ರಾಯಚೂರಿಗೆ ಕರೆಂಟ್ ಕೊಟ್ಟ ಮಳೆ ಹುಡುಗಿ
ರಾಯಚೂರು, ಏ.7: ನನ್ನ ಆಗಮನಿಂದ ಹಾಟ್ ಸಿಟಿ ಕೂಲ್ ಆಗಲಿದೆ. ಯಾವುದೇ ಒಂದು ಕೋಮಿನ ಓಲೈಕೆ ಮಾಡಲು ನಾನು ಬಂದಿಲ್ಲ. ನಾನು ಗೆದ್ದರೆ ರಾಯಚೂರಿಗೆ 24 ಗಂಟೆ ವಿದ್ಯುತ್ ಹರಿಸುತ್ತೇನೆ ಎಂದು ಮಳೆ ಹುಡುಗಿ ಖ್ಯಾತಿಯ ಬಿಎಸ್ ಆರ್ ಕಾಂಗ್ರೆಸ್ ಅಭ್ಯರ್ಥಿ ಪೂಜಾ ಗಾಂಧಿ ಘೋಷಿಸಿದ್ದಾರೆ.
ಬಿಸಿಲಿಗೆ ಹೆದರಿ ನಾನು ಹೋಗುವುದಿಲ್ಲ. ಉತ್ತರ ಕರ್ನಾಟಕದ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದು ನನಗೆ ಖುಷಿ ಕೊಟ್ಟಿದೆ. ಇಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸಿ ನನ್ನ ಕೈಲಾದ ಸಹಾಯ ನೀಡುತ್ತೇನೆ. ರಾಯಚೂರು ನಗರಕ್ಕೆ ದಿನವೀಡಿ ವಿದ್ಯುತ್ ನೀಡಿಕೆ ಬಗ್ಗೆ ಬಿಎಸ್ ಆರ್ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ ಎಂದು ಪೂಜಾ ಗಾಂಧಿ ಹೇಳಿದರು.

ನಿರುದ್ಯೋಗಿಗಳಿಗೆ ಉದ್ಯೋಗ ನೀಡಲು ಶ್ರಮಿಸುತ್ತೇನೆ. ಬಡವರ, ಶ್ರಮಿಕರ ಹಾಗೂ ರೈತರ ಪಕ್ಷ ನಮ್ಮದು, ಎಲ್ಲಾ ವರ್ಗದ ಜನರ ಆಶೋತ್ತರಕ್ಕೆ ಸ್ಪಂದಿಸುತ್ತೇವೆ. ನಾನು ಸ್ಟಾರ್ ಆಗಿ ಜನರ ಬಳಿ ಹೋಗುತ್ತಿಲ್ಲ. ಜನ ಸೇವಕಿಯಾಗಿ ಅವರ ಮುಂದೆ ನಿಲ್ಲುತ್ತಿದ್ದೇನೆ ಎಂದು ಪೂಜಾ ಗಾಂಧಿ ಹೇಳಿದರು.
ರಕ್ಷಿತಾ ಪ್ರೇಮ್ ಹಾಗೂ ಪೂಜಾ ಗಾಂಧಿ ಅವರು ಕಣಕ್ಕಿಳಿಯುತ್ತಿರುವುದನ್ನು ಕಳೆದ ಶುಕ್ರವಾರ ಬಿಎಸ್ ಆರ್ ಕಾಂಗ್ರೆಸ್ ಪಕ್ಷ ದೃಢಪಡಿಸಿತ್ತು. ರಾಯಚೂರು ಇಲ್ಲವೇ ಬೆಂಗಳೂರಿನ ಯಾವುದಾದರೂ ಕ್ಷೇತ್ರ ಸಿಗುವ ಸಾಧ್ಯತೆಯಿತ್ತು. ಅದರಂತೆ ಪೂಜಾ ಅವರಿಗೆ ರಾಯಚೂರು ಕ್ಷೇತ್ರ ಸಿಕ್ಕಿದೆ. ಅಲ್ಲಿನ ಬಿರು ಬಿಸಿಲಿಗೆ ಹೆದರಿ ಪೂಜಾ ವಾಪಸ್ ಆಗುತ್ತಾರೆ ನೋಡಿ ಎಂಬ ಟೀಕೆಗಳಿಗೆ ಪೂಜಾ ತಣ್ಣಗೆ ಉತ್ತರಿಸಿದ್ದಾರೆ.












Click it and Unblock the Notifications