ಸ್ವತಂತ್ರ ಗೂಳಿಹಟ್ಟಿ ಯಾವುದೇ ಪಕ್ಷಕ್ಕೂ ಹೋಗೊಲ್ಲ

ಮತ್ತೆ ಪಕ್ಷೇತರನಾಗಿಯೇ ಈಗಿರುವ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವೆ. ಯಾವುದೇ ಪಕ್ಷದ ಸಹವಾಸ ಮಾಡುವುದಿಲ್ಲ ಎಂದು ತಾಲೂಕಿನ ಕಸಬಾ ಹೋಬಳಿ ಬುರುಡೆಕಟ್ಟೆ ಗ್ರಾಮದಲ್ಲಿ ಶ್ರೀ ಲಕ್ಷೀ ರಂಗನಾಥಸ್ವಾಮಿ ದೇವರ ದರ್ಶನ ಪಡೆದು ನಂತರ ಸುದ್ದಿಗಾರರಿಗೆ ಶಾಸಕ ಗೂಳಿಹಟ್ಟಿ ಶೇಖರ್ ತಿಳಿಸಿದರು.
ಹಲವು ಪಕ್ಷಗಳ ಮುಖಂಡರು ನನ್ನನ್ನು ಸಂಪರ್ಕಿಸಿ, ತಮ್ಮ ಪಕ್ಷದ ವತಿಯಿಂದ ಸ್ಪರ್ಧಿಸುವಂತೆ ಆಯಾ ಪಕ್ಷದ ಮುಖಂಡರು ಕೋರಿರುವುದು ನಿಜ. ಆದರೂ ನಾನು ಪಕ್ಷೇತರನಾಗಿ ಸ್ಪರ್ಧಿಸಬೇಕೆಂಬ ಎಲ್ಲರ ಒಮ್ಮತದ ಅಭಿಪ್ರಾಯದ ಮೇಲೆ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ ಎಂದು ಹೇಳಿದರು.
ನನ್ನ ಬೆಂಬಲಿಗರು ಮತ್ತು ಕಾರ್ಯಕರ್ತರ ಜತೆ ಸುದೀರ್ಘವಾಗಿ ಚರ್ಚಿಸಿರುವೆ. ಅವರೆಲ್ಲ ಪಕ್ಷೇತರನಾಗಿಯೇ ಚುನಾವಣೆ ಎದುರಿಸುವಂತೆ ಅಪೇಕ್ಷೆ ಪಟ್ಟಿದ್ದಾರೆ. ಹೀಗಾಗಿ ಜನಾಭಿಪ್ರಾಯಕ್ಕೆ ಬೆಲೆ ಕೊಟ್ಟು ಪಕ್ಷೇತರನಾಗಿಯೇ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಶೇಖರ್ ಸ್ಪಷ್ಟಪಡಿಸಿದ್ದಾರೆ.
ಹಿಂದಿನ ಚುನಾವಣೆಯಲ್ಲಿ ಕ್ಷೇತ್ರದ ಜನ ಪಕ್ಷೇತರ ಅಭ್ಯರ್ಥಿಯಾದ ನನ್ನನ್ನು ಶಾಸಕನ್ನಾಗಿ ಆರಿಸಿ ಕಳುಹಿಸಿದ್ದರು. ಪಕ್ಷೇತರ ಶಾಸಕನೊಬ್ಬ ಸರಕಾರ ರಚಿಸುವಷ್ಟರ ಮಟ್ಟಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದರು. ಪಕ್ಷೇತರನಾಗಿ ಗೆದ್ದು ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿ ಮೊದಲ ಬಾರಿಗೆ ಮಂತ್ರಿಯಾಗುವ ಸುಯೋಗವನ್ನೂ ಕ್ಷೇತ್ರದ ಮತದಾರರು ನನಗೆ ನೀಡಿದ್ದಾರೆ.
ಈ ಬಾರಿಯೂ ಪಕ್ಷೇತರನಾಗಿಯೇ ಸ್ಪರ್ಧಿಸಿ ಮತ್ತೆ ಮಂತ್ರಿಯಾಗುವ ಯೋಗ ದೊರಕಿದರೆ ಕ್ಷೇತ್ರಕ್ಕೆ ಮತ್ತಷ್ಟು ಲಾಭವಾಗಬಹುದು ಎಂಬುದು ಜನರ ನಿರೀಕ್ಷೆ. ಹಾಗಾಗಿ ಯಾವ ಪಕ್ಷದೊಂದಿಗೂ ಗುರುತಿಸಿಕೊಳ್ಳದಂತೆ ಬೆಂಬಲಿಗರು ಹೇಳಿದ್ದಾರೆ ಎಂದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications