ಸ್ಥಳೀಯ ಸಂಸ್ಥೆ ಚುನಾವಣೆ:ಯಾಕ್ ಸಿದ್ರಾಮಣ್ಣ ಹಿಂಗೆ ಹೇಳ್ಬಿಟ್ರಿ?

ಸ್ಥಳೀಯ ಸಂಸ್ಥೆ ಚುನಾವಣೆಯೇ ಬೇರೆ, ವಿಧಾನಸಭಾ ಚುನಾವಣೆಯೇ ಬೇರೆ. ಸ್ಥಳೀಯ ಸಂಸ್ಥೆ ಚುನಾವಣೆ ಒಟ್ಟಾರೆ ಜನಾಭಿಪ್ರಾಯ ಅಲ್ಲ ಎಂದು ಹೇಳಿಕೆ ನೀಡಿದರು.
ಅರಕಲಗೂಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಿದ್ದರಾಮಯ್ಯ ಸ್ಥಳೀಯ ಸಂಸ್ಥೆ ಚುನಾವಣೆಯೆಂದರೆ ಪಕ್ಕಾ ಲೋಕಲ್ ಪಾಲಿಟಿಕ್ಸ್ ಇದಕ್ಕೂ ಅಸೆಂಬ್ಲಿ ಚುನಾವಣೆಗೂ ಸಂಬಂಧವಿಲ್ಲ ಎಂದರು.
ಹಾಗಾದರೆ ನಿಮ್ಮದೇ ಪಕ್ಷದ ನಾಯಕರು ಇದು ಅಸೆಂಬ್ಲಿ ಚುನಾವಣೆಗೆ ಮುನ್ನ ನಡೆಯುವ ಸೆಮಿಫೈನಲ್ ಚುನಾವಣೆ ಎಂದು ಹೇಳಿಕೆ ನೀಡಿದ್ದಾರಲ್ಲಾ ಎಂದು ಪತ್ರಕರ್ತರು ಪ್ರಶ್ನಿಸಿದಾಗ ತಕ್ಷಣ ಮಾತು ಬದಲಿಸಿದ ಸಿದ್ದರಾಮಯ್ಯ ಹೈಕಮಾಂಡ್ ಮತ್ತು ದೇವೇಗೌಡರ ಬಗ್ಗೆ ಮಾತನಾಡಲು ಆರಂಭಿಸಿದರು.
ನಮ್ಮ ಪಕ್ಷದ ಹೈಕಮಾಂಡ್ ಯಾರು ಮುಖ್ಯಮಂತ್ರಿಯಾಗ ಬೇಕೆಂದು ನಿರ್ಧರಿಸುತ್ತಾರೆ. ಇದರ ಬಗ್ಗೆ ನಮ್ಮ ದೇವೇಗೌಡರಿಗೆ ಮತ್ತು ಅವರ ಸುಪುತ್ರ ಕುಮಾರಸ್ವಾಮಿಯವರಿಗೆ ಚಿಂತೆ ಬೇಡ. ನಮ್ಮದು ಅಪ್ಪ ಮಕ್ಕಳ ಪಕ್ಷವಲ್ಲ ಎಂದು ಸಿದ್ದರಾಮಯ್ಯ ತನ್ನ ಮಾತನ್ನು ಸ್ಥಳೀಯ ಸಂಸ್ಥೆ ಚುನಾವಣೆಯಿಂದ ಬೇರೆ ಕಡೆಗೆ ತಿರುಗಿಸಿದರು.
ಮಾನ್ಯ ಗೌಡರಿಗೆ ಬೇರೆಯವರಿಗೆ ಮರ್ಯಾದೆ ಕೊಟ್ಟು ಮಾತನಾಡಲು ಬರುವುದಿಲ್ಲ ಎಂದು ಸಮಸ್ತ ಕನ್ನಡ ಜನತೆಗೆ ಅರಿತಿದೆ. ನನ್ನನ್ನು ಟೀಕಿಸಿದರೆ ಅವರಿಗೆ ನೆಮ್ಮದಿ ಸಿಗುವಂತಿದ್ದರೆ ಟೀಕಿಸುವುದನ್ನು ಮುಂದುವರಿಸಿ ಕೊಂಡು ಹೋಗಲಿ ಎಂದು ಸಿದ್ದರಾಮಯ್ಯ ದೇವೇಗೌಡರ ವಿರುದ್ದ ವ್ಯಂಗ್ಯವಾಡಿದ್ದಾರೆ.
ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಈ ದುರ್ಗತಿ ಬರಲು ಜಗದೀಶ್ ಶೆಟ್ಟರ್ ಮತ್ತು ಬಸವರಾಜ ಬೊಮ್ಮಾಯಿ ಕಾರಣ. ಕಾವೇರಿ ನದಿ ಕಣಿವೆಯ ಜನ ಬಿಜೆಪಿಗೆ ತಕ್ಕ ಬುದ್ದಿ ಕಲಿಸಲಿದ್ದಾರೆ.
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗೆಸ್ ಪಕ್ಷ ಅಧಿಕಾರಕ್ಕೆ ಬರುವುದು ಶತಸಿದ್ದ. ಜನತೆ ಈ ಬಾರಿ ನಮ್ಮನ್ನು ಆಶೀರ್ವದಿಸಲಿದ್ದಾರೆ ಎಂದು ಸಿದ್ದರಾಮಯ್ಯ ಸಾಂಪ್ರದಾಯಿಕ ಹೇಳಿಕೆ ನೀಡಿದ್ದಾರೆ.












Click it and Unblock the Notifications