ಚಿತ್ರಸುದ್ದಿ : ಶ್ರೀನಗರದಲ್ಲಿ ಭಯೋತ್ಪಾದಕ ದಾಳಿ
ನವದೆಹಲಿ, ಮಾ. 13 : ಮುಂಬೈ ಸರಣಿ ಬಾಂಬ್ ಸ್ಫೋಟದ ಘಟನೆಗೆ ಮಾ.12ಕ್ಕೆ 20 ವರ್ಷಗಳು ತುಂಬಿದವು. ಅಲ್ಲಿಂದ ಇತ್ತೀಚಿನ ಹೈದರಾಬಾದ್ ಬಾಂಬ್ ಸ್ಫೋಟದವರೆಗೆ ಭಾರತದ ಅನೇಕ ಕಡೆಗಳಲ್ಲಿ ಭೀಕರ ದಾಳಿಗಳು ನಡೆದಿವೆ. ಪ್ರತಿಯೊಂದು ದಾಳಿಯ ಹಿಂದೆಯೂ ಪಾಕಿಸ್ತಾನ ಸರಕಾರ ಬೆಂಬಲಿತ ಉಗ್ರ ಸಂಘಟನೆಗಳ ಕೈವಾಡವಿದೆಯೆಂದು ಹೇಳಿಕೆಗಳನ್ನು ನೀಡುತ್ತಲೇ ಇದ್ದೇವೆ.
ಆದರೆ, ಆಗುತ್ತಿರುವುದಾದರೂ ಏನು? ಭಯೋತ್ಪಾದನೆಯನ್ನು ನಿಗ್ರಹಿಸಲು ಆಗಿದೆಯಾ? ಬಹಿರಂಗವಾಗಿ ಪಾಕಿಸ್ತಾನದ ಉಗ್ರ ಸಂಘಟನೆಗಳೊಂದಿಗೆ ಗುರುತಿಸಿಕೊಳ್ಳುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಿದೆಯಾ? ಉಗ್ರರನ್ನು ಪರೋಕ್ಷವಾಗಿ ಬೆಂಬಲಿಸುತ್ತಿರುವ ಪಾಕಿಸ್ತಾನ ಸರಕಾರಕ್ಕೆ ಭಾರತ ಸರಕಾರ ಖಡಕ್ ಉತ್ತರ ಹೇಳುವ ಧೈರ್ಯ ತೋರಿದೆಯಾ?
ಉತ್ತರ ಮಾತ್ರ ತೆರೆದ ಪುಟದಂತಿದೆ. ಮಾ.13ರಂದು ಶ್ರೀನಗರದಲ್ಲಿ ಮತ್ತೊಂದು ಹತ್ಯಾಕಾಂಡ ನಡೆದಿದೆ. ಮಂಡ್ಯದ ವೀರಯೋಧ ಸತೀಶ್ ಸೇರಿ ಐವರು ಸಿಆರ್ಪಿಎಫ್ ಜವಾನರನ್ನು ಜಿಹಾದಿ ಉಗ್ರರು ಹತ್ಯೆಗೈದಿದ್ದಾರೆ. ಈ ದಾಳಿಯ ಹೊಣೆಯನ್ನು ಹಿಜಬುಲ್ ಮುಜಾಹಿದ್ದಿನ್ ಭಯೋತ್ಪಾದಕ ಸಂಘಟನೆ ಹೊತ್ತುಕೊಂಡಿದೆ. ಎಂದಿನಂತೆ, ನಮಗೂ ಈ ದಾಳಿಗೂ ಸಂಬಂಧವಿಲ್ಲ, ನಾವೇನೂ ಮಾಡುವಂತಿಲ್ಲ ಎಂದು ಪಾಕಿಸ್ತಾನ ಹೇಳಿ ಕೈತೊಳೆದುಕೊಂಡಿದೆ.
ಕ್ರಿಕೆಟ್ ಕಿಟ್ನಲ್ಲಿ ಅಡಗಿಸಿಟ್ಟ ಶಸ್ತ್ರಾಸ್ತ್ರಗಳಿಂದ ದಾಳಿ ಮಾಡಿ ಇಬ್ಬರು ಉಗ್ರರನ್ನು ಸೇನೆ ಕೊಂದುಹಾಕಿದೆ. ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯ ಚಿತ್ರಗಳು ಇಲ್ಲಿವೆ.

ಪ್ರತಿದಾಳಿಗೆ ಭಾರತೀಯ ಸೇನೆ ಸಜ್ಜು
ಪೊಲೀಸ್ ಪಬ್ಲಿಕ್ ಶಾಲೆಯ ಬಳಿ ಸಿಆರ್ಪಿಎಫ್ ಕ್ಯಾಂಪ್ ಮೇಲೆ ದಾಳಿ ನಡೆಯುತ್ತಿದ್ದಂತೆ ಭದ್ರತಾ ಸಿಬ್ಬಂದಿ ಪ್ರತಿದಾಳಿಗೆ ಸಜ್ಜಾಗುತ್ತಿರುವುದು. ಪ್ರತಿದಾಳಿಯಲ್ಲಿ ಕ್ರಿಕೆಟ್ ಪಟುಗಳ ವೇಷದಲ್ಲಿದ್ದ ಇಬ್ಬರು ಉಗ್ರರನ್ನು ಹೊಡೆದು ಉರುಳಿಸಲಾಗಿದೆ.

ಇವರೇ ಆ ಪಾಕಿಸ್ತಾನದ ಉಗ್ರರು
ಬೇಮಿನಾದಲ್ಲಿರುವ ಸಿಆರ್ಪಿಎಫ್ ಕ್ಯಾಂಪ್ ಮೇಲೆ ದಾಳಿ ನಡೆಸಿದ ಇಬ್ಬರು ಉಗ್ರರನ್ನು ಭದ್ರತಾ ಸಿಬ್ಬಂದಿಗಳು ಹೊತ್ತೊಯ್ಯುತ್ತಿರುವುದು.

20 ನಿಮಿಷಗಳ ಆ ಭೀಕರ ದಾಳಿ
ಮಕ್ಕಳಾಡುತ್ತಿದ್ದ ಮೈದಾನದ ಬಳಿ ಸುಮಾರು 20 ನಿಮಿಷಗಳ ಕಾಲ ಗುಂಡಿನ ದಾಳಿ ನಡೆದಿದೆ. ಭಾರತದ ಭದ್ರತಾ ಸಿಬ್ಬಂದಿಗಳು ಉಗ್ರರನ್ನು ಹತ್ಯೆಗೈದು ಇಡೀ ಪ್ರದೇಶವನ್ನು ಸುತ್ತುವರಿದರು.

ಬೇಮಿನಾ ಪ್ರದೇಶ ಸುತ್ತುವರಿದ ಸಿಬ್ಬಂದಿ
ಉಗ್ರರಿಂದ ಗುಂಡಿನ ದಾಳಿ ಆರಂಭವಾಗುತ್ತಿದ್ದಂತೆ ಪ್ರತಿದಾಳಿಯನ್ನು ಭದ್ರತಾ ಸಿಬ್ಬಂದಿಗಳು ಆರಂಭಿಸಿದ್ದಾರೆ. ಉಗ್ರರು ಹತ್ಯೆಯಾದ ನಂತರವೂ ಪಬ್ಲಿಕ್ ಶಾಲೆಯಲ್ಲಿ ಇನ್ನೂ ಕೆಲವರು ಅವಿತಿರಬಹುದೆಂದು ಶಂಕಿಸಲಾಗಿತ್ತು. ಆದರೆ, ಅಲ್ಲಿ ಯಾರೂ ಇರಲಿಲ್ಲ.

ದಾಳಿಯಲ್ಲಿ ಗಾಯಗೊಂಡ 7 ಸೈನಿಕರು
ಓರ್ವ ಕನ್ನಡಿಗ ಸೇರಿ ಐವರು ಯೋಧರು ಹತ್ಯೆಯಾಗಿದ್ದಲ್ಲದೆ ಏಳು ಜವಾನರು ಈ ದಾಳಿಯಲ್ಲಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುತ್ತಿರುವ ದೃಶ್ಯ.

ಸ್ವರಕ್ಷಣೆಗಾಗಿ ಓಡಿದ ಯೋಧರು
ಬೇಮಿನಾ ಪ್ರದೇಶದಲ್ಲಿ ಉಗ್ರರಿಂದ ದಾಳಿ ನಡೆಯುತ್ತಿದ್ದಂತೆ ಸ್ವಯಂರಕ್ಷಣೆಗಾಗಿ ಸಿಆರ್ಪಿಎಫ್ ಯೋಧರು ಓಡುತ್ತಿರುವ ದೃಶ್ಯ.

ಗಾಯಗೊಂಡ ಮತ್ತೊಬ್ಬ ಯೋಧ
ಹಿಜಬುಲ್ ಮುಜಾಹಿದ್ದಿನ್ ಉಗ್ರರಿಂದ ದಾಳಿಗೊಳಗಾಗಿ ಗಾಯಗೊಂಡಿರುವ ಯೋಧನೊಬ್ಬ ರಸ್ತೆ ಬದಿಯಲ್ಲಿ ಮರದ ಕೆಳಗಡೆ ರಕ್ಷಣೆ ಪಡೆಯುತ್ತಿರುವುದು.

ಓರ್ವ ನಾಗರಿಕನಿಗೂ ಗಾಯ
ಭಯೋತ್ಪಾದಕರು ಮತ್ತು ಭಾರತೀಯ ಸೈನಿಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ನಾಗರಿಕ ಕೂಡ ಗಾಯಗೊಂಡಿದ್ದು, ಅವರನ್ನು ಎಸ್ಎಮ್ಎಚ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.












Click it and Unblock the Notifications