ಮಿನಿ ಮಹಾ ಸಮರ: ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷ?

ಐದು ವರ್ಷಗಳ ಕೆಟ್ಟ ಆಡಳಿತ ಬೆನ್ನಿಗಿರುವಾಗ ಜನಕ್ಕೆ/ಮತದಾರರಿಗೆ ಹೇಗಪ್ಪಾ ಮುಖ ತೋರಿಸುವುದು? ಎಂಬುದು ಆ ಪಕ್ಷದ ತಳಮಳವಾಗಿದೆ. ಮಾಡಿದ್ದುಣ್ಣೋ ಮಾರಾಯ ಅಷ್ಟೇ. ಆದರೂ
ಮಿನಿ/ಮಹಾ ಸಮರದ ಸಮ್ಮುಖದಲ್ಲಿ ಪಕ್ಷ ಹೊಸ face ನೊಂದಿಗೆ/ ಹೊಸ ಸಾರಥಿಯೊಂದಿಗೆ ಜನರ ಬಳಿ ಹೋಗುವುದು ಅನಿವಾರ್ಯವಾಗಿದೆ. ಆದರೆ ಈ ಹೊಸ ಸಾರಥಿಯದ್ದೇ ಪಕ್ಷಕ್ಕೆ ಸಮಸ್ಯೆಯಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೊಸಬರ ನೇಮಕ ಜೇನುಗೂಡಿಗೆ ಕಿಚ್ಚು ಇಟ್ಟಂತೆಯೇ.
ಆದರೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಪಕ್ಷ ತೊರೆದ ಮೇಲೆ ಮತ್ತು ಸ್ವತಃ ತಾವೇ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಮೇಲೆ 'ಇನ್ನು ನಾನೇ ಬಿಜೆಪಿ ಯಜಮಾನ' ಎಂದು ಹಾರಾಡುತ್ತಿದ್ದ ಸದಾನಂದ ಗೌಡರು ಇತ್ತೀಚೆಗೆ ತಳಕಚ್ಚಿದ್ದಾರೆ. ಇದಕ್ಕೆ ಮತ್ತದೇ 'ಅನಂತ ಕಾರಣ' ಎನ್ನಲಾಗಿದೆ. ಇದರಿಂದ ಶ್ಯಾನೆ ಬೇಜಾರು ಮಾಡಿಕೊಂಡಿದ್ದ ಸದಾನಂದರು ಮೊನ್ನೆ ಸದ್ದಿಲ್ಲದೆ ಆಸ್ಟ್ರೇಲಿಯಾಕ್ಕೆ ಹೋಗಿ ಸ್ವಲ್ಪ ಸಮಾಧಾನ ಮಾಡಿಕೊಂಡು ಬಂದಿದ್ದಾರೆ.
ಹಾಗಾದರೆ ಅವರನ್ನು ಬಿಟ್ಟು ಇವರನ್ನು ಬಿಟ್ಟು ಮುಂದೆ ಯಾರನ್ನು ಅಧ್ಯಕ್ಷರನ್ನಾಗಿ ಮಾಡುವುದಪ್ಪಾ? ಎಂಬುವುದು ಪಕ್ಷದ ವರಿಷ್ಠರಿಗೆ ದೊಡ್ಡ ತಲೆನೋವಾಗಿದೆ. ಆದರೂ ಈಗ ಸ್ಥಳೀಯ ಸಂಸ್ಥೆ ಚುನಾವಣೆಗಳು ಘೋಷಣೆಯಾಗಿರುವುದರಿಂದ ರಾಜ್ಯ ಬಿಜೆಪಿಗೆ ನೂತನ ರಾಜ್ಯಾಧ್ಯಕ್ಷರನ್ನು ನೇಮಿಸುವ ಅನಿವಾರ್ಯತೆ ಎದುರಾಗಿದೆ.
ಇದನ್ನು ಮನಗಂಡು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್ ಅವರು ಸದ್ಯದಲ್ಲೇ ಪಕ್ಷಕ್ಕೆ ಹೊಸ ಸಾರಥಿ ನೇಮಕಾತಿ ನಡೆಯಲಿದೆ ಎಂದಿದ್ದಾರೆ.
ಯಡಿಯೂರಪ್ಪ ಅವರು ಪಕ್ಷ ಬಿಟ್ಟು ಹೋಗಿರುವುದರಿಂದ ಉಂಟಾಗಿರುವ ನಷ್ಟವನ್ನು ತುಂಬುವುದರ ಬಗ್ಗೆ ಕಾರ್ಯತಂತ್ರಗಳನ್ನು ಹೆಣೆಯಲಾಗಿದೆ, ಈ ನಿಟ್ಟಿನಲ್ಲಿ ಪಕ್ಷದ ರಾಜ್ಯ ನಾಯಕರು, ವರಿಷ್ಠರು, ಕಾರ್ಯಕರ್ತರು ಕಾರ್ಯತತ್ಪರರಾಗಿದ್ದಾರೆ ಎಂದು ಸೂಕ್ಷ್ಮವಾಗಿ ಪಕ್ಷದ ಸ್ಥಿತಿಗತಿಯ ಬಗ್ಗೆ ಮಾತನಾಡಿದ್ದಾರೆ. ನೋಡಬೇಕು ಇನ್ನಾದರೂ ರಾಜ್ಯ ಬಿಜೆಪಿಗೆ ಹೊಸ ಅಧ್ಯಕ್ಷರ ನೇಮಕವಾಗುತ್ತದಾ?












Click it and Unblock the Notifications