ಬೆಂಗಳೂರಿನ ನೀರಿಗೆ ಹೇಮಾವತಿಯೇ ಆಸರೆ
ಕಾವೇರಿ ಜಲಾನಯನ ಪ್ರದೇಶ ಹಾಗೂ ಬೆಂಗಳೂರು ಸುತ್ತಮುತ್ತಲೂ ಮಳೆ ಪ್ರಾರಂಭವಾಗುವುದು ಜೂನ್ 15ರ ನಂತರ. ಅಲ್ಲಿಯವರೆಗೂ ನಗರಕ್ಕೆ ನೀರು ಪೂರೈಸಲು ಹೇಮಾವತಿ ಜಲಾಶಯದ ಮೊರೆ ಹೋಗುವಂತಹ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.
ಬೆಂಗಳೂರಿನ ನೀರಿಗೆ ಆಸರೆ ಯಾಗಿದ್ದ ಕೆಆರ್ಎಸ್ನಲ್ಲಿ 14 ಟಿಎಂಸಿ ನೀರು ಇತ್ತು. ಸುಪ್ರೀಂಕೋರ್ಟ್ ನಿರ್ದೇಶನದಂತೆ ತಮಿಳುನಾಡಿಗೆ 2 ಟಿಎಂಸಿಯಷ್ಟು ನೀರನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡಿದ ಪರಿಣಾಮ ರಾಜಧಾನಿಗೆ ನೀರಿನ ಕೊರತೆ ಉಂಟಾಗಿದೆ.
ನಗರಕ್ಕೆ ನೀರು ಪೂರೈಕೆ ಮಾಡುವ ಮಳವಳ್ಳಿ ತಾಲ್ಲೂಕಿನ ಶಿವ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಭಾನುವಾರ ಸಂಜೆ ವೇಳೆಗೆ ಕನಿಷ್ಠ ಮಟ್ಟಕ್ಕಿಂತ ಇಳಿಮುಖವಾಗಿದೆ. ಕೆಆರ್ಎಸ್ನಿಂದ ಹೆಚ್ಚುವರಿ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರಾವರಿ ನಿಗಮಕ್ಕೆ ಬೆಂಗಳೂರು ಜಲಮಂಡಳಿ ಅಧಿಕಾರಿಗಳು ಮನವಿ ಮಾಡಿದ್ದಾರೆ. ಆದರೆ, ನೀರು ಶಿವ ಅಣೆಕಟ್ಟಿಗೆ ಇನ್ನೂ ತಲುಪಿಲ್ಲ.
ಜಲಮಂಡಳಿಯ ಕಾವೇರಿ ಯೋಜನೆ ಮುಖ್ಯ ಇಂಜಿನಿಯರ್ ನಾರಾಯಣ್ ಅವರ ಪ್ರಕಾರ ಕೆಆರ್ಎಸ್ನಲ್ಲಿ ಸದ್ಯ 2.86 ಟಿಎಂಸಿ, ಹೇಮಾವತಿಯಲ್ಲಿ 3.9 ಟಿಎಂಸಿ, ಹಾರಂಗಿಯಲ್ಲಿ 0.73 ಟಿಎಂಸಿ ನೀರು ಲಭ್ಯವಿದೆ. ಬೆಂಗಳೂರಿಗೆ ಪ್ರತಿ ತಿಂಗಳು 1.5 ಟಿಎಂಸಿ ನೀರು ಬೇಕು.
ಕೆಆರ್ಎಸ್ನಲ್ಲಿ ಈಗಿರುವ ನೀರಿನ ಪ್ರಮಾಣದ ಆಧಾರದಿಂದ ಮೇ ತಿಂಗಳ ಕೊನೆಯವರೆಗೂ ಬೆಂಗಳೂರಿಗೆ ನೀರಿನ ಕೊರತೆ ಎದುರಾಗದಂತೆ ತಡೆಯಬಹುದು. ನಂತರವೂ ಕಾವೇರಿ ಕೊಳ್ಳದಲ್ಲಿ ಮಳೆ ಸುರಿಯದಿದ್ದರೆ, ಬೆಂಗಳೂರಿಗರು ನೀರಿಗೆ ಪರದಾಡಬೇಕಾಗುತ್ತದೆ.
ಆಗ ಹೇಮಾವತಿ ಅಣೆಕಟ್ಟೆಯಿಂದ ಒಂದು ಟಿಎಂಸಿ ನೀರು ಬಳಸಿಕೊಳ್ಳಲು ಜಲಮಂಡಳಿ ಚಿಂತನೆ ನಡೆಸಿದೆ. ಕೆಆರ್ಎಸ್ ನಿಂದ ಶಿವ ಅಣೆಕಟ್ಟಿಗೆ ನೀರು ಹರಿದು ಬರಲು 72 ಗಂಟೆಗಳು ಬೇಕು. ಮಂಗಳವಾರ ರಾತ್ರಿಯೊಳಗೆ ನೀರು ಜಲಾಶಯ ತಲುಪುವ ನಿರೀಕ್ಷೆ ಇದೆ.
ನೀರಿನ ಸಮಸ್ಯೆಯಾದರೆ ಶಿವ ಅಣೆಕಟ್ಟಿನ ಡೆಡ್ ಸ್ಟೋರೇಜ್ ನೀರನ್ನು ಬಳಸಿಕೊಳ್ಳಲು ಮೊದಲು ಜಲಮಂಡಳಿ ಯೋಜನೆ ರೂಪಿಸಿತ್ತು. ಆದರೆ, ಪಾಚಿ ಮತ್ತಿತರ ಕಾರಣಗಳಿಂದ ಈ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶಿವ ಅಣೆಕಟ್ಟಿಗೆ ಬುಧವಾರವೂ ಕೆಆರ್ಎಸ್ ನೀರು ತಲುಪದಿದ್ದಲ್ಲಿ ತೊರೆಕಾಡನಹಳ್ಳಿ, ತಾತಗುಣಿ, ಹಾರೋಹಳ್ಳಿಯಲ್ಲಿ ಕೆಲವು ನೀರಿನ ಪಂಪ್ಗಳಲ್ಲಿ ನೀರಿನ ಪೂರೈಕೆಯನ್ನು ನಿಲ್ಲಿಸಬೇಕಾಗುತ್ತದೆ. ಆಗ ನಗರಕ್ಕೆ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ