70ಕ್ಕೆ ರಾಜಕೀಯ ನಿವೃತ್ತಿ : ಸಿದ್ದರಾಮಯ್ಯ ಘೋಷಣೆ
ಮೈಸೂರು ವಿಶ್ವವಿದ್ಯಾನಿಲಯದ ಕಾರ್ಯಕ್ರಮದಲ್ಲಿ ಶುಕ್ರವಾರ ಸಂಜೆ ಪಾಲ್ಗೊಂಡಿದ್ದ ಸಿದ್ದರಾಮಯ್ಯ (64), ಸರ್ಕಾರಿ, ಖಾಸಗಿ ಕೆಲಸ ಮಾಡುವವರಿಗೆ ನಿವೃತ್ತಿ ವಯಸ್ಸು ಇರುತ್ತದೆ. ರಾಜಕಾರಣಿಗಳು ಹೀಗೆ ನಿವೃತ್ತಿ ಘೋಷಿಸಿಕೊಳ್ಳುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.
ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಕಪ್ಪುಹಣ ಎಲ್ಲೆಡೆ ತುಂಬಿಕೊಂಡಿದೆ. ಚುನಾವಣಾ ವ್ಯವಸ್ಥೆ ಸಂಪೂರ್ಣ ಕಲುಷಿತಗೊಂಡಿದೆ. ಜನರಪರ ಕಾಳಜಿ ಇರುವ ನಾಯಕರು, ಬದ್ಧತೆ ಇರುವ ರಾಜಕಾರಣಿಗಳು ಇಂದು ಬೇಸರಗೊಂಡಿದ್ದಾರೆ ಎಂದರು.
ಇಂದಿನ ರಾಜಕೀಯ ಬೆಳವಣಿಗೆಗಳು ಸಮಾಜಕ್ಕೆ ಮಾರಕವಾಗಿವೆ. ರಾಜಕಾರಣಿಗಳು ಅಧಿಕಾರದ ಆಸೆಯಿಂದಾಗಿ ನಿವೃತ್ತಿ ಪಡೆಯುವುದಿಲ್ಲ. ಸಮಾಜದಲ್ಲಿ ಜಾತಿ ವ್ಯವಸ್ಥೆ ಅಧಿಕವಾಗಿದೆ, ಆದ್ದರಿಂದ ಅಸಮಾನತೆಯ ಕಂದಕ ಸೃಷ್ಟಿಯಾಗಿದೆ ಎಂದು ವಿಶ್ಲೇಷಿಸಿದರು.
ವಯಸ್ಸಾದಂತೆ ದೈಹಿಕ ಸಾಮರ್ಥ್ಯ ಕಡಿಮೆಯಾಗುವ ಜೊತೆಗೆ ಬುದ್ಧಿಯ ಚುರುಕು ಕಡಿಮೆಯಾಗುತ್ತದೆ. ಆದ್ದರಿಂದ ತಾವು 70ನೇ ವಯಸ್ಸಿಗೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಅವರು ಹೇಳಿದರು. ಸಿದ್ದರಾಮಯ್ಯ ಅವರ ಹೇಳಿಕೆ ಪ್ರಕಾರ ಮುಂದಿನ ಚುನಾವಣೆಯ ನಂತರ ಅವರು ಸ್ಪರ್ಧಿಸುವುದಿಲ್ಲ ಎಂಬುದು ಖಚಿತವಾಗಿದೆ.
ಇತ್ತೀಚೆಗಷ್ಟೆ ಮುಂದಿನ ವಿಧಾನಸಭೆಯ ನಂತರ ರಾಜಕೀಯ ನಿವೃತ್ತಿ ಪಡೆಯುವುದಾಗಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಈಗ ರಾಜಕೀಯ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದಾರೆ. ಚುನಾವಣೆ ಹತ್ತಿರವಾಗುತ್ತಿರುವಾಗ ಸಿದ್ದರಾಮಯ್ಯ ಅವರ ಹೇಳಿಕೆಗಳು ಎಂತಹ ಪ್ರಭಾವ ಬೀರುತ್ತವೆ ಎಂದು ಕಾದು ನೋಡಬೇಕು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ