ವೀರಪ್ಪನ್ ಸಹಚರರಿಗೆ ಗಲ್ಲು, ಮತ್ತೆ ಮುಂದೂಡಿಕೆ
ನವದೆಹಲಿ, ಫೆ.20: ಪಾಲಾರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲ್ಲು ಶಿಕ್ಷೆಗೆ ಗುರಿಯಾಗಿರುವ ವೀರಪ್ಪನ್ ನ ನಾಲ್ವರು ಸಹಚರರ ಗಲ್ಲು ಶಿಕ್ಷೆ ಮತ್ತೆ ಮುಂದೂಡಲಾಗಿದೆ. ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಬೇಕೆಂದು ನಾಲ್ವರು ಸಹಚರರು, ಸುಪ್ರೀಂಕೋರ್ಟ್ ಗೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಗಲ್ಲು ಶಿಕ್ಷೆಯನ್ನು 6 ವಾರಗಳ ಕಾಲ ಮುಂದೂಡಿದೆ.
ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ವೀರಪ್ಪನ್ ನಾಲ್ವರು ಸಹಚರರ ಗಲ್ಲು ಶಿಕ್ಷೆಗೆ ಸುಪ್ರೀಂಕೋರ್ಟ್ ಫೆ.20ರವರೆಗೆ ತಡೆಯಾಜ್ಞೆ ನೀಡಲಾಗಿತ್ತು. ಬುಧವಾರ(ಫೆ.20) ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ಅವರು ವೀರಪ್ಪನ್ ನ ನಾಲ್ವರು ಸಹಚರರ ಗಲ್ಲು ಶಿಕ್ಷೆಗೆ ತಡೆಯಾಜ್ಞೆಯನ್ನು 6 ವಾರಗಳ ಕಾಲ ಮುಂದೂಡಿದ್ದಾರೆ. ಪ್ರಕರಣವನ್ನು ನ್ಯಾ. ಸಿಂಘ್ವಿ ಅವರಿರುವ ನ್ಯಾಯಪೀಠಕ್ಕೆ ವರ್ಗಾಯಿಸಲಾಗಿದೆ.

ವೀರಪ್ಪನ್ ನಾಲ್ವರು ಸಹಚರರಾದ ಜ್ಞಾನಪ್ರಕಾಶನ್, ಸೈಮನ್, 'ಮೀಸೆಕಾರ್' ಮಾದಯ್ಯ ಮತ್ತು ಬಿಲವೇಂದ್ರನ್ ಗೆ ತಾತ್ಕಾಲಿಕ ರಿಲೀಫ್ ದೊರೆತಿದೆ.ಪಾಲಾರ್ ಬಳಿ 1993ರಲ್ಲಿ ನೆಲಬಾಂಬ್ ಸ್ಫೋಟಿಸಿ 15 ಪೊಲೀಸ್ ಸಿಬ್ಬಂದಿ ಸೇರಿ 22 ಜನರ ಸಾವಿಗೆ ಕಾರಣರಾಗಿದ್ದ ಈ ನಾಲ್ವರಿಗೆ ಸುಪ್ರೀಂಕೋರ್ಟ್ 2004ರಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿತ್ತು.
ಕ್ಷಮಾದಾನ ನೀಡುವಂತೆ ನಾಲ್ವರು ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಫೆ.13ರಂದು ತಿರಸ್ಕರಿಸಿದ್ದರು. ಆದ್ದರಿಂದ ಇವರಿಗೆ ಗಲ್ಲು ಶಿಕ್ಷೆ ಜಾರಿಯಾಗುವುದು ಖಚಿತವಾಗಿತ್ತು. ವೀರಪ್ಪನ್ ಪತ್ನಿ ಮುತ್ತುಲಕ್ಷ್ಮೀ ಸಹ ನಾಲ್ವರಿಗೆ ಗಲ್ಲು ಶಿಕ್ಷೆ ವಿಧಿಸಬಾರದೆಂದು ಮನವಿ ಮಾಡಿದ್ದರು. ನಾಲ್ವರು ಆರೋಪಿಗಳು ಸದ್ಯ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾರೆ.
ಗಲ್ಲು ಶಿಕ್ಷೆಗೆ ಗುರಿಯಾಗಿರುವ ನಾಲ್ವರಿಗೆ ಜೀವಾವಧಿ ಶಿಕ್ಷೆ ನೀಡಬೇಕು. ಗಲ್ಲು ಶಿಕ್ಷೆ ಯಾರಿಗೂ ನೀಡುವುದು ಬೇಡ ಎಂದು ಬೆಂಗಳೂರಿನಲ್ಲಿ ಮಂಗಳವಾರ(ಫೆ.19) ಮಾನವ ಹಕ್ಕುಗಳ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.












Click it and Unblock the Notifications