ಚೌಳಿಮಠದ ಕಿರಿಯ ಶ್ರೀಗಳ ಮರಣಪತ್ರದಲ್ಲಿ ಏನಿದೆ?
ಬೀದರ್, ಏ. 8 : ಜಗತ್ತಿನ ಇಡೀ ವೀರಶೈವ ಸಮುದಾಯದ ಊಹೆಯನ್ನೂ ಮೀರಿ ಚೌಳಿಮಠದ ಮೂವರು ಕಿರಿಯ ಸ್ವಾಮೀಜಿಗಳು ಸ್ವಇಚ್ಛೆಯಿಂದ ಆತ್ಮಾಹುತಿ ಮಾಡಿಕೊಂಡಿರುವುದು ಇಡೀ ನಾಡನ್ನು ದಂಗುಬಡಿಸಿದೆ. ಈ ನಿಗೂಢ, ಭೀಕರ ಮತ್ತು ಹೃದಯ ಕಲಕುವ ಘಟನೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಯಾವ ಹುತ್ತದಲ್ಲಿ ಯಾವ ಹಾವಿದೆಯೋ ಬಲ್ಲವರಾರು?
ಫೆಬ್ರವರಿ 28ರಂದು ಮಠದ ಹಿರಿಯ ಶ್ರೀಗಳಾದ ಗಣೇಶ್ವರ ಅವಧೂತ ಸ್ವಾಮೀಜಿಯವರು ಸಾವಿನ ಪತ್ರ ಬರೆದಿಟ್ಟು ನಿಗೂಢವಾಗಿ ಸಾವಿಗೆ ಶರಣಾಗಿದ್ದರು. ಇವರ ಸಾವಿನಿಂದ ನೊಂದ ಕಿರಿಯ ಶ್ರೀಗಳಾದ 50ರ ಹರೆಯದ ಈರಾರೆಡ್ಡಿ ಸ್ವಾಮೀಜಿ ಮತ್ತು ಕಿರಿಯ ವಯಸ್ಸಿನವರಾದ ಜಗನ್ನಾಥ ಸ್ವಾಮೀಜಿ (22) ಮತ್ತು ಪ್ರಣವ ಸ್ವಾಮೀಜಿ (16) ಡೆತ್ ನೋಟ್ ಬರೆದಿಟ್ಟು ಸೋಮವಾರ ಬೆಳಗಿನ ಜಾವ 5.30ರ ಸುಮಾರಿಗೆ ಚಿತೆಗೆ ಹಾರಿ ಕೈಲಾಸವಾಸಿಗಳಾಗಿದ್ದಾರೆ.
ಹಿರಿಯ ಶ್ರೀಗಳ ಸಾವು ಅನೇಕ ಸಂಶಯಗಳಿಗೆ ಕಾರಣವಾಗಿತ್ತು. ಅವರಿಗೆ ಬೆದರಿಕೆಯ ಕರೆಗಳು ಬರುತ್ತಿದ್ದವು ಎಂದು ಹೇಳಲಾಗಿತ್ತು. ತನಿಖೆಗೆ ಆದೇಶಿಸಲಾಗಿದ್ದರೂ ಯಾವುದೇ ಯಶ ಸಾಧಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಇಂದು ಸಾವಿಗೆ ಶರಣಾಗಿರುವ ಕಿರಿಯ ಶ್ರೀಗಳಿಗೆ ಕೂಡ ಬೆದರಿಕೆಯ ಕರೆಗಳು ಬರುತ್ತಿದ್ದವೆಂದು ಹೇಳಲಾಗಿದೆ. ಅವರು ಬರೆದಿಟ್ಟ ಮರಣಪತ್ರ ಕ್ಯಾಮೆರಾ ಕವರ್ನಲ್ಲಿ ದೊರೆತಿದೆ.
ಅಷ್ಟಕ್ಕೂ, ಅವರು ಬರೆದಿಟ್ಟ ಸಾವಿನ ಪತ್ರದಲ್ಲಿ ಏನಿತ್ತು ಎಂಬುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಶ್ರೀಗಳಲ್ಲಿ ಒಬ್ಬರಿಗೆ ಸರಿಯಾಗಿ ಬರೆಯಲೂ ಬರುತ್ತಿರಲಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಆದರೆ, ಮರಣಪತ್ರದಲ್ಲಿ ಅವರು ಯಾರನ್ನೂ ದೂರಿಲ್ಲ. ಅಂತಹ ಘನವಾದ ಕಾರಣವಿಲ್ಲದಿದ್ದರೆ ಆತ್ಮಾಹುತಿ ಮಾಡಿಕೊಳ್ಳುವಷ್ಟು ವೈರಾಗ್ಯ ತಳೆಯಲು ಕಾರಣವೇನು ಎಂಬುದು ಕಟ್ಟುನಿಟ್ಟಾದ ತನಿಖೆಯಿಂದ ತಿಳಿದುಬರಬೇಕಿದೆ.
ಕಂಪ್ಯೂಟರಲ್ಲಿ ಕೀ ಮಾಡಲಾದ ಪತ್ರದ ಅಕ್ಕಪಕ್ಕ, ಮೇಲೆಕೆಳಗೆ ಅಡ್ಡಾದಿಡ್ಡಿಯಾಗಿ ಕಿರಿಯ ಶ್ರೀಗಳು (ತಪ್ಪುತಪ್ಪಾಗಿ) ಕೈಯಲ್ಲಿ ಬರೆದಿಟ್ಟ ಮರಣಪತ್ರದಲ್ಲಿ ಏನಿದೆ ಎಂದು ನೋಡೋಣ. ಅಷ್ಟಕ್ಕೂ ಕೈಯಲ್ಲೇಕೆ ಬರೆದರು ಕಂಪ್ಯೂಟರಲ್ಲೇ ಟೈಪಿಸಬಹುದಿತ್ತಲ್ಲ? ಇಲ್ಲಿ ಒಟ್ಟು ಮೂರು ಪತ್ರಗಳು ಇದ್ದು, ಇಬ್ಬರು ಸ್ವಾಮೀಜಿಗಳು ಮಾತ್ರ ಸಹಿ ಮಾಡಿದ್ದಾರೆ. ಈರಾರೆಡ್ಡಿ ಸ್ವಾಮೀಜಿ ಎಲ್ಲಿಯೂ ಸಹಿ ಮಾಡಿಲ್ಲ.
ಕಿರಿಯ ಶ್ರೀಗಳ ಮರಣಪತ್ರದಲ್ಲಿ ಏನಿದೆ?
ನಾವುಗಳು ನಮ್ಮ ಸ್ವಇಚ್ಛೆಯಿಂದಲೇ ನಮ್ಮ ಸ್ವಧಾಮವಾದ ಕೈಲಾಸಕ್ಕೆ ಹೋಗುತ್ತಿದ್ದೇವೆ. ನಮಗೆ ಯಾರೂ ತಂದೆ ತಾಯಿಗಳಿಲ್ಲ, ಬಂಧು ಬಳಗಗಳಿಲ್ಲ. ಶತ್ರು ಮಿತ್ರರೂ ಇಲ್ಲ. ಆ ದೇವರೇ ನಮಗೆ ಎಲ್ಲವೂ ಆಗಿದ್ದಾರೆ.
ಕಿರಿಯ ಶ್ರೀಗಳ ಮರಣಪತ್ರದಲ್ಲಿ ಏನಿದೆ?
ನೀವು ದೇಹವನ್ನು ತ್ಯಜಿಸಿದ ನಂತರ ನಾವುಗಳು ಕೂಡ ದೇಹವನ್ನು ತ್ಯಜಿಸುತ್ತೇವೆಂದು ಪ್ರತಿಜ್ಞೆಯನ್ನು ಮಾಡಿದ್ದೆವು. ಅದಕ್ಕಾಗಿ ಕಟ್ಟಿಗೆಯ ಪ್ರಬಂಧವನ್ನು(?) ಮಾಡಿಸಿದ್ದರು. ನಮ್ಮ ಪ್ರತಿಜ್ಞೆಯನ್ನು ಪೂರ್ಣ ಮಾಡಿದ್ದೇವೆ.
ಕಿರಿಯ ಶ್ರೀಗಳ ಮರಣಪತ್ರದಲ್ಲಿ ಏನಿದೆ?
ಬದುಕಿದೊಡೆ ಸದ್ಗುರು ಭಗವಂತನ ರೂಪವನ್ನೆ ಕಾಣುವೆ. ಇಲ್ಲವೆ, ದೇಹವನ್ನು ಅಗ್ನಿಗೆ ಹಾಕಿ ಬೂದಿ ಮಾಡುವೆ ಎಂಬುದು ನಮ್ಮ ಗುರಿ. ಇಂತಿ ಶ್ರೀ ಜಗನ್ನಾಥ ಸ್ವಾಮಿಜಿ ಮತ್ತು ಇತಿ ಪ್ರಣವ್ ಸ್ವಾಮೀಜಿ.
ಕಿರಿಯ ಶ್ರೀಗಳ ಮರಣಪತ್ರದಲ್ಲಿ ಏನಿದೆ?
ಪರಮಪೂಜ್ಯ ಗುರು ದೇವರೆ ನಮ್ಮ ತಂದೆ ತಾಯಿ, ಬಂಧು ಬಳಗ, ಬ್ರಹ್ಮ, ವಿಷ್ಣು, ರುದ್ರು ದೇವತೆ ಇದ್ದು ಅವರೆ ನಮ್ಮ ಪಾಲಿನ ಸರ್ವಸ್ವವಾಗಿದ್ದರು. ನಿಮ್ಮನ್ನಗಲಿ ಇರಲಾರೆವು ಎಂದಾಗ ನನ್ನ ಧಾಮಕ್ಕೆ ಬನ್ನಿ ಎಂದರು. ಹೇಗೆ ಎಂದಾಗ ಕಟ್ಟಿಗೆಯನ್ನು ತರಿಸಿ ಅಗ್ನಿ ದೇವನ ಮುಖಾಂತರ ಬನ್ನಿರಿ. ಅವರನ್ನು ಕಳೆದುಕೊಂಡೆನಲ್ಲಾ ಎಂಬ ವಿರಹ ಸಹಿಸದಾಗಿ ಅವರ ಪಾದಗಳಲ್ಲಿ ಒಂದಾಗಿದ್ದೇನೆ.
ಕಿರಿಯ ಶ್ರೀಗಳ ಮರಣಪತ್ರದಲ್ಲಿ ಏನಿದೆ?
ಆ ದೇವನೆ ನಮಗೆ ಎಲ್ಲವು. ಅದಕ್ಕಾಗಿ ನಮ್ಮ ವಿಷಯದಲ್ಲಿ ಯಾರಿಗೂ ಯಾವ ತೊಂದರೆಯನ್ನೂ ಕೊಡಬೇಡಿ.
ಕಿರಿಯ ಶ್ರೀಗಳ ಮರಣಪತ್ರದಲ್ಲಿ ಏನಿದೆ?
ಸೋನಿ ಕ್ಯಾಮರಾ ಒಳಗೆ ತಟ್ಟೆಯ ಹಿಂದುಗಡೆ ಇದೆ. ಓಪನ್ ಮಾಡಿ ನೋಡಿರಿ. ಎಲ್ಲ ಸಾಮಾನುಗಳು ಕೀಲಿಗಳು ಮಹಾದೇವರಿಗೆ ಒಪ್ಪಿಸಲಾಗಿದೆ. (ಈ ಪತ್ರವನ್ನು ಅಚ್ಚುಕಟ್ಟಾಗಿ ತಪ್ಪಿಲ್ಲದೆ ಬರೆಯಲಾಗಿದೆ.)
ಮಠದಲ್ಲೇ ಕಿರಿಯ ಶ್ರೀಗಳ ಅಂತ್ಯಕ್ರಿಯೆ
ಕಿರಿಯ ಶ್ರೀಗಳದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ. ಚೌಳಿಮಠದ ಆವರಣದಲ್ಲಿ, ಹಿರಿಯ ಶ್ರೀಗಳ ಸಮಾಧಿಯ ಪಕ್ಕದಲ್ಲಿ ಮಠದ ಪರಂಪರೆಯಂತೆ ಸ್ವಾಮೀಜಿಗಳ ಅಂತ್ಯಕ್ರಿಯೆ ನಡೆಸಲಾಯಿತು.