ಪ್ರಧಾನಿ ಪಟ್ಟಕ್ಕೆ ಮೋದಿಯೇ ಸೂಕ್ತ ಇಲ್ಲಿದೆ 10 ಕಾರಣ
ನವದೆಹಲಿ, ಮಾ.1: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸದಸ್ಯರು ಶುಕ್ರವಾರದಿಂದ ಮೂರು ದಿನ ಸಭೆ ಸೇರಲಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ನೇತೃತ್ವ ಯಾರು ವಹಿಸಬೇಕು ಎಂಬುದರ ಬಗ್ಗೆ ಈ ಸಭೆಯಲ್ಲಿ ನಿರ್ಧಾರವಾಗುವ ಎಲ್ಲಾ ಸೂಚನೆಗಳಿದೆ. ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಎಂದಿನಂತೆ ಈ ಸಭೆಯ ಕೇಂದ್ರಬಿಂದು.
ಈ ಕಾರ್ಯಕಾರಿಣಿ ಸಭೆಗೆ ಹಿರಿಯ ನಾಯಕ ಎಲ್ ಕೆ ಅಡ್ವಾಣಿ, ಲೋಕಸಭೆ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ರಾಜ್ಯಸಭೆ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ, ವೆಂಕಯ್ಯ ನಾಯ್ಡು, ಯಶವಂತ ಸಿನ್ಹ, ಜಸ್ವಂತ್ ಸಿಂಗ್ ಮುಂತಾದವರು ಪಾಲ್ಗೊಂಡಿದ್ದಾರೆ. ಮುಂಬರುವ ಕರ್ನಾಟಕ, ಆಂಧ್ರಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ಬಗ್ಗೆ ಮಾತುಕತೆ ನಡೆದಿದೆ.
ರಾಜಸ್ಥಾನ, ಛತ್ತೀಸ್ ಗಢ, ಮಧ್ಯಪ್ರದೇಶ, ದೆಹಲಿಯಲ್ಲಿನ ವಿಧಾನಸಭೆ ಚುನಾವಣೆಗೆ ನರೇಂದ್ರಮೋದಿ ಅವರನ್ನು ಚುನಾವಣಾ ಪ್ರಚಾರಕ್ಕೆ ಹೆಚ್ಚು ಬಳಸಿಕೊಳ್ಳಬೇಕು. ಚುನಾವಣಾ ಪ್ರಚಾರದ ಸಂಪೂರ್ಣ ಸಾರಥ್ಯ ಮೋದಿ ಅವರಿಗೆ ನೀಡಬೇಕು ಎಂಬ ಅಭಿಪ್ರಾಯಗಳು ಕೇಳಿ ಬಂದಿದೆ.
ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮುಖ್ಯ ಕೆಲಸವನ್ನು ಮುಂದೂಡುತ್ತಲೇ ಬಂದಿರುವ ಬಿಜೆಪಿ ಕೊನೆಗೂ ತನ್ನ ಅಭ್ಯರ್ಥಿಯನ್ನು ಘೋಷಿಸಲು ಸಜ್ಜಾಗಿದೆ. ಗುಜರಾತಿನ ಅತ್ಯಂತ ಯಶಸ್ವಿ ಜನನಾಯಕ ನರೇಂದ್ರ ಮೋದಿ ಅವರು ದೊಡ್ಡ ಮಟ್ಟದ ಹುದ್ದೆಗೆ ಏಕೆ ಅರ್ಹರಾಗಿದ್ದಾರೆ. ಪ್ರಧಾನಿ ಹುದ್ದೆ ನಿಭಾಯಿಸಲು ಸಮರ್ಥರೇ? ಎಂಬ ಪ್ರಶ್ನೆಗಳೂ ಇನ್ನೂ ಅನೇಕರ ಮನಸ್ಸಿನಲ್ಲಿದೆ. ಮೋದಿ ಪ್ರಧಾನಿ ಹುದ್ದೆಗೆ ಏಕೆ ಅರ್ಹರಾಗಿದ್ದಾರೆ ಎಂಬುದಕ್ಕೆ 10 ಕಾರಣಗಳು ಇಲ್ಲಿದೆ

ರಾಷ್ಟ್ರೀಯ ಕಾರ್ಯಕಾರಿಣಿ ಮೋದಿಗೆ ಮುಖ್ಯ
ಶುಕ್ರವಾರ ಆರಂಭವಾದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮೋದಿಯೇ ಕೇಂದ್ರ ಬಿಂದು, ದೆಹಲಿಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮೋದಿ ಅವರು ಭಾಷಣ ಮಾಡಿದ ಮೇಲೆ ಅವರ ಆಲೋಚನೆಗಳಿಗೆ ಬೆಲೆ ಕೊಡುವ ಕಾಲ ಬಂದಿದೆ ಎಂದು ಬಿಜೆಪಿ ಹಿರಿಯ ನಾಯಕರಿಗೆ ಮನವರಿಕೆಯಾಗಿದೆ. ಪ್ರಧಾನಿ ಅಭ್ಯರ್ಥಿ ಆಯ್ಕೆ ಗೊಂದಲ ಬಹುತೇಕ ನಿವಾರಣೆಯಾಗಿದೆ.

ಗುಜರಾತಿನ ಹ್ಯಾಟ್ರಿಕ್ ವಿಜಯದ ಬೆಂಬಲ
ಬಿಜೆಪಿಯ ಇತರೆ ನಾಯಕರಿಗೆ ಇಲ್ಲದ ನಾಯಕತ್ವದ ಗುಣ ಮೋದಿ ಅವರಲ್ಲಿದೆ. ಪಕ್ಷವನ್ನು ರಾಜ್ಯವನ್ನು ಮುನ್ನಡೆಸುವ ಸಾಮರ್ಥ್ಯ, ಎಲ್ಲರಿಗೂ ಸಲ್ಲುವಂತೆ ನೇಮ ನಿಯಮ ರೂಪಿಸುವ ಕಲೆ ಮೋದಿಗೆ ಕರಗತವಾಗಿದೆ. ಇದಕ್ಕೆ ಗುಜರಾತಿನಲ್ಲಿ ಹ್ಯಾಟ್ರಿಕ್ ವಿಜಯ ಸಾಧಿಸಿದ್ದೇ ಸಾಕ್ಷಿ

ಅಟಲ್ ಬಿಹಾರಿ ವಾಜಪೇಯಿ ಜತೆ ಮೋದಿ ಹೋಲಿಕೆ
ಗುಜರಾತಿನ ಐತಿಹಾಸಿಕ ವಿಜಯದ ನಂತರ ತರುಣ್ ವಿಜಯ್ ಸೇರಿದಂತೆ ಅನೇಕ ಬಿಜೆಪಿ ನಾಯಕರು ಮೋದಿ ಅವರನ್ನು ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಗೆ ಹೋಲಿಸಿದ್ದರು. ಈ ರೀತಿ ತಮ್ಮ ಪ್ರಭಾವದಿಂದ ಪಕ್ಷವನ್ನು ಆಂತರಿಕ ಒಗ್ಗೂಡಿಸುವ ಕೆಲಸವನ್ನು ಮೋದಿ ಮಾಡುತ್ತಿದ್ದಾರೆ.

ರಾಜನಾಥ್ ಸಿಂಗ್ ರಿಂದ ಮೋದಿಗೆ ಬೆಂಬಲ
ಭ್ರಷ್ಟಾಚಾರದ ಆರೋಪ ಹೊತ್ತಿದ್ದ ನಿತಿನ್ ಗಡ್ಕರಿ ಅವರ ನಿರ್ಗಮನದ ನಂತರ ಪಟ್ಟಕ್ಕೆ ಬಂದ ರಾಜನಾಥ್ ಸಿಂಗ್ ಅವರು ಮೋದಿ ಪರವಾಗಿ ಅನೇಕ ಬಾರಿ ಹೇಳಿಕೆ ನೀಡಿದ್ದಾರಲ್ಲದೆ, ಮೋದಿ ಅವರಿಗೆ ರಾಷ್ಟ್ರ ಮಟ್ಟದ ವೇದಿಕೆ ಒದಗಿಸಲು ಪಕ್ಷ ಸಿದ್ಧ ಎಂದಿದ್ದಾರೆ. ಪಕ್ಷದ ಅಧ್ಯಕ್ಷರೇ ಮೋದಿ ಪರ ಇರುವಾಗ ಮೋದಿ ಮುಂದಿನ ಪಿಎಂ ಅಭ್ಯರ್ಥಿಯಾಗಿ ಆಯ್ಕೆಯಾಗುವ ಹಾದಿ ಸುಲಭವಾಗುತ್ತದೆ.

ಮೋದಿ ಪ್ರಚಾರ ವೈಖರಿ
ಅಮೆರಿಕಾಧ್ಯಕ್ಷ ಬರಾಕ್ ಒಬಾಮರಂತೆ ನರೇಂದ್ರ ಮೋದಿ ಕೂಡಾ ಪ್ರಚಾರ ಕಲೆ, ಭಾಷಣ ಕಲೆ ಅರಿತ ನಿಪುಣ ರಾಜಕಾರಣಿ. 3ಡಿ ತಂತ್ರಜ್ಞಾನ ಬಳಸಿ ಏಕಕಾಲಕ್ಕೆ ಅನೇಕ ಕಡೆಗಳಲ್ಲಿ ಕಾಣಿಸಿಕೊಂಡ ಮೋದಿ ಪ್ರಚಾರ ವಿಧಾನ ಇನ್ನೂ ಬೇರೆ ನಾಯಕರಿಗೆ ಒಗ್ಗಿಲ್ಲ. ಜನರ ಜೊತೆ ಸದಾ ಕಾಲ ಉತ್ತಮ ಸಂವಹನ ಹೊಂದಿರುವ ಮೋದಿ ಜನಪ್ರಿಯತೆ ಎಲ್ಲಾ ರಂಗಕ್ಕೂ ಹಬ್ಬಿದೆ.

ಪ್ರಮುಖ ನಾಯಕರ ಬೆಂಬಲ
ರಾಮ್ ಜೇಠ್ಮಲಾನಿ, ಶತ್ರುಘ್ನ ಸಿನ್ಹಾ ಹಾಗೂ ಯಶವಂತ್ ಸಿನ್ಹಾ ಅವರು ಮೋದಿ ಅವರು ಪ್ರಧಾನಿ ಅಭ್ಯರ್ಥಿಯಾಗಲು ಸೂಕ್ತ ಎಂದು ಅನೇಕ ಬಾರಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಬಿಜೆಪಿ ಕಾರ್ಯಕಾರಣಿ ಸಭೆಯಲ್ಲೂ ಮೋದಿ ಪರ ನಿಲ್ಲಲ್ಲು ಈ ಮೂವರು ನಾಯಕರು ಸಿದ್ಧರಿದ್ದು, ಮೋದಿಗೆ ಇದು ಪ್ಲಸ್ ಪಾಯಿಂಟ್ ಆಗಿದೆ.

ಗೋಧ್ರಾ ಹತ್ಯಾಕಾಂಡ ಮರೆತು ಹೋಗಿದೆ
ಎನ್ ಡಿಎ ಮುಖ್ಯ ಮೈತ್ರಿ ಪಕ್ಷಗಳು ಮೋದಿ ಪ್ರಧಾನಿ ಹುದ್ದೆಗೆ ಬೇಡ ಎನ್ನಲು ಕಾರಣವಾಗಿದ್ದ ಗೋಧ್ರಾ ಹತ್ಯಾಕಾಂಡ ಈಗ ಬರೀ ನೆನಪಾಗಿದೆ. ಆದರೆ, ಇತ್ತೀಚೆಗೆ ಗುಜರಾತಿನಲ್ಲಿ ಮುಸ್ಲಿಂ ಬಾಂಧವರು ಮೋದಿ ಪರ ತೋರಿಸಿರುವ ಒಲವು ಮೈತ್ರಿಪಕ್ಷಗಳ ಸದ್ದಡಗಿಸಿದೆ. ಸ್ಥಳೀಯ ಮುನ್ಸಿಪಾಲಿಟಿ ಚುನಾವಣೆಯಲ್ಲಿ ಶೇ 90 ರಷ್ಟು ಮುಸ್ಲಿಂ ಜನಾಂಗ ಹೊಂದಿರುವ ದ್ವಾರಕ ಜಿಲ್ಲೆಯಲ್ಲಿ 27 ಸೀಟು ಗೆದ್ದ ಮೋದಿ ಬಗ್ಗೆ ಎನ್ ಡಿಎ ಮಿತ್ರ ಪಕ್ಷಗಳು ಕೂಡಾ ಮೃದು ಧೋರಣೆ ತಾಳುವಂತೆ ಮಾಡಿದೆ.

ಮುಸ್ಲಿಮರ ಮುಕ್ತ ಬೆಂಬಲ
ಮೋದಿ ಮುಸ್ಲಿಂ ವಿರೋಧಿ ನಾಯಕ ಎಂದು ಬಿಂಬಿಸಲಾಗಿತ್ತು. ಆದರೆ, ಇತ್ತೀಚೆಗೆ ಜಮಾಯತ್ ಉಲಮಾ-ಇ-ಹಿಂದ್ ನ ಪ್ರಧಾನ ಕಾರ್ಯದರ್ಶಿ ಮೌಲಾನಾ ಮಹಮ್ಮದ್ ಮದನಿ ಅವರು ಬಹಿರಂಗ ಸಭೆಯಲ್ಲಿ ಮೋದಿ ಪರ ಹೇಳಿಕೆ ನೀಡಿದರು. ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಗುಜರಾತಿನಲ್ಲಿ ಮುಸ್ಲಿಮರು ಹೆಚ್ಚು ಸುರಕ್ಷಿತ ಹಾಗೂ ಸಂತಸದಿಂದ ಜೀವನ ಸಾಗಿಸುತ್ತಿದ್ದಾರೆ ಎಂದು ಹೇಳಿದ್ದರು.

ಬಂಡವಾಳ ಹೂಡಿಕೆ ಮೋದಿಯೇ ಮಾದರಿ
ವೈಬ್ರೈಂಟ್ ಗುಜರಾತ್ ಮೂಲಕ ದೇಶ ವಿದೇಶದ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಿ ಕ್ರಾಂತಿ ಮಾಡಿದ ಮೋದಿ ಅವರು ಉದ್ಯಮಿಗಳಿಗೂ ಅಚ್ಚುಮೆಚ್ಚು. ಮುಖೇಶ್ ಅಂಬಾನಿ,ರತನ್ ಟಾಟಾ, ಅನಿಲ್ ಅಂಬಾನಿ ಸೇರಿದಂತೆ ಹಲವು ಪ್ರಮುಖ ಉದ್ಯಮಿಗಳು ಗುಜರಾತಿನ ಸಿಎಂ ಮೋದಿ ಅವರನ್ನು ಬೆಂಬಲಿಸಿದ್ದಾರೆ.

ಮೋದಿಗೆ ಎಲ್ಲೆಡೆ ಬೆಂಬಲ
ಮೋದಿಯನ್ನು ಗುಜರಾತಿಗೆ ಸೀಮಿತಗೊಳಿಸದೆ ರಾಷ್ಟ್ರೀಯ ನಾಯಕರನ್ನಾಗಿಸಲು ಇದ್ದ ಇನ್ನೊಂದು ಕೊರತೆ ಈಗ ನಿವಾರಣೆಯಾಗಿದೆ. ಮಹಾರಾಷ್ಟ್ರ, ಪಶ್ಚಿಮ ಬಂಗಾಳದಲ್ಲೂ ಮೋದಿ ಅಲೆ ಶುರುವಾಗಿದೆ. ಮಹಾರಾಷ್ಟ್ರ ನವನಿರ್ಮಾಣ್ ಸೇನಾ(ಎಂಎನ್ ಎಸ್) ನಾಯಕ ರಾಜ್ ಠಾಕ್ರೆ ಅವರು ಮೋದಿ ಬೆನ್ನ ಹಿಂದೆ ನಿಂತಿದ್ದಾರೆ. ಎಂಎನ್ ಎಸ್ ಮೋದಿ ಹಾದಿಯಲ್ಲಿ ಸಾಗಲಿದೆ ಎಂದಿದ್ದಾರೆ. ಮೋದಿ ದೇಶವನ್ನು ಮುನ್ನಡೆಸಲು ಸಿದ್ಧವಾಗಿದ್ದಾರೆ, ಬಿಜೆಪಿ ಘೋಷಣೆಯೊಂದೆ ಬಾಕಿಯಿದೆ.












Click it and Unblock the Notifications