ಮುಷ್ಕರಕ್ಕೆ ಬೆಂಬಲ, ಫೆ.20ರಂದು ಬಸ್ ಸಂಚಾರವಿಲ್ಲ?

ರಾಜ್ಯ ರಸ್ತೆಸಾರಿಗೆ ಮತ್ತು ಬಿಎಂಟಿಸಿ ನೌಕರರ ಸಂಯುಕ್ತ ಒಕ್ಕೂಟವು ಬಂದ್ ಗೆ ಬೆಂಬಲ ಘೋಷಿಸಿದೆ. ಆದ್ದರಿಂದ, ಫೆ.20ರಂದು ಕೆಎಸ್ಆರ್ ಟಿಸಿ ಮತ್ತು ಬಿಎಂಟಿಸಿಬಸ್ ಗಳು ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಸಂಚರಿಸುವುದು ಅನುಮಾನವಾಗಿದೆ.
ಕೇಂದ್ರ ಸರ್ಕಾರ ಸಗಟು ಡೀಸೆಲ್ ಖರೀದಿ ದರವನ್ನು ಪ್ರತಿ ಲೀಟರ್ ಗೆ 12 ರೂ. ಹೆಚ್ಚಳ ಮಾಡಿರುವುದರಿಂದ ಸಾರಿಗೆ ಸಂಸ್ಥೆಗಳಿಗೆ ಹೊರೆ ಆಗಲಿದ್ದು, ಇದರಿಂದಾಗಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಮಷ್ಕರಕ್ಕೆ ಬೆಂಬಲ ನೀಡಿದೆ.
ಒಂದು ದಿನದ ಸಂಕೇತಿಕ ಮುಷ್ಕರ ನಡೆಸಿ, ಸಾರಿಗೆ ನಿಗಮಗಳಿಗೆ ಕೇಂದ್ರ ಸರ್ಕಾರ ಸಬ್ಸಿಡಿ ದರದಲ್ಲಿ ಡೀಸೆಲ್ ಪೂರೈಸಬೇಕು. ಸಗಟು ಡೀಸೆಲ್ ದರ ಇಳಿಕೆ ಮಾಡಬೇಕು ಎಂದು ಮನವಿ ಮಾಡಲು ಸಂಘ ನಿರ್ಧರಿಸಿದೆ.
ಮುಷ್ಕರ ನಡೆಸುವ ಕುರಿತು ಆಡಳಿತ ಮಂಡಳಿಗೆ ಈಗಾಗಲೇ ಕಾರ್ಮಿಕ ಸಂಘಟನೆಗಳು ನೋಟಿಸ್ ನೀಡಿವೆ. ಸೋಮವಾರ ರಾಜ್ಯ ರಸ್ತೆ ಸಾರಿಗೆ ನಿಗಮದ ಆಡಳಿತ ಮಂಡಳಿ ಸಭೆ ನಡೆಯಲಿದ್ದು, ನಂತರ ಬಸ್ ಗಳು ಸಂಚರಿಸುವ ಬಗ್ಗೆ ಅಧಿಕೃತ ಅದೇಶ ಹೊರಬೀಳಲಿದೆ.
ಆಟೋ ಚಾಲಕರ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದು, ಫೆ.20 ಮತ್ತು 21 ರಂದು ಆಟೋಗಳ ಸಂಚರವಿರುವುದಿಲ್ಲ ಎಂದು ಈಗಾಗಲೇ ಘೋಷಿಸಿವೆ.
ಆಟೋ, ಬಸ್ ಸಂಚಾರ ವ್ಯತ್ಯಯದಿಂದ ಸಾರ್ವಜನಿಕರಿಗೆ ಆಗುವ ತೊಂದರೆ ತಪ್ಪಿಸಲು ಬಿಎಂಟಿಸಿ ಹೆಚ್ಚುವರಿ ಬಸ್ ಗಳನ್ನು ಓಡಿಸಲು ಚಿಂತನೆ ನಡೆಸಿದ್ದು, ಇಂದು ನಡೆಯುವ ಆಡಳಿತ ಮಂಡಳಿ ಸಭೆಯಲ್ಲಿ ಈ ಕುರಿತು ಅಂತಿಮ ಆದೇಶ ಹೊರಬೀಳುವ ನಿರೀಕ್ಷೆ ಇದೆ.
ಮುಷ್ಕರಕ್ಕೆ ಬೆಂಬಲ ಸೂಚಿಸಿರುವ ಸಂಘಟನೆಗಳು: ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ, ಆಟೋ ಚಾಲಕರ ಸಂಘ, ಕರ್ನಾಟಕ ಯುನೈಟೆಡ್ ಶಾಲಾ ಮತ್ತು ಲಘು ವಾಹನ ಚಾಲಕರ ಸಂಘ.
ಮುಷ್ಕರ ಕೈಬಿಡಿ ಪ್ರಧಾನಿ ಮನವಿ : ಫೆ.20 ಮತ್ತು 21ರಂದು ಕೇಂದ್ರ ಕಾರ್ಮಿಕ ಸಂಘಟನೆಗಳು ನಡೆಸಲು ಉದ್ದೇಶಿಸಿರುವ ಮುಷ್ಕರವನ್ನು ಹಿಂಪಡೆಯಬೇಕೆಂದು ಪ್ರಧಾನಿ ಮನಮೋಹನ್ ಸಿಂಗ್ ಸಂಘಟನೆಗಳಿಗೆ ಮನವಿ ಮಾಡಿದ್ದಾರೆ. ಎರಡು ದಿನ ದೇಶವ್ಯಾಪ್ತಿ ಮುಷ್ಕರ ನಡೆಸಿದೆರೆ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಕೋಟ್ಯಾಂತರ ರೂ.ನಷ್ಟ ಸಂಭವಿಸಲಿದೆ.ಆದ್ದರಿಂದ ಮುಷ್ಕರ ನಡೆಸಬಾರದು ಎಂದು ಮನವಿ ಮಾಡಿದ್ದಾರೆ. ಆದರೆ, ಕಾರ್ಮಿಕ ಸಂಘಟನೆಗಳು ಪ್ರಧಾನಿಗಳ ಮನವಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.












Click it and Unblock the Notifications