ಬಿಜೆಪಿ ಪ್ರತ್ಯಸ್ತ್ರ: ಕೆಜೆಪಿ ಶಾಸಕರನ್ನು ಅನರ್ಹಗೊಳಿಸಿ

ಕೈಯಲ್ಲಿ ರಾಜೀನಾಮೆ ಪತ್ರಗಳನ್ನು ಹಿಡಿದುಕೊಂಡು ಕುಳಿತಿರುವ 12 ವಿಧಾನಸಭೆ ಸದಸ್ಯರ ವಿರುದ್ಧ ಅನರ್ಹತೆಯ ಅಸ್ತ್ರ ಝಳಪಿಸುವಂತೆ ಮೇಲ್ಮನೆ ಸದಸ್ಯ ಅಶ್ವತ್ಥ್ ನಾರಾಯಣ, ಸಾಗರ ಶಾಸಕ ಬೇಳೂರು ಗೋಪಾಲ ಕೃಷ್ಣ ಮತ್ತು ನೆಲಮಂಗಲ ಶಾಸಕ ನಾಗರಾಜ್ ಅವರು ಈ ದೂರು ನೀಡಿದ್ದಾರೆ. ಆದರೆ ಇದು ತಮ್ಮ ಮೂವರ ವೈಯಕ್ತಿಕ ನಿರ್ಧಾರವಾಗಿದ್ದು, ಪಕ್ಷದ ವತಿಯಿಂದ ಈ ದೂರು ನೀಡಿಲ್ಲ ಎಂದು ಬೇಳೂರು ಗೋಪಾಲಕೃಷ್ಣ ಅವರು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ಈ 12 ಮಂದಿಯೂ ಬಿಜೆಪಿ ಶಾಸಕರಾಗಿದ್ದು, ಅವರ ರಾಜೀನಾಮೆ ಪತ್ರಗಳನ್ನು ಅಂಗೀಕರಿಸದಂತೆಯೂ ಸ್ಪೀಕರ್ ಮೇಲೆ ಒತ್ತಡ ಹಾಕಿದ್ದಾರೆ. ಜತೆಗೆ ಕೆಜೆಪಿ ಸೇರುತ್ತಿರುವ ಮೇಲ್ಮನೆ ಸದಸ್ಯರ ವಿರುದ್ಧವೂ ಇದೇ ರೀತಿ ದೂರು ನೀಡುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.
ಈ ಮಧ್ಯೆ, ನಾಳೆ 11 ಗಂಟೆಗೆ ಸ್ಪೀಕರ್ ಬೋಪಯ್ಯ ಅವರನ್ನು ಭೇಟಿ ಮಾಡಿ, 12 ಮಂದಿ ಶಾಸಕರು ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ ಎಂದು ಮಾಜಿ ಸಚಿವ ಸಿಎಂ ಉದಾಸಿ ಇಂದು ಬೆಂಗಳೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.
ನಾಳೆ ರಾಜೀನಾಮೆ ನೀಡುವ ಬಗ್ಗೆ ಏನೆಲ್ಲ ಕಾರ್ಯತಂತ್ರಗಳನ್ನು ಅನುಸರಿಸಬೇಕು ಎನ್ನುವುದರ ಬಗ್ಗೆ ಉದಾಸಿ ಮತ್ತು ಯಡಿಯೂರಪ್ಪ ಅವರ ಮಧ್ಯೆ ಇಂದು ಬೆಳಗ್ಗೆ ಸುದೀರ್ಘ ಮಾತುಕತೆ ನಡೆಯಿತು. (ಪಿಟಿಐ)












Click it and Unblock the Notifications