಸಿದ ಪ್ರಸಾರ ಭಾರತಿಯ ನಿವೃತ್ತ ಬ್ರಿಗ್ರೇಡಿಯರ್ ವಿಎ ಎಂ ಹುಸೇನ್ ಅವರು ಪ್ರಸಾರ ಭಾರತಿ ಸಿಇಒ ಜವಹಾರ್ ಸಿರ್ಕಾರ್ ಅವರ ಅನುಮತಿ ಪಡೆದ ನಂತರ ಅಮಾನತು ಆದೇಶ ಹೊರಡಿಸಿದ್ದಾರೆ.
ಇದು ತುಂಬಾ ಸೂಕ್ಷ್ಮವಾದ ವಿಷಯ. ಸಾರ್ವಜನಿಕ ವಲಯದ ಸಂಸ್ಥೆಯಲ್ಲಿ ಈ ರೀತಿ ನಡವಳಿಕೆ ಖಂಡನೀಯ. ಈ ಕೃತ್ಯ ಎಸಗಿದವರು ಹಿರಿಯ ಅಧಿಕಾರಿಗಳು ಎಂಬುದು ಇನ್ನೂ ಶೋಚನೀಯ ಸಂಗತಿ. ತೆರಿಗೆ ಕಟ್ಟಿ ನಮ್ಮನ್ನು ಬೆಳೆಸುತ್ತಿರುವ ಸಾರ್ವಜನಿಕರಿಗೆ ನಾವು ಉತ್ತರಿಸಬೇಕಿದೆ ಎಂದು ಹುಸೇನ್ ಹೇಳಿದ್ದಾರೆ.
ತಕ್ಷಣದ ಅಮಾನತು ಆದೇಶದ ಜೊತೆಗೆ ಅವರ ಮುಂದಿನ ಎಲ್ಲಾ ನಿಗದಿತ ಕಾರ್ಯಕ್ರಮಗಳನ್ನು ರದ್ದುಗೊಳಿಸಲು ಸೂಚಿಸಲಾಗಿದೆ. ತಾತ್ಕಾಲಿಕ ಹುದ್ದೆಗಾಗಿ ನೇಮಕವಾಗಿರುವ ಮಹಿಳಾ ಆರ್ ಜೆಗಳನ್ನು ಟಾರ್ಗೆಟ್ ಮಾಡಿ ಕಿರುಕುಳ ನೀಡಲಾಗುತ್ತಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.
ಅನಗತ್ಯವಾಗಿ ಹತ್ತಿರ ಬರುವುದು, ಮೈ ಮುಟ್ಟುವುದು ರಾತ್ರಿ ಪಾಳಯದಲ್ಲಿ ಕೆಲಸ ನಿರ್ವಹಿಸುವಂತೆ ಒತ್ತಡ ಹೇರುವುದು ಇವೆ ಮುಂತಾದ ತಂತ್ರಗಳನ್ನು ಬಳಸಿದ ಅಧಿಕಾರಿಗಳಿಗೆ ಪ್ರಸಾರ ಭಾರತಿ ಛೀಮಾರಿ ಹಾಕಿದೆ. ಇಷ್ಟೆಲ್ಲ ನಡೆದರೂ ಏನೂ ಗೊತ್ತಿಲ್ಲದ್ದಂತೆ ಇದ್ದ ದೆಹಲಿ ಆಕಾಶವಾಣಿ ಎಫ್ ಎಂ ಕೇಂದ್ರದ ಮುಖ್ಯಸ್ಥರಿಗೆ ನೋಟಿಸ್ ಜಾರಿಯಾಗಿದೆ.












Click it and Unblock the Notifications