ಸೋಮಣ್ಣ ವಸಿ ಸುಮ್ಕಿರಣ್ಣ ಎಂದ ಧನಂಜಯ

ಸೋಮಣ್ಣ ಅವರು ಎಲ್ಲಿಂದಲೋ ವಲಸೆ ಬಂದವರು. ಎಲ್ಲೆಲ್ಲಿಗೋ ಹೋಗುತ್ತಾರೆ. ಅವರು ಬಹುತೇಕ ಪಕ್ಷಗಳನ್ನು ನೋಡಿದ್ದಾರೆ, ಹೀಗಾಗಿ ಅಂಥವರು ನೀಡುವ ಹೇಳಿಕೆಗಳಿಗೆ ಬೆಲೆ ಇಲ್ಲ.ಇಷ್ಟಕ್ಕೂ ಸೋಮಣ್ಣ ಅವರೇನು ಬಿಜೆಪಿಯ ಅಧಿಕೃತ ವಕ್ತಾರರಲ್ಲ ಎಂದು ಧನಂಜಯ್ ಹೇಳಿದ್ದಾರೆ.
ಸೋಮಣ್ಣ ಅವರಿಗೆ ಪಾಪಪ್ರಜ್ಞೆ ಕಾಡುತ್ತಿದೆ. ಬಿಎಸ್ ಯಡಿಯೂರಪ್ಪ ಅವರು ನಮ್ಮ ನಾಯಕರು ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಅನಂತ್ ಕುಮಾರ್ ಅವರು ಬಿಜೆಪಿಗೆ ಕರೆತಂದಿದ್ದು ಎನ್ನುತ್ತಿದ್ದಾರೆ. ಅವರಿಗೆ ರಾಜಕೀಯ ಭದ್ರತೆ ಬಗ್ಗೆ ಭಯ ಕಾಡುತ್ತಿದೆ. ಯಡಿಯೂರಪ್ಪ ಅವರ ಮನಸ್ಸು ಪರಿವರ್ತನೆ ಮಾಡಲು ಸೋಮಣ್ಣ ಅವರಿಂದ ಖಂಡಿತ ಸಾಧ್ಯವಿಲ್ಲ ಎಂದು ಧನಂಜಯ್ ಕುಮಾರ್ ಹೇಳಿದ್ದಾರೆ.
ದ.ಕ ಕೆಜೆಪಿ ಕಚೇರಿ ಓಪನ್: ಮಂಗಳೂರಿನ ನಂತೂರಿನಲ್ಲಿರುವ ಕೋಕನೆಟ್ ಗಾರ್ಡನ್ ಕಟ್ಟಡದಲ್ಲಿ ಕೆಜೆಪಿಯ ದ.ಕ. ಜಿಲ್ಲಾ ಕಚೇರಿಯನ್ನು ಧನಂಜಯ್ ಕುಮಾರ್ ಉದ್ಘಾಟಿಸಿದರು.
ಬಿ.ಎಸ್.ಯಡಿಯೂರಪ್ಪ ಇಲ್ಲದ ಬಿಜೆಪಿಯ ಈಗಿನ ಶಕ್ತಿ ಏನು ಎಂಬುದು ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ತೋರಿಸಿಕೊಟ್ಟಿದೆ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಕೆಜೆಪಿ 75 ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿಯನ್ನು ಮಾ.21ರಂದು ಬಿಡುಗಡೆಗೊಳಿಸಲಾಗುವುದು ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣವಾಗಿ ಕಲ್ಲಡ್ಕ ಪ್ರಭಾಕರ್ ಭಟ್ ಕೈವಶವಾಗಿದೆ. ಮಲೆನಾಡು, ಕರಾವಳಿ ಭಾಗದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ನೀಡಿರುವ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಬಿಜೆಪಿ ಸರ್ವಪತನ ಕೆಜೆಪಿ ಗುರಿಯಾಗಿದೆ ಎಂದು ಧನಂಜಯ್ ಕುಮಾರ್ ಹೇಳಿದರು.
ಕೆಜೆಪಿ ಪ್ರಚಾರ ಸಮಿತಿಯ ಕಾರ್ಯದರ್ಶಿ ದಿನಕರ್ ಒ.ವಿ, ಕೆಜೆಪಿಯ ದ.ಕ. ಜಿಲ್ಲಾಧ್ಯಕ್ಷ ಕೆ. ರವೀಂದ್ರ ಶೆಟ್ಟಿ, ಮುಖಂಡರಾದ ರಾಮಚಂದ್ರ ಬೈಕಂಪಾಡಿ, ಮರಿಯಮ್ಮ ಥೋಮಸ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.












Click it and Unblock the Notifications