ಚುನಾವಣೆ ಭ್ರಷ್ಟಮುಕ್ತವಾಗಿರಲು ಸಹಾಯ ಮಾಡಿ

ಕರ್ನಾಟಕ ಚುನಾವಣಾ ಆಯೋಗ ಮತ್ತು ಅದರ ಅಂಗಸಂಸ್ಥೆಯಾದ ನ್ಯಾಷನಲ್ ಎಲೆಕ್ಷನ್ ವಾಚ್ ಮುಂಬರುವ ವಿಧಾನಸಭೆ ಚುನಾವಣೆಯನ್ನು ಭ್ರಷ್ಟಮುಕ್ತವಾಗಿಸಲು ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇಲ್ಲಿಯವರೆಗೆ, ನಾನು ಅನೇಕ ಚುನಾವಣಾಧಿಕಾರಿಗಳ ಜೊತೆ ಕೆಲಸ ಮಾಡಿದ್ದು, ಅವರು ಅತ್ಯಂತ ದಕ್ಷವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಚುನಾವಣೆಯನ್ನು ಸರಾಗವಾಗಿ ನಡೆಸಿಕೊಂಡು ಹೋಗಲು ಅವರಿಗೆ ಬೆಂಬಲ ನೀಡಬೇಕೆಂದು ನಾನು ಆಗ್ರಹಿಸುತ್ತೇನೆ. ಆನ್ ಲೈನ್ ಮೂಲಕ ಬೆಂಗಳೂರಿನ ನಾಗರಿಕರು ಮಾಡುತ್ತಿರುವ ಸಹಾಯದಿಂದ ಟ್ರಾಫಿಕ್ ಪೊಲೀಸರು ಅನೇಕ ಅಪರಾಧಗಳನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಕರ್ನಾಟಕ ಚುನಾವಣೆ ಬಗ್ಗೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವೆಬ್ ಸೈಟ್ನಲ್ಲಿ ಸಾಕಷ್ಟು ಮಾಹಿತಿಗಳನ್ನು ಒದಗಿಸಲಾಗಿದೆ. ಈ ಅಂತರ್ಜಾಲ ತಾಣದಲ್ಲಿ ನಾಮಪತ್ರ ಸಲ್ಲಿಸಿರುವ ಎಲ್ಲ ಅಭ್ಯರ್ಥಿಗಳು ಒದಗಿಸಿರುವ ಆಸ್ತಿಪಾಸ್ತಿ ಪ್ರಮಾಣಪತ್ರಗಳ ವಿವರ ಮತ್ತು ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರುಗಳನ್ನು ನೀಡಲಾಗಿದೆ. ನಿಮ್ಮ ಬಳಿ EPIC ಕಾರ್ಡ್ (ಮತದಾರರ ಗುರುತಿನ ಚೀಟಿ) ಇದ್ದರೆ ಮತದಾರರ ಪಟ್ಟಿಯಲ್ಲಿ ನಿಮ್ಮ ಕ್ರಮ ಸಂಖ್ಯೆ ಮತ್ತು ಬೂತ್ ಬಗ್ಗೆ ವಿವರ ತಿಳಿದುಕೊಳ್ಳಬಹುದಾಗಿದೆ.
ಕರ್ನಾಟಕದಲ್ಲಿ ಸಂಭವಿಸುವ ಚುನಾವಣಾ ಅಕ್ರಮಗಳ ಬಗ್ಗೆ ಮಾಹಿತಿ ನೀಡಲು ಮೊಬೈಲ್ ಬಳಸುವ ನಾಗರಿಕರಿಗೆ ಅನುಕೂಲವಾಗಲೆಂದು ಆಂಡ್ರಾಯ್ಡ್ ಅಪ್ಲಿಕೇಷನ್ ಅನ್ನು ಬಿಡುಗಡೆ ಮಾಡಿದ್ದಾರೆ. ಆಂಡ್ರಾಯ್ಡ್ ಆಪ್ ಬಗ್ಗೆ ಇಲ್ಲಿ ಸಂಪೂರ್ಣ ವಿವರವಿದೆ. ಅಕ್ರಮ ಪೋಸ್ಟರ್, ಹೋರ್ಡಿಂಗ್, ಮದ್ಯ ವಿತರಣೆ, ಹಣ ಹಂಚಿಕೆ, ಸರಕಾರಿ ವಾಹನಗಳ ದುರ್ಬಳಕೆ, ಹೆಂಗಳೆಯರಿಗೆ ಸೀರೆ ಹಂಚಿಕೆ ಮುಂತಾದುವುಗಳ ಬಗ್ಗೆ ತಿಳಿದ ಕೂಡಲೆ ಆ ಸ್ಥಳದ ಬಗ್ಗೆ ಚಿತ್ರಗಳ ಸಮೇತ ಮಾಹಿತಿ ನೀಡಬಹುದು. ಈ ಮಾಹಿತಿಯನ್ನು ಚುನಾವಣೆ ಆಯೋಗಕ್ಕೆ ರವಾನಿಸಲಾಗುವುದು. ನಿಮ್ಮ ಬಳಿ ಆಂಡ್ರಾಯ್ಡ್ ಫೋನ್ ಇದ್ದರೆ ಆ ಆಪ್ ಅನ್ನು ಇಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ.
ಚುನಾವಣೆ ಸಮಯದಲ್ಲಿ ಮತದಾರರಿಗೆ ಹಣ ಹಂಚುತ್ತಿರುವ ಬಗ್ಗೆ, ಹಣವನ್ನು ಅಕ್ರಮವಾಗಿ ಕೊಂಡೊಯ್ಯುತ್ತಿರುವ ಬಗ್ಗೆ ಪ್ರತಿದಿನ ಹಲವಾರು ಸುದ್ದಿಗಳನ್ನು ನಾವು ಓದುತ್ತಿರುತ್ತೇವೆ. ಇಂಥ ವಿಷಯಗಳ ಬಗ್ಗೆ ನಿಮ್ಮ ಸ್ನೇಹಿತರಲ್ಲಿ, ಬಂಧುಗಳಲ್ಲಿ ಜಾಗೃತಿಯನ್ನು ಮೂಡಿಸಿ. ಮತದಾರರ ಎಚ್ಚರದಿಂದಿದ್ದು ಚುನಾವಣಾ ಆಯೋಗಕ್ಕೆ ಸಹಕಾರ ನೀಡಿದರೆ ಮಾತ್ರ ಯಾವುದೇ ಅಕ್ರಮಗಳಿಲ್ಲದೆ ಚುನಾವಣೆ ನಡೆಸಲು ಸಾಧ್ಯ ಮತ್ತು ಭ್ರಷ್ಟಾಚಾರವನ್ನು ಅತ್ಯಂತ ಪರಿಣಾಮಕಾರಿಯಾಗಿ ತಡೆಗಟ್ಟಲು ಸಾಧ್ಯ. ಹ್ಯಾಪಿ ರಿಪೋರ್ಟಿಂಗ್!
ನಿಮ್ಮ,
ಮೀನಾಕ್ಷಿ ಭರತ್
ಮಲ್ಲೇಶ್ವರ ಎಂಎಲ್ಎ ಅಭ್ಯರ್ಥಿ, ಲೋಕ ಸತ್ತಾ ಪಕ್ಷ











Click it and Unblock the Notifications