ಬಿಜೆಪಿ ಬಿಡುವ ಸಂದೇಶ ರವಾನಿಸಿದ ರೇಣುಕಾಚಾರ್ಯ

ರಾಜ್ಯ ಬಿಜೆಪಿ ಮುಖಂಡರು, ಜಿಲ್ಲಾ ಮುಖಂಡರು ಅಂತೆಲ್ಲಾ ಅಲ್ಲ, ಎಲ್ಲರೂ ನನಗೆ ನಿರಂತರವಾಗಿ ಅವಮಾನ ಮಾಡುತ್ತಲೇ ಬಂದಿದ್ದಾರೆ. ಜೊತೆಗೆ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಬಿ ಫಾರಂ ಅಧಿಕಾರವನ್ನು ನನಗೆ ನೀಡದೆ, ಬೇರೆಯವರಿಗೆ ನೀಡಿ ಉದ್ದೇಶಪೂರ್ವಕವಾಗಿ ನನಗೆ ಅವಮಾನ ಮಾಡಿದ್ದಾರೆ ಎಂದು ಅಬಕಾರಿ ಸಚಿವರು ಅಲವತ್ತುಕೊಂಡಿದ್ದಾರೆ.
ಎರಡು ಬಾರಿ ಶಾಸಕನಾಗಿ, ಅದಕ್ಕಿಂತ ಮುಂಚೆ ಕಾರ್ಯಕರ್ತನಾಗಿ ನಿಷ್ಠೆಯಿಂದ ಬಿಜೆಪಿಗೆ ಸೇವೆ ಸಲ್ಲಿಸಿದ್ದೇನೆ. ಆದರೆ ರಾಜ್ಯ ಬಿಜೆಪಿ ಹಾಗೂ ದಾವಣಗೆರೆ ಬಿಜೆಪಿಯ ಜಿಲ್ಲಾ ನಾಯಕರು ನನ್ನನ್ನು ಕಡೆಗಣಿಸಿ ಅವಮಾನ ಮಾಡಿದ್ದಾರೆ ಎಂದು ದೂರಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಯಾವತ್ತೂ ನನ್ನನ್ನು ಕೆಜೆಪಿಗೆ ಬಾ ಎಂದು ಕರೆದಿಲ್ಲ, ನಾನು ಕೂಡ ಎಲ್ಲಿಯೂ ಕೆಜೆಪಿಗೆ ಹೋಗುತ್ತೇನೆಂದು ಹೇಳಿಲ್ಲ. ಆದರೂ ಬಿಜೆಪಿ ನಾಯಕರು ನನ್ನನ್ನು ಅನುಮಾನದ ದೃಷ್ಟಿಯಿಂದಲೇ ನೋಡುತ್ತಿದ್ದಾರೆ ಎಂಬುದು ಅವರ ಮುಖ್ಯ ಅಳಲು.
ನಾನು ಬಿಜೆಪಿಯಲ್ಲಿದ್ದರೂ ನನ್ನನ್ನು ಬಿಟ್ಟು ಹೊನ್ನಾಳಿ ತಾಲೂಕಿಗೆ ಸಂಬಂಧಪಡದ ಶಿವಮೊಗ್ಗದ ಗಿರೀಶ್ ಪಟೇಲ್ ಹಾಗೂ ಕೃಷ್ಣಾ ರೆಡ್ಡಿ ಇಲ್ಲಿಗೆ ಬಂದು ಸಭೆ ನಡೆಸುತ್ತಾರೆ. ಇದನ್ನೆಲ್ಲಾ ಹೇಗೆ ಸಹಿಸಿಕೊಳ್ಳಬೇಕು? ಬಿ ಫಾರಂ ಹಂಚಿಕೆ ಕುರಿತು ಅಂದಿನ ರಾಜ್ಯಾಧ್ಯಕ್ಷರಿಗೆ ಹತ್ತಾರು ಬಾರಿ ದೂರವಾಣಿ ಕರೆ ಮಾಡಿದರೂ ಒಂದು ಸಲವೂ ನನ್ನ ಜತೆ ಅವರು ಮಾತನಾಡಿರಲಿಲ್ಲ.
ದಾವಣಗೆರೆ ಸಂಸದರು ಮಾತ್ರ ನನಗೆ ಸ್ಪಂದಿಸಿದರು. ನನಗಾದ ಅವಮಾನಗಳನ್ನು ಸಹಿಸಿಕೊಂಡು ಬಿಜೆಪಿ ಅಭ್ಯರ್ಥಿಗಳಿಗೆ ಬಿ ಫಾರಂಗಳನ್ನು ಕೊಡಿಸಿ ಕಳೆದ ಬಾರಿಗಿಂತ ಈ ಬಾರಿ ಅತಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಿದ್ದೇನೆ. ಆದರೆ ಇಡೀ ರಾಜ್ಯದಲ್ಲಿ ಬಿಜೆಪಿ ಕಳಪೆ ಸಾಧನೆ ತೋರಿತು ಎಂದರು. ಇಂಥವರ ಜೊತೆಗೆ ನಾನು ಹೇಗೆ ಮುಂದುವರೆಯಲಿ ನೀವೇ ಹೇಳಿ ಎಂದು ಕಾರ್ಯಕರ್ತರ ಮುಂದೆ ಮುಖ್ಯ ಪ್ರಶ್ನೆಯನ್ನು ಇಟ್ಟರು. ಅದರೊಂದಿಗೆ ತಮ್ಮ ಮುಂದಿನ ನಡೆಯೇನು ಎಂಬುದರ ಸುಳಿವು ನೀಡಿದ್ದಾರೆ.












Click it and Unblock the Notifications