ಶ್ರೀಕಂಠದತ್ತ ಒಡೆಯರ್ ಗೆ ಯಡಿಯೂರಪ್ಪ ದೊಡ್ಡ ಗಾಳ
ಬೆಂಗಳೂರು ಅರಮನೆಯಲ್ಲಿ ಶ್ರೀಕಂಠದತ್ತ ಒಡೆಯರ್ ಅವರನ್ನು ಭೇಟಿ ಮಾಡಿದ ಮಾಜಿ ಸಿಎಂ ಯಡಿಯೂರಪ್ಪ ಅವರು ಮೂರತು ತಾಸು ಕಾಲ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಸುದೀರ್ಘ ಮಾತುಕತೆ ವೇಳೆ ತಮ್ಮ ನೂತನ ಪಕ್ಷ KJPಗೆ ಸೇರಿಕೊಳ್ಳುವಂತೆ ಒಡೆಯರ್ ಗೆ ಆಹ್ವಾನ ನೀಡಿದ್ದಾರೆ. ಜತೆಗೆ ಹಾವೇರಿಯಲ್ಲಿ ಡಿ. 9ರಂದು ನಡೆಯಲಿರುವ ಮಹತ್ವದ ಸಮಾವೇಶದಲ್ಲಿ ಖುದ್ದಾಗಿ ಪಾಳ್ಗೊಳ್ಳುವಂತೆಯೂ ಆಮಂತ್ರಣ ನೀಡಿದ್ದಾರೆ.
ಯಡಿಯೂರಪ್ಪ ಆಹ್ವಾನಕ್ಕೆ ಶ್ರೀಕಂಠದತ್ತ ಒಡೆಯರ್ ಅವರು ಪೂರಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಕಾಂಗ್ರೆಸ್ ನಲ್ಲಿರುವ ಅವರು ಈ ಹಿಂದೆ ಕೆಲ ಕಾಲ ಬಿಜೆಪಿಯಲ್ಲಿ ಕಾಣಿಸಿಕೊಂಡಿದ್ದರು.
ಅತ್ತ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದ ಬಳಿಕ ಒಡೆಯರ್ ಪಕ್ಷದಲ್ಲಿ ಮೂಲೆಗುಂಪಾಗಿದ್ದಾರೆ. ಇದನ್ನೇ ಪ್ರಧಾನವಾಗಿಸಿಕೊಂಡು ಒಡೆಯರ್ ಅವರನ್ನು ತಮ್ಮ ಪಕ್ಷಕ್ಕೆ ಸೆಳೆಯಲು ಯಡಿಯೂರಪ್ಪ ಪ್ರಯತ್ನಪಟ್ಟಿದ್ದಾರೆ ಎನ್ನಲಾಗಿದೆ.
ಮೈಸೂರು ಪ್ರಾಂತ್ಯದಲ್ಲಿ ಪ್ರಬಲವಾಗಿರುವ ನಾಯಕ ಸಮುದಾಯ ಈಗಲೂ ಯದು ವಂಶಸ್ಥರ ಬಗ್ಗೆ ವಿಶ್ವಾಸವಿಟ್ಟುಕೊಂಡಿದೆ. ಅದಕ್ಕಾಗಿಯೇ ಶ್ರೀಕಂಠದತ್ತರನ್ನು ಸೆಳೆಯುವ ಮೂಲಕ ಸಿದ್ದರಾಮಯ್ಯ ಪ್ರಾಬಲ್ಯವನ್ನು ಕುಗ್ಗಿಸುವುದು ಯಡಿಯೂರಪ್ಪನವರ ಉದ್ದೇಶವಾಗಿದೆ. ಸಿದ್ದುಗೆ ಸರಿಯಾಗಿ ಟಾಂಗ್ ನೀಡಲು ಹವಣಿಸುತ್ತಿರುವ ಯಡಿಯೂರಪ್ಪನವರು ತಮ್ಮ ಪರಮಾಪ್ತ ಕಾಪು ಸಿದ್ದಲಿಂಗಸ್ವಾಮಿ ಮೂಲಕ ಸಿದ್ದರಾಮಯ್ಯ ಅವರನ್ನು ಸೋಲಿಸಲು ಈಗಾಗಲೇ ಸಜ್ಜಾಗಿದ್ದಾರೆ.