ರಾಜ್ಯ ಬಿಜೆಪಿ ಸಾರಥಿ ಯಾರು ? ದೆಹಲಿಯಲ್ಲಿ ಘೋಷಣೆ
ರಾಷ್ಟ್ರೀಯ ನಾಯಕ ಅರುಣ್ ಜೇಟ್ಲಿ ಮತ್ತು ಧರ್ಮೇಂದ್ರ ಪ್ರಧಾನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಅಧ್ಯಕ್ಷರ ಆಯ್ಕೆ ಬಗ್ಗೆ ಒಮ್ಮತದ ನಿರ್ಣಯ ಕೈಗೊಳ್ಳಲು ಸಾಧ್ಯವಾಗಿಲ್ಲ. ವರಿಷ್ಠರು ಬಿಜೆಪಿ ರಾಷ್ಟೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ಸಭೆಯ ವರದಿ ನೀಡಲಿದ್ದು, ರಾಜನಾಥ್ ಸಿಂಗ್ ಅಧ್ಯಕ್ಷರ ಹೆಸರನ್ನು ಮುಂದಿನವಾರ ಘೋಷಿಸುವ ಸಾಧ್ಯತೆ ಇದೆ.
ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾದ ಕೋರ್ ಕಮಿಟಿ ಸಭೆ 3,30ರ ವರೆಗೆದ ನಡೆಯಿತು. ಕೋರ್ ಕಮಿಟಿ ಸಭೆಗೂ ಮುನ್ನ, ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ರಾಷ್ಟ್ರೀಯ ನಾಯಕರನ್ನು ಪ್ರತ್ಯೇಕವಾಗಿ ಭೇಟಿಮಾಡಿ ಚರ್ಚೆ ನಡೆಸಿದರು.
ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಯಾರನ್ನು ಆಯ್ಕೆ ಮಾಡಬಹುದು ಎಂದು ಸಭೆಯಲ್ಲಿ ವಿವರವಾದ ಚರ್ಚೆ ನಡೆದರೂ, ಅಧ್ಯಕ್ಷರನ್ನಾಗಿ ನೇಮಕ ಮಾಡುವ ಕುರಿತು ನಿರ್ಣಯ ಕೈಗೊಳ್ಳಲು ಸಾಧ್ಯವಾಗಿಲ್ಲ. ಸಭೆಯಲ್ಲಿ ಅನಂತ್ ಕುಮಾರ್ ಬಣ ಸಚಿವ ಆರ್.ಅಶೋಕ್ ಹೆಸರು ಪ್ರಸ್ತಾಪಿಸಿದರೆ, ಆರ್ಎಸ್ಎಸ್ ಪ್ರಮುಖ ಸಂತೋಷ್ ಜಿ ನಳೀನ್ ಕುಮಾರ್ ಕಟೀಲ್ ಮತ್ತು ಡಿ.ವಿ.ಸದಾನಂದ ಗೌಡರ ಆಯ್ಕೆ ಬಗ್ಗೆ ಪ್ರಸ್ತಾಪಿಸಿದರು ಎಂದು ತಿಳಿದುಬಂದಿದೆ.
ಯಾವ ನಾಯಕರ ಆಯ್ಕೆಯ ಬಗ್ಗೆಯೂ ಒಮ್ಮತ ಮೂಡದ ಕಾರಣ ಸಭೆಯನ್ನು ಮುಗಿಸಿ ವರಿಷ್ಠರು ದೆಹಲಿಗೆ ತೆರಳಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರ ಜೊತೆ ಸಭೆಯ ವಿವರಗಳ ಕುರಿತು ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಸೋಮವಾರ ಕರ್ನಾಟಕದ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಪ್ರಕಗೊಳ್ಳಲಿದ್ದು, ಮಂಗಳವಾರ ವರಿಷ್ಠಠರು ರಾಜನಾಥ್ ಸಿಂಗ್ ಜೊತೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಬುಧವಾರ ಅಥವ ಗುರುವಾರ ನೂತನ ಅಧ್ಯಕ್ಷರ ಘೋಷಣೆಯಾಗುವ ಸಂಭವವಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ