ಕೆಜೆಪಿ ಇರುವಾಗ ಸಮ್ಮಿಶ್ರ ಸರ್ಕಾರ ಭಯ ಬೇಡ
ದಾವಣಗೆರೆ,ಏ.15: ರಾಜ್ಯದಲ್ಲಿ ಈ ಬಾರಿ ಸಮ್ಮಿಶ್ರ ಸರ್ಕಾರ ರಚನೆಯಾಗುವ ವಾತಾವರಣವಿಲ್ಲ. ಕಳೆದ ಬಾರಿ 110 ಸ್ಥಾನ ಪಡೆದು ಅನುಭವಿಸಿದ ಸಂಕಷ್ಟದ ಬಗ್ಗೆ ಜನರಿಗೆ ಅರಿವಿದೆ. ಆದ್ದರಿಂದ ಈ ಬಾರಿ ಏಕೈಕ ಪಕ್ಷವನ್ನೇ ಮತದಾರರು ಬೆಂಬಲಿಸಬೇಕು ಎಂದು ಕೆಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಜಗಳೂರು ಪಟ್ಟಣದಲ್ಲಿ ಕೆಜೆಪಿ ಅಭ್ಯರ್ಥಿ ಎಸ್.ವಿ.ರಾಮಚಂದ್ರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ ಆಗಿದ್ದಾಗ ಮಾಡಿದ ಸಾಧನೆ ನೋಡಿ ಮತದಾರರು ಕೆಜೆಪಿಗೆ ಮತದಾನ ಮಾಡಲಿದ್ದಾರೆ. ರಾಜ್ಯದ ನೆಲ, ಜಲ, ಭಾಷೆಗೆ ಧಕ್ಕೆ ಬಾರದಂತೆ ರಾಜ್ಯವನ್ನು ಮಾದರಿಯನ್ನಾಗಿಸುವ ಸಂಕಲ್ಪ ಮಾಡಿದ್ದೇನೆ ಎಂದು ಹೇಳಿದರು.

ನಿಪ್ಪಾಣಿ ಮಾತ್ರವಲ್ಲದೆ ರಾಜ್ಯದ 224 ಕ್ಷೇತ್ರಗಳೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಕೆಲವು ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಗೊಂದಲವಿದ್ದು ಅದನ್ನು ಬಗೆಹರಿಸಲಾಗುವುದು. ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ 65 ವರ್ಷ ಮೀರಿದ ರೈತರಿಗೆ 500 ರು ಮಾಸಾಶನ, ಮಹಿಳೆಯರ ಆರ್ಥಿಕ ಅಭಿವೃದ್ಧಿಗಾಗಿ ಎರಡು ಸಾವಿರ ಕೋಟಿ ಹಣ ತೆಗೆದಿರಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಈಗಾಗಲೇ ಚುನಾವಣಾ ಪ್ರಚಾರ ಕಾರ್ಯಗಳು ಆರಂಭವಾಗಿದ್ದು, ಇನ್ನು 20 ದಿನಗಳಲ್ಲಿ 100 ಕ್ಷೇತ್ರಗಳಲ್ಲಿ ಪ್ರವಾಸ ನಡೆಸಲಿದ್ದೇನೆ. ಈ ಹಿಂದೆ ಹೋದ ಕಡೆಯಲೆಲ್ಲಾ ನಮ್ಮ ಪಕ್ಷಕ್ಕೆ ಜನ ಬೆಂಬಲ ದೊರೆತಿದೆ ಎಂದರು. ನಂತರ ಶಿಕಾರಿಪುರಕ್ಕೆ ತೆರಳಿದ ಯಡಿಯೂರಪ್ಪ ಅವರು ಕೆಜೆಪಿಯಿಂದ ಕ್ಷೇತ್ರದ ಅಭ್ಯರ್ಥಿಯಾಗಿ ಯಡಿಯೂರಪ್ಪ ನಾಮಪತ್ರ ಸಲ್ಲಿಸಿದರು.
ಉಮೇಶ್ ಕತ್ತಿ, ಮುರುಗೇಶ್ ನಿರಾಣಿ ಮೊದಲಾದವರು ಕೆಜೆಪಿಗೆ ಸೇರದೆ ಬಿಜೆಪಿಯಲ್ಲೇ ಉಳಿದುಕೊಂಡಿದ್ದಾರೆ. ಕೆಜೆಪಿ ಪಕ್ಷ ಯಾರ ಮೇಲೂ ಅವಲಂಬಿತವಾಗಿಲ್ಲ. ಕೆಜೆಪಿ ಸೇರುವುದಾಗಿ ಹೇಳಿ ಮೋಸ ಮಾಡಿದವರ ಬಗ್ಗೆ ಮತದಾರರು ಸೂಕ್ತ ನಿರ್ಣಯ ಕೈಗೊಳ್ಳುತ್ತಾರೆ ಎಂದರು.












Click it and Unblock the Notifications