'ದಮ್ಮಿದ್ರೆ ನನ್ನ ವಿರುದ್ಧ ವರುಣಾ ಕ್ಷೇತ್ರದಲ್ಲಿ ನೀವೇ ನಿಲ್ಲಿ'

'ವರುಣಾದಲ್ಲಿ ಈ ಬಾರಿ ಸೋಲುತ್ತೇನೆ. ಬೇರೆ ಯಾವುದಾದರೂ ಕ್ಷೇತ್ರ ನೋಡಿಕೊಳ್ಳಬೇಕು' ಎಂದು ಆತ್ಮೀಯ ವಲಯದಲ್ಲಿ ಹೇಳಿಕೊಳ್ಳುತ್ತಿದ್ದ ಸಿದ್ದರಾಮಯ್ಯನವರು ಹೀಗೆ ಇದ್ದಕ್ಕಿದ್ದಂತೆ ಸವಾಲ್ ಹಾಕಿರುವುದು ಯಾಕಪ್ಪಾ ಎಂದು ನೋಡಿದಾಗ...
ಅತ್ತ ಸನ್ಮಾನ್ಯ ಯಡಿಯೂರಪ್ಪನವರು ಮೈಸೂರು ಭಾಗದಲ್ಲಿ ತಳವೂರಿದ್ದು ಇಂದು ಬೆಳಗ್ಗೆ ನಂಜನಗೂಡಿನಲ್ಲಿ ಕೆಜೆಪಿ ಕಚೇರಿಯನ್ನು ಉದ್ಘಾಟಿಸಿದರು. ಆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ನೇರವಾಗಿ ಸಿದ್ದರಾಮಯ್ಯನವರತ್ತ ಬಾಣ ಬಿಟ್ಟಿದ್ದರು.
'ಸಿದ್ದರಾಮಯ್ಯನವರೇ ನಿಮ್ಮನ್ನು ನಾನು ಚೆನ್ನಾಗಿ ಬಲ್ಲೆ. ಆದ್ದರಿಂದ ನಿಮ್ಮ ಹಿತೈಷಿಯಾಗಿ ಹೇಳುತ್ತಿದ್ದೇನೆ. ಈ ಬಾರಿ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಬೇಡಿ. ಬೇರೆ ಯಾವುದಾದರೂ ಕ್ಷೇತ್ರವನ್ನು ಈಗಲೇ ಆರಿಸಿಕೊಳ್ಳಿ. ಏಕೆಂದರೆ ನಾಳೆ ದಿನ ನೀವು ಸೋಲುವುದನ್ನು ನೋಡಲು ನನಗೆ ಇಷ್ಟವಿಲ್ಲ'.
'ಆದ್ದರಿಂದ ನಿಮ್ಮ ಫ್ರೆಂಡ್ ಆಗಿ ಹೇಳುತ್ತಿದ್ದೇನೆ. ವರುಣಾದಿಂದ ಕಣಕ್ಕೆ ಇಳಿಯಬೇಡಿ. ಏಕೆಂದರೆ ಆ ಕ್ಷೇತ್ರದಲ್ಲಿ ಕಾಪು ಸಿದ್ದಲಿಂಗಸ್ವಾಮಿ ಅವರು ನಿಲ್ಲುತ್ತಿದ್ದಾರೆ. ಅವರು ಗೆಲ್ಲುವುದು ನೂರಕ್ಕೆ ನೂರರಷ್ಟು ಖಚಿತ. ಹಾಗಾಗಿ, ನೀವು ಅಲ್ಲಿ ನಿಂತು, ಸೋಲುವುದನ್ನು ನೋಡಲು ನನಗೆ ಇಷ್ಟವಿಲ್ಲ' ಎಂದು ಅತ್ಯಂತ ಶಾಂತಚಿತ್ತದಿಂದ ಸಿದ್ದು ಅವರತ್ತ ಯಡಿಯೂರಪ್ಪ ಮಾತಿನ ಬಾಣ ನೆಟ್ಟಿದ್ದರು.
ಇದು ಕಿವಿಗೆ ಬಿದ್ದಿದ್ದೇ ತಡ. 'ಇಡೀ ವರುಣಾ ಊರಿಗೆಲ್ಲ ಗೊತ್ತಿರುವುದನ್ನು ಈ ಯಡಿಯೂರಪ್ಪ ಬಂದು ನನ್ನ ಕಿವಿಯಲ್ಲಿ ಹೇಳುವುದು ಏನು?' ಅಂತ ಕನಲಿದವರೇ ಕೊಪ್ಪಳದಿಂದ ಸಿದ್ದರಾಮಯ್ಯ ಸವಾಲು ಹಾಕೇ ಬಿಟ್ಟರು. ಈ ಮಧ್ಯೆ, ವರುಣಾ ಮತದಾರರು 'ಯಾರನ್ನು ಗೆಲ್ಲಿಸಬೇಕು ಎಂಬುದನ್ನು ನಾವೀಗಾಗಲೇ ನಿರ್ಧರಿಸಿಯಾಗಿದೆ. ಇಬ್ಬರೂ ಬನ್ನಿ' ಎಂದು ಪಂಥಾಹ್ವಾನ ನೀಡಿದ್ದಾರೆ.












Click it and Unblock the Notifications