ಬೇಳೂರನ್ನು ಸಿಗಂದೂರು ಚೌಡೇಶ್ವರಿಯೇ ಕಾಪಾಡಬೇಕು

'ಇನ್ನು ಆಯಪ್ಪ (ಬೇಳೂರು) ವಾಪಸ್ ಬಂದರೆ ಬಿಜೆಪಿ ಸೇರಿಸಿಕೊಳ್ಳಲ್ಲ' ಎಂದು ಬೇಳೂರು ಬಗ್ಗೆ ಈಶ್ವರಪ್ಪ ಹೇಳಿದ್ದೇ ತಡ ಬೇಳೂರು ದೆಸೆ ವಕ್ರವಾಗತೊಡಗಿದೆ.
ಕೆಜೆಪಿ ಕನಸು ಭಗ್ನ: ಅದಾದ ನಂತರ ಜೆಡಿಎಸ್ಸು, ಕಾಂಗ್ರೆಸ್ಸು ಅಂತೆಲ್ಲಾ ಆಟವಾಡಿದ ಬಳಿಕ ಕೆಜೆಪಿಯಲ್ಲೇನಾದರೂ ಛಾನ್ಸ್ ಇರುತ್ತದಾ? ಎಂದು ಆಸೆಬುರುಕು ಕಣ್ಣುಗಳಿಂದ ನೋಡತೊಡಗಿದ್ದರು. ಆದರೆ ಅಲ್ಲೂ ಅವಕಾಶ ಕೈತಪ್ಪಿದೆ. ಏಕೆಂದರೆ ಸಾಗರ ಕ್ಷೇತ್ರದಲ್ಲಿ ಬಿಆರ್ ಜಯಂತ್ ಕೆಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.
ಬಿಆರ್ ಜಯಂತ್ ಅವರು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ, ಸಾಗರ ಕ್ಷೇತ್ರದ ಕೆಜೆಪಿ ಅಧ್ಯಕ್ಷ. ಅವರೀಗ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಕೆಜೆಪಿಯಿಂದ ಸ್ಪರ್ಧಿಸಲಿದ್ದಾರೆ ಎಂದು ಕೆಜೆಪಿ ಮೂಲಗಳು ಹೇಳಿವೆ.
ನಿನ್ನೆ ಕರ್ನಾಟಕ ಜನತಾ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಈ ಕುರಿತು ತೀರ್ಮಾನವಾಗಿದ್ದು, ಪಕ್ಷದ ರಾಜ್ಯ ಉಪಾಧ್ಯಕ್ಷ ಆರ್ಎಂ ಮಂಜುನಾಥ ಗೌಡ ಅವರು ಅಭ್ಯರ್ಥಿಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಟಿಕೆಟ್ ದೊರೆಯದಿದ್ದರೆ ಕೆಜೆಪಿಯಿಂದ ಬಿ ಫಾರಂ ಪಡೆಯಬಹುದು ಎಂಬ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಲೆಕ್ಕಾಚಾರ ತಲೆಕೆಳಗಾಗಿದೆ.
ಪಕ್ಷ ಸೇರ್ಪಡೆ ಬಗ್ಗೆ ಶಾಸಕ ಬೇಳೂರು ಪ್ರಯತ್ನಿಸಿದ್ದರು ಎನ್ನಲಾಗಿದೆ. ಆದರೆ ಬೇಳೂರುಗೆ ಟಿಕೆಟ್ ನೀಡಬಾರದು ಎಂಬ ಪಕ್ಷದ ಕಾರ್ಯಕರ್ತರ ಅಭಿಪ್ರಾಯಕ್ಕೆ ಮಣೆ ಹಾಕಿದ ಪಕ್ಷಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬೇಳೂರಿಗೆ ರೆಡ್ ಸಿಗ್ನಲ್ ತೋರಿಸುವ ಮೂಲಕ ಬೇಳೂರು ಪರಿಸ್ಥಿತಿ ಈಗ ಅಯೋಮಯವಾಗಿದೆ.












Click it and Unblock the Notifications