ಸೋಮಣ್ಣ ಬೇರೆ ಪಕ್ಷ ಸೇರಲ್ಲಂತೆ, ಬಿಜೆಪಿ ಬಿಡಲ್ಲಂತೆ

ಕಾಂಗ್ರೆಸ್ ಪಕ್ಷ ಸೇರಬಯಸಿರುವ ಬಿಜೆಪಿ ಶಾಸಕರ ಪಟ್ಟಿ ಹಿಡಿದು ಕೊಂಡು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಅವರು ದೆಹಲಿಗೆ ಕಾಲಿಟ್ಟಿದ್ದರು.. ಸಚಿವ ವಿ ಸೋಮಣ್ಣ, ಸಿ.ಪಿ ಯೋಗೇಶ್ವರ್ ಸೇರಿದಂತೆ ಐದಾರು ಸಚಿವರು ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಹೈಕಮಾಂಡ್ ನಿಂದ ಗ್ರೀನ್ ಸಿಗ್ನಲ್ ಪಡೆಯಲು ಬಂದಿರುವುದನ್ನು ಪರಮೇಶ್ವರ್ ಖಾತ್ರಿ ಪಡಿಸಿದ್ದರು.
ಆದರೆ, ತಾವು ಯಾವುದೇ ಪಕ್ಷದ ಮುಖಂಡ ಬಳಿ ಮಾತುಕತೆ ನಡೆಸಿಲ್ಲ. ಬಿಜೆಪಿ ತೊರೆಯುವುದು ಕನಸಿನ ಮಾತು. ನನ್ನ ವಿರೋಧಿಗಳು ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸುತ್ತಿರುತ್ತಾರೆ. ಈ ಹಿಂದೆ ಕೂಡಾ ಕೆಜೆಪಿ ಸೇರುವ ಬಗ್ಗೆ ಸುದ್ದಿ ಹಬ್ಬಿತ್ತು. ಈಗ ಕಾಂಗ್ರೆಸ್ ಎನ್ನುತ್ತಿದ್ದಾರೆ. ನನಗೆ ಬಿಜೆಪಿ ಬಿಡುವ ಮನಸ್ಸಿಲ್ಲ ಎಂದು ವಿ ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.
ಸಚಿವ ವಿ ಸೋಮಣ್ಣ, ಸಿಪಿ ಯೋಗೇಶ್ವರ್, ರಾಜುಗೌಡ ಹಾಗೂ ಆನಂದ್ ಆಸ್ನೋಟಿಕರ್ ಜೊತೆಗೆ ಪಕ್ಷೇತರ ಶಾಸಕರಾದ ನರೇಂದ್ರಸ್ವಾಮಿ, ಗೂಳಿಹಟ್ಟಿ ಶೇಖರ್, ಡಿ. ಸುಧಾಕರ್, ವೆಂಕಟರಮಣಪ್ಪ ಹಾಗೂ ಶಿವರಾಜ್ ತಂಗಡಗಿ ಅವರು ಕಾಂಗ್ರೆಸ್ ಸೇರ ಬಯಸಿದ್ದಾರೆ ಇವರುಗಳ ಹೆಸರಿರುವ ಪಟ್ಟಿಯನ್ನು ಹೊತ್ತು ಜಿ ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಅವರು ಹೈಕಮಾಂಡ್ ನಾಯಕರ ಮನೆಗೆ ತೆರಳಿದ್ದಾರೆ ಎಂಬ ಸುದ್ದಿ ಬಂದಿತ್ತು.
ಯೋಗೇಶ್ವರ್ ಹಾಗೂ ಸೋಮಣ್ಣ ಸೇರ್ಪಡೆ ಕೆಲ ಶಾಸಕರು ವಿರೋಧಿಸಿದ್ದು ಬಿಟ್ಟರೆ ಇವರ ಸೇರ್ಪಡೆಗೆ ರಾಜ್ಯ ಕಾಂಗ್ರೆಸ್ ನಲ್ಲಿ ಯಾವುದೇ ಹೆಚ್ಚಿನ ಪ್ರತಿರೋಧ ಕಂಡು ಬಂದಿರಲಿಲ್ಲ. ಅಪರೇಷನ್ ಕಮಲ ಮಾದರಿ ತಿರುಮಂತ್ರ, ಪ್ರತಿತಂತ್ರವನ್ನು ಹೆಣೆಯಲು ಕೆಪಿಸಿಸಿ ಸಿದ್ಧತೆ ನಡೆಸಿದ್ದು, ಇತರೆ, ಪಕ್ಷದ ನಾಯಕರನ್ನು ಸೆಳೆಯುತ್ತಿದ್ದಾರೆ ಎನ್ನಲಾಗಿದೆ. ಆದರೆ, ಮೂಲ ಕಾಂಗ್ರೆಸ್ಸಿಗರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವುದು ಕೆಪಿಸಿಸಿಗೆ ದೊಡ್ಡ ತಲೆನೋವಾಗಿತ್ತು.
ಸೋಮಣ್ಣ ಸೇರ್ಪಡೆಗೆ ವಿರೋಧ: ಸಚಿವ ವಿ.ಸೋಮಣ್ಣ ಅವರ ಸೇರ್ಪಡೆಯನ್ನು ಬೆಂಗಳೂರಿನ ಬಹುತೇಕ ಶಾಸಕರು ಸ್ವಾಗತಿಸಿದ್ದಾರೆ. ಆದರೆ, ಅವರ ಪ್ರತಿಸ್ಪರ್ಧಿ ಎಂ. ಕೃಷ್ಣಪ್ಪ ಹಾಗೂ ಅವರ ಪುತ್ರ ಪ್ರಿಯಕೃಷ್ಣ ಅವರು ಸಹಜವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಸೋಮಣ್ಣ ಕಾಂಗ್ರೆಸ್ ಸೇರಿದರೆ ಮತ್ತೊಮ್ಮೆ ಗೋವಿಂದರಾಜನಗರ ಕ್ಷೇತ್ರದ ಟಿಕೆಟ್ ಬೇಕು ಎಂದು ಕೇಳುತ್ತಾರೆ ಎಂಬ ಸುದ್ದಿ ಸಿಕ್ಕ ನಂತರ ಅದೇ ಕ್ಷೇತ್ರ ಹಾಲಿ ಶಾಸಕ ಪ್ರಿಯಕೃಷ್ಣ ಗರಂ ಆಗಿದ್ದರು.
ಕ್ಷೇತ್ರಗಳಿಗೆ ಟಿಕೆಟ್ ಹಂಚಿಕೆ ಸಮಸ್ಯೆ ಬಗೆಹರಿದರೆ ಸೋಮಣ್ಣ ಸೇರ್ಪಡೆ ಖಚಿತ ಎನ್ನಲಾಗಿದೆ. ಒಂದೇ ಕುಟುಂಬದ ಇಬ್ಬರಿಗೆ ಟಿಕೆಟ್ ನೀಡುವ ನಿಯಮ ಕಾಂಗ್ರೆಸ್ ನಲ್ಲಿ ಸದ್ಯಕ್ಕಂತೂ ಇಲ್ಲ. ಯುವ ನಾಯಕರಿಗೆ ಮಾತ್ರ ಆದ್ಯತೆ ಎಂದು ರಾಹುಲ್ ಗಾಂಧಿ ನಿಯಮ ಹೊರಡಿಸಿದ ಮೇಲೆ ಪ್ರಿಯಕೃಷ್ಣ ಅವರಿಗೆ ಗೋವಿಂದ ರಾಜ ಕ್ಷೇತ್ರ ಒಲಿಯುವ ಸಾಧ್ಯತೆ ಹೆಚ್ಚು. ಈ ಎಲ್ಲಾ ಲೆಕ್ಕಾಚಾರವನ್ನು ಅರಿತ ಸೋಮಣ್ಣ ಸದ್ಯಕ್ಕೆ ಬಿಜೆಪಿಯನ್ನೇ ನಂಬಿಕೊಂಡು ಮುಂದುವರೆಯುವ ಸಾಧ್ಯತೆ ಹೆಚ್ಚಿದೆ.












Click it and Unblock the Notifications