ಬಿಜೆಪಿಗೆ 250 ಕೋಟಿ ಶೇಮ್ ಎಂದ ಕೆಜೆಪಿ
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅನುಕೂಲವಾಗಲೆಂದು ಒಂದು ಸಾವಿರ ಹೊಸ ಮದ್ಯದಂಗಡಿಗಳಿಗೆ ಪರವಾನಗಿ ನೀಡಲು ಅಬಕಾರಿ ಸಚಿವ ರೇಣುಕಾಚಾರ್ಯ ಮುಂದಾಗಿದ್ದಾರೆ ಎಂದು ಕೆಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ್ ಕುಮಾರ್ ಆರೋಪಿಸಿದ್ದರು.
ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಕೇಂದ್ರ ಚುನಾವಣಾ ಆಯೋಗ ಮಧ್ಯ ಪ್ರವೇಶಿಸಿ ಬಿಜೆಪಿ ಸರ್ಕಾರಕ್ಕೆ ನಿರ್ಬಂಧ ಹೇರಬೇಕು ಎಂದು ಧನಂಜಯ್ ಕುಮಾರ್ ಆಗ್ರಹಿಸಿದ್ದರು.
ಉನ್ನತ ಶಿಕ್ಷಣ ಸಿಟಿ ರವಿ ಅವರು ಖಾಸಗಿ ವಿವಿ ಮಂಜೂರಾತಿಯಲ್ಲಿ ಭಾರಿ ಗಳಿಕೆ ಮಾಡಿಕೊಂಡಿದ್ದಾರೆ. ಅನೇಕ ಮಸೂದೆಗಳನ್ನು ಆತುರಾತುರವಾಗಿ ಅನುಮೋದನೆ ಮಾಡಲಾಗಿದೆ. ಜೆಡಿಎಸ್ ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರೂ ಬಿಜೆಪಿ ಸೊಪ್ಪು ಹಾಕಲಿಲ್ಲ ಎಂದು ಧನಂಜಯ್ ಆರೋಪಿಸಿದ್ದಾರೆ.
ರೇಣುಕಾಚಾರ್ಯ ಸ್ಪಷ್ಟನೆ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 7000 ಸಾರಾಯಿ ಅಂಗಡಿಗಳನ್ನು ಮುಚ್ಚಲಾಗಿದೆ. ಜನಸಂಖ್ಯೆ ಆಧಾರದ ಮೇಲೆ 1500 ಮದ್ಯದಂಗಡಿ ತೆರೆಯಲು ಅವಕಾಶವಿದೆ. ವೈನ್ ಶಾಪ್ ಗಳಲ್ಲಿ ಮದ್ಯ ಮಾರಾಟಕ್ಕೆ ಮಾತ್ರ ಅವಕಾಶವಿದೆ. ಮದ್ಯ ಸೇವನೆ ಮಾಡುವಂತಿಲ್ಲ. ಸರ್ಕಾರ ಸ್ನ್ಯಾಕ್ಸ್ ಬಾರ್ ಗಳಿಗೆ ಅನುಮತಿ ನೀಡಿಲ್ಲ. ಇನ್ನು ಹೊಸ ಮದ್ಯದಂಗಡಿಗಳಿಗೆ ಪರವಾನಗಿ ನೀಡಲು ಮುಂದಾಗಿರುವುದು ಸುಳ್ಳು ಸುದ್ದಿ ಎಂದಿದ್ದಾರೆ.
ಸರ್ಕಾರದ ಆದಾಯ ಹೆಚ್ಚಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಯಾವುದೇ ಕಿಕ್ ಬ್ಯಾಕ್ ಪಡೆಯುವ ಅಗತ್ಯ ನಮಗಿಲ್ಲ. ಧನಂಜಯ್ ಕುಮಾರ್ ಅವರು ತಮ್ಮ ಮಾತನ್ನು ವಾಪಸ್ ತೆಗೆದುಕೊಳ್ಳಲಿ. ವಿನಾಕಾರಣ ಆರೋಪ ಮಾಡುತ್ತಾ ಮಾತಿನ ಚಟ ತೀರಿಸಿಕೊಳ್ಳುವುದು ಧನಂಜಯ್ ಕುಮಾರ್ ಬಿಡಲಿ. ಆರೋಪ ನಿಜವಾದರೆ ದಾಖಲೆ ಸಹಿತ ದೂರು ನೀಡಲಿ. ಆರೋಪ ಸಾಬೀತಾದ ತಕ್ಷಣ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ರೇಣುಕಾಚಾರ್ಯ ಗುಡುಗಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ