ನಾನು ಸಿಎಂ ಸ್ಥಾನದ ಆಕಾಂಕ್ಷಿ : ಶಾಮನೂರು

ಬುಧವಾರ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಶಾಮನೂರು ಶಿವಶಂಕರಪ್ಪ ತಾವು ಸಹ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಹೇಳಿದರು. ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂದು ನನಗೆ ಬಹಳ ಹಿಂದಿನಿಂದಲೂ ಆಸೆ ಇತ್ತು.
ಹದಿನೈದು ವರ್ಷಗಳ ಹಿಂದೆ ಪ್ರಯತ್ನ ನಡೆಸಿದ್ದರೆ ಮುಖ್ಯಮಂತ್ರಿಯಾಗುವುದು ಬಹಳ ಸುಲಭದ ಕೆಲಸವಾಗಿತ್ತು. ಆದರೆ, ಆಗ ಅದೃಷ್ಟವಿರಲಿಲ್ಲ. ಈ ಬಾರಿ ಕಾಲ ಕೂಡಿ ಬಂದಿದೆ. ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಪಡೆಯಲಿದೆ. ಹೆಚ್ಚಿ ಜನ ಶಾಸಕರು ಯಾರ ಬಳಿ ಇದ್ದಾರೋ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಲಿದ್ದಾರೆ ಎಂದು ಹೇಳಿದರು.
ಪಕ್ಷದ ಚಿಹ್ನೆಯಿಂದ ಗೆಲುವು ಸಾಧಿಸುವ ಪ್ರತಿ ಕಾರ್ಯಕರ್ತನಿಗೂ ಮುಖ್ಯಮಂತ್ರಿಯಾಗುವ ಹಕ್ಕಿದೆ. ಶಾಸಕರು ಯಾರನ್ನು ಬೆಂಬಲಿಸುತ್ತಾರೋ? ಅವರು ಮುಖ್ಯಮಂತ್ರಿಗಾದಿ ಏರುತ್ತಾರೆ ಎಂದು ಅವರು, ಈ ಬಾರಿ ಚುನಾಯಿತರಾಗು ಎಲ್ಲಾ ಶಾಸಕರಿಗೂ ಮುಖ್ಯಮಂತ್ರಿಯಾಗಲು ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡುತ್ತೇನೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಗಳ ಪೈಪೋಟಿ ಶಾಮನೂರು ಅವರ ಹೇಳಿಕೆಯಿಂದಾಗಿ ಹೆಚ್ಚಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಈಗಾಗಲೇ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
ಸದ್ಯ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ತಮ್ಮ ಮುಖ್ಯಮಂತ್ರಿ ಕನಸನ್ನು ಬಿಚ್ಚಿಟ್ಟಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಸ್ಥಾನಕ್ಕೂ ತೀವ್ರ ಪೈಪೋಟಿ ಎದುರಾಗುವ ಸಾಧ್ಯತೆ ಶಾಮನೂರು ಹೇಳಿಕೆಯಿಂದ ಸ್ಪಷ್ಟವಾಗಿದೆ.
ಅಪ್ಪ ದಕ್ಷಿಣ, ಮಗ ಉತ್ತರ : ದಾವಣಗೆರೆ ಕ್ಷೇತ್ರದಿಂದ ಶಾಮನೂರು ಶಿವಶಂಕರಪ್ಪ ಬುಧವಾರ ನಾಮಪತ್ರ ಸಲ್ಲಿಸಿದರು. ದಾವಣಗೆರೆ ಉತ್ತರ ಕ್ಷೇತ್ರದಿಂದ ಎಸ್.ಎಸ್.ಮಲ್ಲಿಕಾರ್ಜುನ್ ಸಹ ಬುಧವಾರವೇ ಉದೇದುವಾರಿಕೆ ಸಲ್ಲಿಸಿ ಅಪ್ಪ ಮಕ್ಕಳು ಚುನಾವಣೆ ಅಖಾಡಕ್ಕೆ ಧುಮುಕಿದರು.
ಮಾಯಕೊಂಡದಲ್ಲಿ ಪ್ರಬಲ ಸ್ಪರ್ಧೆ : ದಾವಣಗೆರೆ ಜಿಲ್ಲೆಯ ಮಾಯಕೊಂಡ ಮೀಸಲು ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ, 31 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಾಮಪತ್ರ ವಾಪಾಸ್ ಪಡೆಯಲು ಏ.20 ಕೊನೆಯ ದಿನವಾಗಿದ್ದು, ನಂತರವೂ ಎಲ್ಲಾ ಅಭ್ಯರ್ಥಿಗಳು ಸ್ಪರ್ಧಿಸುವುದು ಖಚಿತವಾದರೆ, ಹೆಚ್ಚುವರಿ ಮತಯಂತ್ರ ಸಿದ್ಧಪಡಿಸಬೇಕಾಗುತ್ತದೆ. ಒಂದು ಮತಯಂತ್ರದಲ್ಲಿ ಕೇವಲ 16 ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆ ನಮೂದಿಸಲು ಅವಕಾಶವಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications