ವಾಜಪೇಯಿ, ಬಿಎಸ್ವೈಗೆ ಹೋಲಿಕೆ ಮಾಡಿದ ಸಿಟಿ ರವಿ

ಬಿಜೆಪಿ ಬಿಟ್ಟು ಹೋಗಲು ಹವಣಿಸುತ್ತಿರುವ ಶಾಸಕ/ಸಚಿವರು ರಾಜೀನಾಮೆ ಪ್ರಸ್ತಾಪವನ್ನು ಮುಂದಿಡುತ್ತಿರುವುದು ಸಾಮಾನ್ಯ. ಆದರೆ ಬಿಜೆಪಿ ಮಂತ್ರಿಯೇ ತಾನಿನ್ನು ಸಚಿವನಾಗಿರೋದು ಕೇವಲ ಇಪ್ಪತ್ತೆಂಟೇ ದಿನ ಎಂದು ಘೋಷಿಸಿದ್ದಾರೆ.
ಹೀಗೆ ರಾಜೀನಾಮೆ ವಿಷಯವನ್ನು ಪ್ರಕಟಿಸಿದ ಉನ್ನತ ಶಿಕ್ಷಣ ಸಚಿವ ಸಿಟಿ ರವಿ ತನ್ಮೂಲಕ, ರಾಜ್ಯ ವಿಧಾನಸಭೆ ಚುನಾವಣೆ ಸನ್ನಿಹಿತವಾಗಿದೆ ಎಂಬ ಸುಳಿವನ್ನೂ ನೀಡಿದ್ದಾರೆ.
ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಸೋಮವಾರ ಮಾತನಾಡಿದ ಅವರು, ತಾವಿನ್ನು ಸಚಿವರಾಗಿರುವುದು 28 ದಿನವಷ್ಟೇ. ಸದ್ಯದಲ್ಲೇ ಚುನಾವಣಾ ವೇಳಾಪಟ್ಟಿ ಪ್ರಕಟಗೊಳ್ಳಲಿದೆ. ಅಷ್ಟರಲ್ಲಿ ಹೆಚ್ಚು ಒಳ್ಳೆಯ ಕೆಲಗಳನ್ನು ಮಾಡಬೇಕು ಎಂದು ಅವರು ಆಶಿಸಿದರು.
ಮೊದಲ ಬಾರಿಗೆ ಅಧಿಕಾರ ಹಿಡಿದಿದ್ದರಿಂದ ಅನುಭವದ ಕೊರತೆ ಎದುರಾಗಿತ್ತು. ಇದರಿಂದ ಸಣ್ಣಪುಟ್ಟ ತಪ್ಪುಗಳಾಗಿವೆ. ಆದರೆ ನೂರುಪಟ್ಟು ಒಳ್ಳೆಯ ಕೆಲಸಗಳಾಗಿವೆ. ಈ ಕೆಲಸಗಳನ್ನು ಮುಂದಿಟ್ಟುಕೊಂಡು ಮತಯಾಚಿಸಲು ಮುಂದಾಗಬೇಕು ಎಂದು ರವಿ ಹೇಳಿದರು.
ವಾಜಪೇಯಿ, ಯಡಿಯೂರಪ್ಪಗೆ ಹೋಲಿಕೆ:
ಬಿಜೆಪಿ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರು ಅನಾಮತ್ತು 40 ವರ್ಷ ಕಾಲ ವಿರೋಧ ಪಕ್ಷದಲ್ಲೇ ಕಾರ್ಯ ನಿರ್ವಹಿಸಿದರು. ಅಧಿಕಾರ ಕೊಡಿಸಲು ಅಥವಾ ಅಧಿಕಾರ ಹಿಡಿಯಲು ಅವರೆಂದಿಗೂ ಮನಸ್ಸು ಮಾಡಲಿಲ್ಲ. ಅಧಿಕಾರ ದಕ್ಕಿಸಿಕೊಳ್ಳಲು ಅವರೆಂದೂ ಅನ್ಯಮಾರ್ಗ ಹಿಡಿಯಲಿಲ್ಲ. ರಾಜ ಮಾರ್ಗದಲ್ಲಿಯೇ ನಡೆದರು ಎಂದು ಹೆಸರು ಹೇಳದೆಯೇ ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದ ಯಡಿಯೂರಪ್ಪಗೆ ಸಚಿವ ರವಿ ಕುಟುಕಿದರು.












Click it and Unblock the Notifications