ಯಡಿಯೂರಪ್ಪಗೆ ಆಘಾತ: ಕೆಜೆಪಿ ಪಟ್ಟಿ-2 ವಿಳಂಬ
ಬೆಂಗಳೂರು, ಮೇ 29: 'ನಾಳೆ ಶನಿವಾರ 2ನೆಯ ಪಟ್ಟಿ ಬಿಡುಗಡೆ ಮಾಡುತ್ತೇನೆ. ಅದನ್ನು ನೋಡಿ ಪ್ರತಿಪಕ್ಷಗಳು ಮೂರ್ಛೆ ಹೋಗಲಿವೆ' ಎಂಬ ಧಾಟಿಯಲ್ಲಿ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಆಘಾತವಾಗಿದೆ. ಬಿಎಸ್ ವೈಗೆ ಒಂದೊಂದೇ ವಿಘ್ನಗಳು ಎದುರಾಗುತ್ತಿವೆ. ಕೆಜೆಪಿ ಪಕ್ಷದಲ್ಲೂ ಎಲ್ಲವೂ ಸರಿಯಿಲ್ಲ ಎಂಬಂತಾಗಿದೆ.
ಇತ್ತೀಚೆಗಷ್ಟೇ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅವರೊಬ್ಬರನ್ನು ಹೊರತುಪಡಿಸಿದರೆ ಇನ್ನುಳಿದ ಯಾವುದೇ ಸಚಿವ ಅಥವಾ ಶಾಸಕರ ನಿರ್ಧಾರ ಅಂತಿಮಗೊಂಡಿಲ್ಲ. ಸೇರ್ಪಡೆಗೊಳ್ಳುವ ದಿನಾಂಕವೂ ನಿಗದಿಯಾಗಿಲ್ಲ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ. ಅಂದಹಾಗೆ ರೇಣುಕಾಚಾರ್ಯ ಇಂದು ಹೊನ್ನಾಳಿಯಲ್ಲಿ ತಮ್ಮ ಅಭಿಮಾನಿಗಳ ಸಮ್ಮುಖದಲ್ಲಿ ಕೆಜೆಪಿಗೆ ಸೇರ್ಪಡೆಯಾಗಲು ವೇದಿಕೆ ಸಿಂಗಾರಗೊಂಡಿದೆ.
ಬಿಎಸ್ ಯಡಿಯೂರಪ್ಪ ಭಾಗವಹಿಸಬೇಕಿದ್ದ ಜಮಖಂಡಿ ಕಾರ್ಯಕ್ರಮ ಮಾರ್ಚ್ 29 ರ ಬದಲಾಗಿ ಎಪ್ರಿಲ್ 04 ರಂದು ಜರುಗಲಿದೆ. ಅಂದು KJP List-2 ಬಿಡುಗಡೆ ಮಾಡುವುದಾಗಿ ಯಡಿಯೂರಪ್ಪ ತಿಳಿಸಿದ್ದಾರೆ. ಹಾಗಾಗಿ ಪ್ರತಿಪಕ್ಷಗಳು ನಾಳೆ ಶನಿವಾರ ಆಘಾತಕ್ಕೊಳಗಾಗುವುದು ತಪ್ಪಿದೆ.

ನಿರಾಣಿಯೇ ಯಡಿಯೂರಪ್ಪಗೆ ಗುರಾಣಿ:
ಶುಕ್ರವಾರ ಸಚಿವ ಮುರುಗೇಶ್ ನಿರಾಣಿ ಮತ್ತು ಶನಿವಾರ ಸಚಿವ ಉಮೇಶ್ ಕತ್ತಿ ಕೆಜೆಪಿಗೆ ಸೇರ್ಪಡೆಗೊಳ್ಳಬೇಕಿತ್ತು. ಆದರೆ ಅದೂ ವಿಳಂಬವಾಗಿದೆ. ಉಮೇಶ್ ಬಿಜೆಪಿಯಲ್ಲೇ ಇರುವೆ ಎಂದು ಯಡಿಯೂರಪ್ಪ ವಿರುದ್ಧ ಕತ್ತಿ ಝಳಪಿಸಿದ್ದಾರೆ. ಇದರಿಂದ ಯಡಿಯೂರಪ್ಪ ಅವರಿಗೆ ಹಿನ್ನೆಡೆ ಉಂಟಾದಂತಿದ್ದು, ಶುಕ್ರವಾರ ಮತ್ತು ಶನಿವಾರ ತೆರಳಬೇಕಿದ್ದ ತಮ್ಮ ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಗಳ ಪ್ರವಾಸವನ್ನು ರದ್ದುಪಡಿಸಿದ್ದಾರೆ. ಆದರೂ ನಿರಾಣಿ ಸೇರ್ಪಡೆ ಖಚಿತವೆನ್ನಲಾಗಿದೆ.

ಬಿಜೆಪಿಗಿಂತ ಕಾಂಗ್ರೆಸ್ ಪಟ್ಟಿಗೆ ಹೆಚ್ಚು ಮಹತ್ವ:
ಬಿಜೆಪಿಗಿಂತ ಕಾಂಗ್ರೆಸ್ ಪಟ್ಟಿ ಬಿಡುಗಡೆಗೆ ಹೆಚ್ಚಿನ ಮಹತ್ವ ನೀಡಿದ್ದು, ಕಾಂಗ್ರೆಸ್ ಪಟ್ಟಿ ಹೊರಬಿದ್ದ ನಂತರವೇ ತಮ್ಮ ಪಕ್ಷದ 2ನೆಯ ಪಟ್ಟಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಇದೇ ವೇಳೆ, ಕೆಜೆಪಿಯತ್ತ ಹಾರಬೇಕಿದ್ದ ಇನ್ನೂ ಕೆಲ ಸಚಿವ-ಶಾಸಕರು ಕಾಂಗ್ರೆಸ್ ಪಕ್ಷದೆಡೆಗೂ ತಮ್ಮ ಚಿತ್ತ ಹರಿಸಿದ್ದಾರೆ. ಈ ಬಾರಿ ಅಧಿಕಾರಕ್ಕೆ ಬರುವ ಸಾಧ್ಯತೆ ಕಂಡು ಬರುತ್ತಿರುವ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದರೆ ಗೆಲುವು ಸುಲಭ ಎಂಬ ಎಣಿಕೆ ಅವರದಾಗಿದೆ. ಆದರೆ, ಕಾಂಗ್ರೆಸ್ ಬೆಳವಣಿಗೆಗಳನ್ನು ಗಮನಿಸಿದರೆ ಈ ಎಲ್ಲರಿಗೂ ಪ್ರವೇಶ ಸಿಗುವ ಸಂಭವ ತೀರಾ ಕಡಿಮೆ.

ಕಾಂಗ್ರೆಸ್ಸಿನತ್ತ ವಾಲಿದ ಬೊಮ್ಮಾಯಿ?
ತಾನು ಬಿಜೆಪಿ ತೊರೆಯುವುದಿಲ್ಲ ಎಂದೇ ಹೇಳಿಕೊಂಡು ಬಂದಿದ್ದರೂ ಬೊಮ್ಮಾಯಿಗೆ ಇನ್ನೂ ಅಂತಿಮ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿಲ್ಲ. ಸದ್ಯಕ್ಕೆ ಬೊಮ್ಮಾಯಿ ಗೊಂದಲದಲ್ಲಿದ್ದಾರೆ.
ಆದರೆ, ರಾಜಕೀಯ ಮಹತ್ವಾಕಾಂಕ್ಷಿ ಬೊಮ್ಮಾಯಿ ಇಷ್ಟಕ್ಕೇ ಸುಮ್ಮನಾಗುವವರಲ್ಲ. ಡೇ ಅಂಡ್ ನೈಟ್ ರಾಜಕೀಯ ಕೂಡಿಕೆಯ ಲಾಭ ನಷ್ಟದ ಲೆಕ್ಕಾಚಾರ ಹಾಕುತ್ತಲೇ ಇದ್ದಾರೆ. ಕೇವಲ ಯಡಿಯೂರಪ್ಪ ಅವರ ಮೇಲಿನ ಪ್ರೀತಿಗೆ ಕಟ್ಟುಬಿದ್ದು ಕೆಜೆಪಿ ಸೇರಿ ಸೋಲು ಅನುಭವಿಸಿದಲ್ಲಿ ತಮ್ಮ ರಾಜಕೀಯ ಭವಿಷ್ಯವೇ ಮಂಕಾಗಿಬಿಡುತ್ತದಲ್ಲ ಎಂಬ ಆತಂಕದಲ್ಲಿದ್ದಾರೆ.
ಸ್ವಕ್ಷೇತ್ರ ಶಿಗ್ಗಾವಿಯಲ್ಲಿ ಬೆಂಬಲಿಗರೊಂದಿಗೆ ಸತತ ಮಾತುಕತೆ ನಡೆಸಿದ್ದಾರೆ. ಈ ವೇಳೆ, ರಾಜ್ಯಾದ್ಯಂತ ಕಾಂಗ್ರೆಸ್ ಅಲೆ ಬೀಸುತ್ತಿರುವುದರ ಲಾಭ ಪಡೆಯಲು ಕಾಂಗ್ರೆಸ್ಸಿಗೆ ವಲಸೆ ಹೋಗುವ ಬಗ್ಗೆಯೂ ಚರ್ಚೆ ನಡೆದಿದೆ. ಹಿರೇಕೆರೂರು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ಗಾಗಿ ಪ್ರಯತ್ನ ಮುಂದುವರಿಸಿದ್ದಾರೆ ಎನ್ನಲಾಗಿದೆ.

ಕಾಂಗೈನತ್ತ ವಾಲಿರುವ ರಾಜೂಗೆ ಕೆಜೆಪಿ ಗಾಳ
ಕಾಂಗ್ರೆಸ್ ಸೇರಲು ತುದಿಗಾಲಲ್ಲಿರುವ ಸುರಪುರ ಶಾಸಕ ರಾಜೂಗೌಡರನ್ನು ಕೆಜೆಪಿಯತ್ತ ಸೆಳೆಯುವ ಪ್ರಯತ್ನ ಜಾರಿಯಲ್ಲಿದೆ. ರಾಜೂಗೌಡರಿಗೆ ಕಾಂಗ್ರೆಸ್ನಿಂದ ಟಿಕೆಟ್ ಲಭಿಸುವ ಸಂಭವ ಕಂಡು ಬರುತ್ತಿಲ್ಲ. ಅವರಿಗೆ ಬಿಜೆಪಿಯಲ್ಲೇ ಮುಂದುವರಿಯುವುದೂ ತೀರಾ ಕಷ್ಟವಾಗುತ್ತಿದೆ. ಅದರ ಬದಲು ಕೆಜೆಪಿಗೆ ಹೋಗುವುದು ಉತ್ತಮ ಎಂಬ ಚಿಂತನೆಯೂ ಇದೆ.ಇನ್ನು ಅಪ್ಪು ಪಟ್ಟಣಶೆಟ್ಟಿ ಅವರು ಸಂಘ ಪರಿವಾರ ಮೂಲದಿಂದ ಬಂದವರಾಗಿದ್ದರೂ ಅವರಿಗೆ ಈ ಬಾರಿ ಟಿಕೆಟ್ಗೆ ಕತ್ತರಿ ಬೀಳುವ ಸಾಧ್ಯತೆಯಿದೆ. ಹಿಂದೆ ಯಡಿಯೂರಪ್ಪ ಬಲಗೈ ಬಂಟನಂತಿದ್ದ ಅಪ್ಪು ನಂತರದ ದಿನಗಳಲ್ಲಿ ಅವರಿಂದ ದೂರ ಸರಿದಿದ್ದರು. ಇದೀಗ ಮತ್ತೆ ಯಡಿಯೂರಪ್ಪರತ್ತ ಸಾಗುವ ಸಾಧ್ಯತೆಯಿದೆ.

ಅರಸೀಕೆರೆ ಕೆಜೆಪಿ ಟಿಕೆಟ್ ಯಾರಿಗೆ?
ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಒತ್ತಾಸೆಯಂತೆ ತಾಲೂಕು ಬಿಜೆಪಿ ಅಧ್ಯಕ್ಷರಾಗಿದ್ದ ಕಾಟೀಕೆರೆ ಪ್ರಸನ್ನ ಕುಮಾರಗೆ ಅರಸೀಕೆರೆ ಟಿಕೆಟ್ ನೀಡುವ ವಂದತಿ ಕೇಳಿ ಲೋಕೇಶ್ ಬೆಂಬಲಿತರು ಆಕ್ರೋಶಗೊಂಡಿದ್ದಾರೆ. 2 ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಮಾಜಿ ಶಾಸಕ ಡಿಬಿ ಗಂಗಾಧರಪ್ಪ ಅವರ ಪುತ್ರ ಡಾ ಲೋಕೇಶ್.,
ಪ್ರಸನ್ನ ಅವರಂತಹ ಅವಕಾಶವಾದಿ ರಾಜಕಾರಣ ಮಾಡುವರಿಗೆ ಟಿಕೆಟ್ ನೀಡಬಾರದು. ಈ ಕ್ಷೇತ್ರದಲ್ಲಿ ಹಲವು ತಿಂಗಳಿಂದ ಪ್ರವಾಸ ಕೈಗೊಂಡು ಪಕ್ಷವನ್ನು ಕಟ್ಟಿರುವ ಯುವ ಮುಂದಾಳು ಡಾ ಲೋಕೇಶ್ ರವರಿಗೆ ಟಿಕೆಟ್ ನೀಡಬೇಕೆಂದು ಯಡಿಯೂರಪ್ಪ ಅವರಲ್ಲಿ ಮನವಿ ಮಾಡಲು ಲೋಕೇಶ್ ಬೆಂಬಲಿಗರು ಶಿಕಾರಿಪುರಕ್ಕೆ ತೆರಳಿದ್ದಾರೆ. ಪ್ರಸನ್ನರನ್ನು ಕಣಕ್ಕೆ ಇಳಿಸಬೇಕೆಂದು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಮಂಡಿಸಿದ್ದ hidden agenda ವಿರುದ್ಧ ಬಿವೈ ವಿಜಯೇಂದ್ರ ಸಹ ಕೆಂಡಾಮಂಡಲರಾಗಿದ್ದಾರೆ.












Click it and Unblock the Notifications